ಸುಳ್ಳಾದ ಮೈಲಾರ ಲಿಂಗೇಶ್ವರ ಕಾರ್ಣಿಕ: ಧರ್ಮದರ್ಶಿ ಉಚ್ಚಾಟನೆ?
ವಿಜಯನಗರ, ಮೇ 12: ಜಿಲ್ಲೆಯ ಹೂವಿನಹಡಗಲಿಯಲ್ಲಿರುವ ಐತಿಹಾಸಿಕ ಮೈಲಾರ ಲಿಂಗೇಶ್ವರನ ದೇವಾಲಯದಲ್ಲಿ ನುಡಿಯಲಾಗಿದ್ದ ಭವಿಷ್ಯ ಸುಳ್ಳಾದ ಹಿನ್ನಲೆಯಲ್ಲಿ ಧರ್ಮದರ್ಶಿಗಳನ್ನು ಉಚ್ಚಾಟಿಸಬೇಕೆನ್ನುವ ಆಗ್ರಹ ಜೋರಾಗುತ್ತಿದೆ.
ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಮತ್ತು ವಿಜಯದಶಮಿಯ ವೇಳೆ ರಾಜ್ಯದ ಹಲವಾರು ದೇವಾಲಯಗಳಲ್ಲಿ ಕಾರ್ಣಿಕ ಹೇಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಭಕ್ತರು ಇದರ ಮೇಲೆ ತುಂಬಾ ನಂಬಿಕೆ ಇಟ್ಟುಕೊಳ್ಳುವುದರಿಂದ ಇದರ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು.
ಇದೇ ವರ್ಷದ ಫೆಬ್ರವರಿಯಲ್ಲಿ ಕಾರ್ಣಿಕವನ್ನು ನುಡಿಯಲಾಗಿತ್ತು. "ಮಳೆ ಬೆಳೆ ಸಂಪಾಯಿತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದರು. ಇದೇ ರೀತಿ, ರಾಜಕೀಯವಾಗಿ ರಾಜ್ಯದ ನೈಋತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರದ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದರು.
ಇದರ ಆಧಾರದ ಮೇಲೆ ರಾಜ್ಯದ ನೈಋತ್ಯ ಭಾಗದ ನಾಯಕರು ಯಾರು ಎನ್ನುವ ಗಹನವಾದ ಚರ್ಚೆ ಆರಂಭವಾಗಿತ್ತು. ಅದಕ್ಕೂ ಮುನ್ನ ಧರ್ಮದರ್ಶಿಗಳು ನೀಡಿದ್ದ ಭವಿಷ್ಯ ಸುಳ್ಳಾಗಿರುವ ಕಾರಣಕ್ಕಾಗಿ ಅವರು ದೇವಾಲಯ ಬಿಟ್ಟು ಹೋಗಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಏನದು ಸುಳ್ಳಾದ ಭವಿಷ್ಯ?
ಬಿಲ್ಲನ್ನೇರಿ ರಾಮಪ್ಪ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದರು
'ಮಳೆ ಬೆಳೆ ಸಂಪಾಯಿತಲೇ ಪರಾಕ್' ಬಿಲ್ಲನ್ನೇರಿ ರಾಮಪ್ಪ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದರು. ಇದನ್ನು ಧರ್ಮದರ್ಶಿಗಳಾದ ವೆಂಕಪ್ಪಯ್ಯ ಒಡೆಯರ್, "ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ. ರೈತರ ಬಾಳು ಹಸನಾಗಲಿದೆ. ರಾಜ್ಯದ ನೈಋತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ" ಎಂದು ವಿಶ್ಲೇಷಿದ್ದರು. ಇದರ ಜೊತೆಗೆ "ಗಡ್ಡಧಾರಿಯೊಬ್ಬ ಆರು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ"ಎಂದೂ ಧರ್ಮದರ್ಶಿಗಳು ಹೇಳಿದ್ದರು.
ಡಿ.ಕೆ.ಶಿವಕುಮಾರ್ ಎಂದರೆ, ಇನ್ನಷ್ಟು ಜನ ಸಿ.ಟಿ.ರವಿ ಹೆಸರನ್ನು ಉಲ್ಲೇಖಿಸುತ್ತಿದ್ದರು
ಆ ಗಡ್ಡಧಾರಿ ಯಾರು ಎನ್ನುವ ಚರ್ಚೆ ನಡೆಯುತ್ತಿತ್ತು. ಕೆಲವರು ಡಿ.ಕೆ.ಶಿವಕುಮಾರ್ ಎಂದರೆ, ಇನ್ನಷ್ಟು ಜನ ಸಿ.ಟಿ.ರವಿ ಹೆಸರನ್ನು ಉಲ್ಲೇಖಿಸುತ್ತಿದ್ದರು. ಈ ಭವಿಷ್ಯ ಸುಳ್ಲಾದ ಹಿನ್ನಲೆಯಲ್ಲಿ ಧರ್ಮದರ್ಶಿಗಳಾದ ವೆಂಕಪ್ಪಯ್ಯ ಒಡೆಯರ್ ಅವರನ್ನು ದೇವಾಲಯದಿಂದ ಉಚ್ಚಾಟಿಸಬೇಕೆಂದು ಗ್ರಾಮಸ್ಥರು ಹಾಗೂ ದೇವಾಲಯದ ಭಕ್ತರು ತಹಶೀಲ್ದಾರ್ ಅವರಿಗೆ ಲಿಖಿತ ಮನವಿಯನ್ನು ನೀಡಿದ್ದಾರೆ.
ಮೈಲಾರ ಲಿಂಗೇಶ್ವರನ ಕಾರ್ಣಿಕಕ್ಕೆ ಇತಿಹಾಸವಿದೆ
ಮೈಲಾರ ಲಿಂಗೇಶ್ವರನ ಕಾರ್ಣಿಕಕ್ಕೆ ಇತಿಹಾಸವಿದೆ, ಬರೀ ರಾಜ್ಯದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆಯನ್ನು ಪಡೆದಿದೆ. ಇಲ್ಲಿ ನುಡಿಯಲಾಗುವ ಕಾರ್ಣಿಕದ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಧರ್ಮದರ್ಶಿಗಳು ದೈವವಾಣಿಯನ್ನು ದುರುಪಯೋಗ ಪಡಿಸಿಕೊಂಡು ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಮೂಡಿಸಿದ್ದಾರೆ ಎಂದು ಗ್ರಾಮಸ್ಥರು ಸಿಟ್ಟಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ
ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ದೇವಾಲಯದ ಪರಂಪರೆಗೆ ಕಳಂಕ ತಂದಿದ್ದಾರೆ. ಅವರನ್ನು ಈ ಕೂಡಲೇ ಉಚ್ಚಾಟಿಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಗ್ರಾಮಸ್ಥರು ಮತ್ತು ಭಕ್ತರು ಎಚ್ಚರಿಕೆಯನ್ನು ನೀಡಿದ್ದಾರೆ. ಧರ್ಮದರ್ಶಿಗಳು ಈ ಭವಿಷ್ಯ ನುಡಿದಿದ್ದ ಕೆಲವು ದಿನಗಳ ಹಿಂದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಳ್ಳಿ ಹೆಲಿಕಾಪ್ಟರ್ ನೀಡಿದ್ದರು. ಅಲ್ಲದೇ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಜೊತೆ ಮಾತುಕತೆ ನಡೆಸಿದ್ದರು.
Recommended Video