ಕಾರಣಿಕಕ್ಕೂ ಮುನ್ನ ಅಪಶಕುನ: ಮುನಿಸಿಕೊಂಡ ಮೈಲಾರಲಿಂಗೇಶ್ವರ? ಭಕ್ತರಲ್ಲಿ ಶುರುವಾಯ್ತು ಆತಂಕ!
ಬೆಂಗಳೂರು, ಮಾ. 01: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬಹುತೇಕ ಜಾತ್ರೆಗಳಿಗೆ ನಿಷೇಧ ಹೇರಲಾಗಿದೆ. ಅದೇ ರೀತಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಅತಿದೊಡ್ಡ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಜಾತ್ರೆಗೂ ಭಕ್ತರು ಬರದಂತೆ ನಿಷೇಧ ಹಾಕಲಾಗಿದೆ. ಸ್ಥಳೀಯರು ಮಾತ್ರ ಸಾಂಕೇತಿಕವಾಗಿ ಜಾತ್ರೆ ಸಮಯದಲ್ಲಿ ದೇವಸ್ಥಾನಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಎಲ್ಲ ಕಡೆಗಳಿಂದಲೂ ಪ್ರತಿವರ್ಷ ಭಕ್ತರ ದಂಡು ಹರಿದು ಬರುತ್ತಿತ್ತು. ಆದರೆ ಈ ವರ್ಷ ಮಾತ್ರ ಜಾತ್ರೆಗೆ ಪರಸ್ಥಳದಿಂದ ಭಕ್ತರು ಬರುವುದನ್ನು ಬಳ್ಳಾರಿ ಜಿಲ್ಲಾಡಳಿತ (ಇನ್ನು ನೂತನ ವಿಜಯನಗರ ಜಿಲ್ಲೆಗೆ ಡಿಸಿ ನೇಮಕವಾಗಿಲ್ಲ) ನಿಷೇಧಿಸಿದೆ. ಜಿಲ್ಲಾಡಳಿತದ ನಿರ್ಧಾರಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಜಾತ್ರೆಗೆ ತೆರಳಲು ಅವಕಾಶ ಕೊಡಬೇಕೆಂದು ಪ್ರತಿಭಟನೆಯನ್ನೂ ಮಾಡಿದ್ದರು. ಕೊರೊನಾ ವೈರಸ್ನಿಂದಾಗಿ ಭಕ್ತರ ಬೇಡಿಕೆಯನ್ನು ಜಿಲ್ಲಾಡಳಿತ ಒಪ್ಪಿರಲಿಲ್ಲ. ಹೀಗಾಗಿ ಅಸಮಾಧಾನದಿಂದಲೇ ಭಕ್ತರು ತಮ್ಮೂರಿಗೆ ಹಿಂದಿರುಗಿದ್ದರು.
ಈ ಬಾರಿ ಮೈಲಾರ ಕಾರ್ಣಿಕ ಅನುಮಾನ: ಕಳೆದ ವರ್ಷ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?
ಸ್ಥಳೀಯ ಜನರು ಸಾಂಕೇತಿಕವಾಗಿ ಜಾತ್ರೆ ಹಾಗೂ ಕಾರಣಿಕದಲ್ಲಿ ಭಾಗವಹಿಸಿದ್ದರು. ಆದರೆ ಆರಂಭದಲ್ಲಿಯೇ ದೇವಸ್ಥಾನದ ಆವರಣದಲ್ಲಿ ಆಗಿರುವ ಅವಘಡದಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ. ಮೈಲಾರಲಿಂಗೇಶ್ವರ ಮುನಿಸಿಕೊಂಡಿರಬಹುದಾ? ಎಂಬ ಚರ್ಚೆ ಭಕ್ತರಲ್ಲಿ ಆಗುತ್ತಿದೆ. ಅಷ್ಟಕ್ಕೂ ಕಾರ್ಣಿಕೋತ್ಸವದ ದಿನ ಮೈಲಾರದಲ್ಲಿ ನಡೆದ ಅವಘಡವೇನು?
ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?
ದೇವಸ್ಥಾನದ ಎದುರು ನಡೆದ ಅವಘಡ
ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಉತ್ಸವ ಮೂರ್ತಿ ಹೊರಡುವಾಗ ಶಾರ್ಟ್ಸರ್ಕ್ಯೂಟ್ನಿಂದ ದೇವಸ್ಥಾನದ ಮುಂಭಾಗದಲ್ಲಿರುವ ಪಾದಗಟ್ಟಿಯ ತ್ರಿಶೂಲ ಮುರಿದು ಬಿದ್ದಿದೆ. ಅದರಿಂದ ಜಾತ್ರೆ ಮುಗಿಯುವ ಮೊದಲೇ ಅಪಶಕುನವಾಯಿತಾ? ಎಂಬ ಚರ್ಚೆಯನ್ನು ಭಕ್ತರು ಮಾಡಿದ್ದರು. ಹೀಗಾಗಿ ಮೈಲಾರ ಕಾರಣಿಕ ಆಗುವವರೆಗೂ ಭಕ್ತರ ಮನದಲ್ಲಿ ಆತಂಕದ ಛಾಯೆ ಮೂಡಿತ್ತು.
ಮೌನ ಸವಾರಿಗೂ ಮೊದಲು
ದೇವಸ್ಥಾನದಿಂದ ಡೆಂಕನಮರಡಿಗೆ ಮೌನ ಸವಾರಿ ನಡೆಯುವಾಗ ಅವಘಡ ಸಂಭವಿಸಿದೆ. ಮೈಲಾರ ಜಾತ್ರೆಗೆ ಭಕ್ತರು ಕ್ಷೇತ್ರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಮೈಲಾರಲಿಂಗಸ್ವಾಮಿ ಮುನಿಸಿಕೊಂಡಿರಬಹುದಾ? ಎಂಬ ಚರ್ಚೆಗಳು ಭಕ್ತರಲ್ಲಿ ನಡೆಯುತ್ತಿವೆ. ಮೈಲಾರಕ್ಕೆ ತೆರಳದಂತೆ ಭಕ್ತರನ್ನು ತಡೆದಿದ್ದ ಪೊಲೀಸರು ಹಿಂದಕ್ಕೆ ಕಳುಹಿಸಿದ್ದರು.
ಇತಿಹಾಸದಲ್ಲಿ ಮೊದಲ ಬಾರಿ
ಪ್ರತಿ ಸಲವೂ ಲಕ್ಷಾಂತರ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಭಕ್ತರಿಲ್ಲದೆ ಜಾತ್ರೆ ಮಾಡಿರುವುದು ಇತಿಹಾಸದಲ್ಲಿಯೇ ಮೊದಲಾಗಿದೆ. ದೊಡ್ಡ ದೊಡ್ಡ ಜಾತ್ರೆಗೆ ಅವಕಾಶವನ್ನು ಸರ್ಕಾರ ನೀಡಿತ್ತು, ಆದರೆ ಮೈಲಾರ ಜಾತ್ರೆಗೆ ಭಕ್ತರು ಬರದಂತೆ ಜಿಲ್ಲಾಡಳಿತ ಆದೇಶ ಮಾಡಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಭಕ್ತರು ಪ್ರತಿಭಟನೆ ಮಾಡಿ ಜಾತ್ರೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಈ ಘಟನೆಯಿಂದ ಭಕ್ತರು ಹಲವರು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು.
ಮೂರು ಭಾಗ ಆದಿತಲೇ ಪರಾಕ್
ಪಾದಗಟ್ಟಿಯ ತ್ರಿಶೂಲ ಮುರಿದು ಬಿದ್ದ ಅವಘಡದ ಆತಂಕದ ಮಧ್ಯೆ ಈ ವರ್ಷದ ಕಾರ್ಣಿಕವೂ ಆಗಿದೆ. ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್ ಎಂದು ರಾಮಪ್ಪ ಗೊರವಯ್ಯ ನಾಡಿನ ಭವಿಷ್ಯ ನುಡಿದಿದ್ದಾರೆ. ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್ ಎಂದರೆ ನಾಡಿನ ಮೂರು ಭಾಗದಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿದೆ. ಆದರೆ ಉಳಿದ ಒಂದು ಭಾಗದಲ್ಲಿ ಮಳೆ-ಬೆಳೆಯ ಸಮಸ್ಯೆ ಆಗಲಿದೆ ಎಂದು ಭಕ್ತರು ಭವಿಷ್ಯವನ್ನು ಅರ್ಥೈಸಿಕೊಂಡಿದ್ದಾರೆ.
ಜೊತೆಗೆ ರಾಜಕೀಯವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಮುನ್ನುಡಿ ಆಗಲಿದೆ. ಈಗಿನಿಂದಲೇ ಸಮ್ಮಿಶ್ರ ಸರ್ಕಾರ ರಚಿಸಲು ರಾಜಕೀಯ ಪಕ್ಷಗಳು ತಯಾರಿ ಮಾಡುತ್ತವೆ ಎಂಬರ್ಥ ಎಂದು ಭಕ್ತರು ಚರ್ಚೆ ಆರಂಭಿಸಿದ್ದಾರೆ.