ರಾಜಕೀಯ ಬಿಕ್ಕಟ್ಟಿಗೆ ದೇವೇಗೌಡರು ಬಳಸಿದ ಪಾಶುಪತಾಸ್ತ್ರ ಯಶಸ್ವಿಯಾಯಿತೆ?
ಬೆಂಗಳೂರು, ಸೆ.24: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ರಾಜಕೀಯ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ದ್ರೋಣಾಚಾರ್ಯ ಎಚ್ಡಿ ದೇವೇಗೌಡರು ಕೊಟ್ಟ ಪಾಶುಪತಾಸ್ತ್ರ ಯಶಸ್ವಿಯಾಗಿದ್ದು ಎದುರಾಳಿಪಡೆಯನ್ನು ಎರಡು ಹೆಜ್ಜೆ ಹಿಂದಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲನೇ ಹೆಜ್ಜೆ ಆಪರೇಷನ್ ಕಮಲದಿಂದ ಪಾರುಮಾಡಿದ್ದು, ಎರಡನೇ ಹೆಜ್ಜೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನೇ ಕಣದಿಂದ ಓಡಿಸಿದ್ದು, ಇಂತಹ ರಾಜಕೀಯ ತಂತ್ರಗಾರಿಕೆಯನ್ನು ಮಾಜಿ ಪ್ರಧಾನಮಂತ್ರಿ ಹಾಗೂ ತಂದೆ ದೇವೇಗೌಡರು ಕಳೆದ ವಾರವೇ ಮುಖ್ಯಮಂತ್ರಿ ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಇರಿಸಿದ್ದರು ಎನ್ನಲಾಗಿದೆ.
ಕಳೆದ ಗುರುವಾರ ಮಧ್ಯರಾತ್ರಿ ಕಾಂಗ್ರೆಸ್ ನ 7 ಮಂದಿ ಶಾಸಕರು ರೆಸಾರ್ಟ್ ಗೆ ವಲಸೆ ಹೋಗುತ್ತಾರೆ ಎಂಬ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ನೇರವಾಗಿ ದೇವೇಗೌಡರ ಬಳಿ ಕುಮಾರಸ್ವಾಮಿ ತೆರಳಿದ್ದರು.
ವಿಧಾನ ಪರಿಷತ್ ಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ
ಸರಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಈ ವೇಳೆ ದೇವೇಗೌಡರು ನೀಡಿದ್ದ ಸಲಹೆ ಆಧರಿಸಿ ಕುಮಾರಸ್ವಾಮಿ ನಡೆಸಿದ ಎಲ್ಲಾ ಪ್ರಯತ್ನಗಳು ಅಂತಿಮವಾಗಿ ಫಲಿಸಿದ್ದು ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷ ಕೇವಲ ಆಪರೇಷನ್ ಕಮಲ ಕೈಬಿಡುವುದಲ್ಲದೆ ಪರಿಷತ್ ಚುನಾವಣಾ ಕಣದಿಂದಲೂ ದೂರ ಹೋಗುವಂತಾಗಿದೆ.
ಅಷ್ಟಕ್ಕೂ ಕುಮಾರಸ್ವಾಮಿ ಮಾಡಿದ್ದೇನು?
ದೇವೇಗೌಡರು ನೀಡಿದ ಸಲಹೆ ಮೇರೆಗೆ ನೇರವಾಗಿ ಕಣಕ್ಕಿಳಿದ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ಆಯಕಟ್ಟಿನ ಸ್ಥಳದಲ್ಲಿರುವ ಎಲ್ಲಾ ಮುಖಂಡರೊಂದಿಗೆ ತಮ್ಮ ಎಲ್ಲ ಹಿಂದಿನ ವೈಶಮ್ಯ ಮರೆತು ನೇರ ಸಂಪರ್ಕ ಸಾಧಿಸಿದರು. ತಮ್ಮ ರಾಜಕೀಯ ಬದ್ಧ ಎದುರಾಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ನಿನ್ನೆ-ಮೊನ್ನೆ ರಾಜಕೀಯದಲ್ಲಿ ಕಣ್ಣು ತೆರೆದ ಕಿರಿಯ ನಾಯಕರ ತನಕ ಎಲ್ಲರೊಂದಿಗೆ ನೇರವಾಗಿ ಮಾತನಾಡಿದರು.
ಅಷ್ಟೇ ಅಲ್ಲ ಸಿಎಂ ಆದಮೇಲೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಇದುವರೆಗೂ ಕಾಲಿಡದ ಕುಮಾರಸ್ವಾಮಿ ಆಹ್ವಾನವಿಲ್ಲದೆ ನೇರವಾಹಿ ತಾವೇ ಕಾವೇರಿಗೆ ಹೋದರು. ಅಲ್ಲಿ ಸಿದ್ದರಾಮಯ್ಯ ಅವರ ಜೊತೆ ಮಧ್ಯಾಹ್ನದ ಊಟವನ್ನೂ ಸವಿದರು. ಆ ಮೂಲಕ ಸಿದ್ದರಾಮಯ್ಯ ತೆರೆಯ ಹಿಂದೆ ನಡೆಸುತ್ತಿದ್ದಾರೆ ಎನ್ನಲಾದ ಷಡ್ಯಂತ್ರ ಸುಳ್ಳು ಎನ್ನುವುದನ್ನು ಪಕ್ಷದ ಒಳಗಿನ ಹಾಗೂ ಪಕ್ಷದ ಹೊರಗಿನ ಶಾಸಕರಿಗೆ ರವಾನಿಸಿದರು.
ಅ.3ರಂದು ವಿಧಾನಪರಿಷತ್ ಚುನಾವಣೆ, ಅಂಕಿ-ಅಂಶಗಳು
ಜಾರಕಿಹೊಳಿ ಸಹೋದರರೊಂದಿಗೆ ನೇರ ಸಂಪರ್ಕ
ಇಡೀ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿಗೆ ಕಾರಣವಾದ ಜಾರಕಿಹೊಳಿ ಸಹೋದರರನ್ನು ಸಿಎಂ ನೇರವಾಗಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಅವರ ಗೆಲುವಿನ ಮತ್ತೊಂದು ಗುಟ್ಟು, ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಸಹೋದರರಲ್ಲಿ ಅತ್ಯಂತ ಪ್ರಬಲವಾದ ಸತೀಶ್ ಜಾರಕಿಹೊಳಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿಲ್ಲ ಎಂಬ ವಿಷಯವನ್ನರಿತ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಕಾಯದೆ ಸತೀಶ್ ಜಾರಕಿಹೊಳಿ ಬಳಿ ತೆರಳಿದರು. ಅವರನ್ನು ಹೇಗೆ ಸಮಾಧಾನಪಡಿಸಬೇಕೆಂದು ಅರಿತಿದ್ದ ಕುಮಾರಸ್ವಾಮಿ ಆರಂಭಿಕವಾಗಿ ರಮೇಶ್ ಜಾರಕಿಹೊಳಿ ಅವರ ಬಳಿ ಮಾತನಾಡಿದರು. ರಮೇಶ್ ಜಾರಕಿಹೊಳಿ ಮೂಲಕವೇ ದೂರವಾಣಿ ಮೂಲಕ ಸತೀಶ್ ಜಾರಿಹೊಳಿ ಜತೆಗೂ ಮಾತನಾಡಿ ಅವರಿಗಿರುವ ಅಸಲಿ ಅಸಮಾಧಾನವನ್ನು ಕಾಲಾಂತರದಲ್ಲಿ ಬಗೆಹರಿಸುವ ಉಪಾಯವನ್ನು ಹೇಳಿಕೊಟ್ಟರು ಎನ್ನಲಾಗುತ್ತಿದೆ. ಇದಕ್ಕೆ ಮನಸೋತ ಜಾರಕಿಹೊಳಿ ಸಹೋದರರು ನಮಗೇನು ಸಮಸ್ಯೆಯೇ ಇಲ್ಲ ಎಲ್ಲವೂ ಬಗೆಹರಿದಿದೆ ಎಂದು ಬಹಿರಂಗವಾಗಿ ಮಾತನಾಡಲು ಆರಂಭಿಸಿದರು. ಇದು ಕುಮಾರಸ್ವಾಮಿಗೆ ಸಿಕ್ಕ ಮತ್ತೊಂದು ಜಯ.
ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ದೈವಸನ್ನಿಧಿಗೆ ಹೋದ ಸಿಎಂ, ಭಿನ್ನರ ಆತ್ಮವಿಶ್ವಾಸಕ್ಕೆ ಏಟು ಕೊಟ್ಟರು
ಒಂದೆಡೆ ಭಿನ್ನಮತೀಯ ಶಾಸಕರು ರೆಸಾರ್ಟ್ಗೆ ಹೋಗುತ್ತಿದ್ದಾರೆ ಎನ್ನುವಾಗಲೇ ತಮ್ಮ ಆರಾಧ್ಯ ದೈವ ಶೃಂಗೇರಿ ಶಾರದಾಂಬೆಗೆ ತೆರಳಿದ ಕುಮಾರಸ್ವಾಮಿ, ಮೂಂಬೈಗೆ ಹೋದವರು ಹೋಗಲಿ, ಕೆಲವರನ್ನು ನಾನೇ ಕಳುಹಿಸಿದ್ದೇನೆ ಎನ್ನುವ ಮೂಲಕ ಬಂಡಾಯದ ಪಾಳಯದಲ್ಲೇ ತಮ್ಮ ಬಾಕ್ಮೀದಾರರಿದ್ದಾರೆ ಎನ್ನುವ ರೀತಿಯಲ್ಲಿ ಹೊಸ ಬಾಂಬ್ ಎಸೆದರು.
ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತೆಂದರೆ ಭಿನ್ನಮತೀಯ ಶಾಸಕರು ತಮಗೆ ತಾವೇ ಒಬ್ಬರನ್ನೊಬ್ಬರು ನಂಬಂದಂತಾದರು. ಒಂದು ವೇಳೆ ಆಪರೇಷನ್ ಕಮಲ ವಿಫಲವಾದರೆ ತಮ್ಮ ಪರಿಸ್ಥಿತಿ ಏನು ಎಂಬ ದುಗುಡದಿಂದ ಅಲ್ಲಲ್ಲೇ ತಮ್ಮ ಪ್ರಯತ್ನವನ್ನು ನಿಲ್ಲಿಸಿದರು ಎನ್ನಲಾಗುತ್ತಿದೆ.
ಐವರು ಬಿಜೆಪಿ ಶಾಸಕರಿಗೆ ಕನ್ನಾ, ಸದ್ದಿಲ್ಲದೆ ಬಿಜೆಪಿಗೆ ಕುಮಾರಸ್ವಾಮಿ ಇಟ್ಟರು ಗುನ್ನಾ
ಸದ್ದಿಲ್ಲದೆ ಆಪರೇಷನ್ ಕಮಲದ ಮುಖಾಂತರ ಅಧಿಕಾರದ ಗದ್ದುಗೆ ಏರಲು ಕನಸು ಕಾಣುತ್ತಿದ್ದ ಬಿಜೆಪಿಗೆ ಸದ್ದಿಲ್ಲದೆ ಏಟು ಕೊಡಲು ಆರಂಭಿಸಿದ ಕುಮಾರಸ್ವಾಮಿ ಕಲಬುರಗಿಗೆ ಹೋದಾಗ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಗೆ ನೇರ ಆಫರ್ ಕೊಟ್ಟಿದ್ದರು. ಅದಕ್ಕೂ ಮುನ್ನವೇ ಬಿಜೆಪಿಯ ಐದು ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಸಿಎಂ ವಿರೋಧಿ ಪಾಳಯದಲ್ಲಿ ಸಂಚಲನ ಉಂಟು ಮಾಡಿದ್ದರು.
ಅದಕ್ಕೆ ಪೂರಕ ಎಂಬಂತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೂರು ಅಧಿಕೃತ ಅಭ್ಯರ್ಥಿಗಳಿಗೆ ಬಿಜೆಯಿಂದ ಐವರು ಶಾಸಕರು ಅಡ್ಡ ಮತದಾನ ಮಾಡುತ್ತಾರೆ ಎಂಬ ಮಾಹಿತಿ ಯಡಿಯೂರಪ್ಪ ಕಿವಿಗೆ ಬೀಳುವಂತೆಯೂ ನೋಡಿಕೊಂಡರು. ಇದರಿಂದ ಪರಿಷತ್ ಚುನಾವಣೆಯ ಸಹವಾಸವೇ ಬೇಡವೆಂದು ಬಿಜೆಪಿ ಹಿಂದೆ ಸರಿದಿದೆ.
ಬಿಜೆಪಿಯಿಂದ ಸಿಪಿ ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಡಿಜೆ ಪುಟ್ಟಸ್ವಾಮಿಯವರನ್ನು ಕಣಕ್ಕಿಳಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿತ್ತು, ತಮಗೆ ಕಡಿಮೆ ಬೀಳುವ ಎಂಟು ಮತವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಖರೀದಿಸಲು ಚಿಂತನೆ ನಡೆಸಿತ್ತು. ಇದಕ್ಕೆ ಎದುರೇಟು ಕೊಟ್ಟ ಕುಮಾರಸ್ವಾಮಿ ಬಿಜೆಯಿಂದಲೇ ಐದು ಮತಗಳನ್ನು ಅಡ್ಡಮತದಾನ ಆಗುವಂತೆ ನೋಡಿಕೊಳ್ಳಲು ಮುಂದಾಗಿದ್ದರು. ಇದು ಯಡಿಯೂರಪ್ಪನವರಿಗೆ ಖಾತ್ರಿಯಾಗಿತ್ತು. ಇದೆಲ್ಲದರ ಬೆಳವಣಿಗೆ ಇನ್ನೆಲೆಯಲ್ಲಿ ಬಿಜೆಪಿ ಕಣದಿಂದ ಹಿಂದೆ ಸರಿದಿದೆ.ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಕುಮರಸ್ವಾಮಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟವನ್ನು ನಿವಾರಿಸಿದ್ದಾರೆ.