ಸಂಕ್ರಾಂತಿ ನಂತರ ರಾಜಕೀಯ ಬಿರುಗಾಳಿ ಎಬ್ಬಿಸಲಿದೆ ದೇವೇಗೌಡರ ಆತ್ಮಚರಿತ್ರೆ
ಬೆಂಗಳೂರು, ಜನವರಿ 01: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಬಹು ನಿರೀಕ್ಷಿತ ಆತ್ಮಚರಿತ್ರೆ ಸಂಕ್ರಾಂತಿ ಹಬ್ಬದ ನಂತರ ಮಾರುಕಟ್ಟೆಗೆ ಬರಲಿದೆ.
ದೇವೇಗೌಡ ಅವರ ಆತ್ಮಚರಿತ್ರೆ 2017 ರಲ್ಲಿಯೇ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ, ಮೈತ್ರಿ ಸರ್ಕಾರ, ನಂತರ ಲೋಕಸಭೆ ಚುನಾವಣೆ ಹೀಗೆ ಸಾಲು-ಸಾಲು ರಾಜಕೀಯ ಘಟನಾವಳಿಗಳ ಕಾರಣ ಆತ್ಮಚರಿತ್ರೆ ಬಿಡುಗಡೆ ತಡವಾಗಿದೆ.
ದೇವೇಗೌಡ ಅವರ ಆತ್ಮಚರಿತ್ರೆ ಅಂತಿಮ ರೂಪ ಪಡೆಯುತ್ತಿದ್ದು, ಇದೇ ಸಂಕ್ರಾಂತಿ ನಂತರ ಬಿಡುಗಡೆ ಆಗಲಿದೆ. ಬಿಡುಗಡೆ ಆದ ನಂತರ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನು ಆತ್ಮಚರಿತ್ರೆ ಉಂಟು ಮಾಡಲಿದೆ ಎನ್ನಲಾಗುತ್ತಿದೆ.
ಐದಾರು ದಶಕದ ಸುದೀರ್ಘ ರಾಜಕೀಯ ಅನುಭವ ಇರುವ ದೇವೇಗೌಡ ಅವರು ತಮ್ಮ ಸ್ಮೃತಿಯ ರಾಜಕೀಯ ಘಟನಾವಳಿಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.
ರಾಜ್ಯ-ರಾಷ್ಟ್ರದ ಹಲವಾರು ಪ್ರಮುಖ ರಾಜಕೀಯ ಘಟನೆಗಳಲ್ಲಿ ದೇವೇಗೌಡ ಅವರು ಭಾಗಿಯಾಗಿದ್ದರು. ರಾಜಕೀಯ ಘಟನೆಗಳ ಹಿಂದೆ ನಡೆದ 'ಒಳ ರಾಜಕಾರಣ'ದ ವಿಷಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ದೇವೇಗೌಡ ಅವರು ಹೊರಗಿಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ದೇವೇಗೌಡರ ಆತ್ಮಚರಿತ್ರೆ ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದ ದಾಖಲೆಯಾಗಿಯೂ ಆಗಲಿದೆ. ಐದುನೂರು ಪುಟಗಳ ದೊಡ್ಡ ಪುಸ್ತಕ ಇದಾಗಿರಲಿದೆ.
ದೇವೇಗೌಡ ಅವರ ಆತ್ಮಚರಿತ್ರೆಯನ್ನು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಎನ್ನಲಾಗುತ್ತಿದೆ.