ಬೇಕಿದ್ದರೆ ವಿದೇಶಕ್ಕೆ ಹೋಗುತ್ತೇನೆ : ಮೋದಿಗೆ ಗೌಡರ ಟಾಂಗ್
ಹಾಸನ, ಏ. 13 : "ನಾನ್ಯಾಕೆ ಗುಜರಾತ್ ಗೆ ಹೋಗಿ ನೆಲೆಸಲಿ? ನನಗೆ ಆಶ್ರಯ ಕೊಡಲು ಮೋದಿ ಯಾರು? ಬೇಕಿದ್ದರೆ ವಿದೇಶಕ್ಕೆ ಹೋಗಿ ನೆಲೆಸುತ್ತೇನೆ. ಮೋದಿಗೆ ವೀಸಾ ನೀಡಲು ವಿದೇಶಿ ಸರಕಾರಗಳು ಹಿಂಜರಿಯುತ್ತಿವೆ. ನನಗೆ ಆ ತೊಂದರೆಯಿಲ್ಲ" ಎಂದು ಮಾಜಿ ಪ್ರಧಾನಿ, ಹಾಸನ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ 80 ವರ್ಷ ವಯಸ್ಸಿನ ಎಚ್.ಡಿ. ದೇವೇಗೌಡ ಅವರು ಮೋದಿಗೆ ಟಾಂಗ್ ನೀಡಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ಪ್ರಚಾರ ಮಾಡುತ್ತಿದ್ದ ಅವರು, 'ದೇವೇಗೌಡ ಅವರು ಗುಜರಾತ್ ಗೆ ಬಂದು ನನ್ನ ಮನೆಯಲ್ಲಿ ನೆಲೆಸಲಿ ಅಥವಾ ವೃದ್ಧಾಶ್ರಮ ಸೇರಿಕೊಳ್ಳಲಿ' ಎಂದು ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ದೇವೇಗೌಡರು ಮೇಲಿನಂತೆ ಖಾರವಾಗಿ ನುಡಿದಿದ್ದಾರೆ. [ಚಿಕ್ಕಬಳ್ಳಾಪುರದಲ್ಲಿ ಗೌಡರ ಕಾಲೆಳೆದ ಮೋದಿ]
"ನನಗೆ ಆಶ್ರಯ ಕೊಡಲು ನನ್ನ ಮಕ್ಕಳಿದ್ದಾರೆ. ಆದರೆ, ಮೋದಿಗೆ ಗೊತ್ತಾ? ಗುಜರಾತ್ ನಲ್ಲಿ ಲಕ್ಷಾಂತರ ಅಲ್ಪ ಸಂಖ್ಯಾತರಿದ್ದಾರೆ. ಬೇಕಿದ್ದರೆ ಅವರಿಗೆ ಆಶ್ರಯ ಕೊಡಲಿ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಏನು ಮಾಡಿದ್ದೇನೆಂದು ಜನ ಗುರುತಿಸಿದ್ದಾರೆ. ನನ್ನ ಬಗ್ಗೆ ಹೇಳಿಕೆ ನೀಡಲು ಅವರಾರು? ಈಗಲೂ ಹೇಳುತ್ತೇನೆ, ಸ್ವಂತ ಪ್ರಯತ್ನದಿಂದ ಮೋದಿ 276 ಸೀಟು ಗೆದ್ದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ" ಎಂದು ಗೌಡರು ಹರಿಹಾಯ್ದರು.
ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡ ಪರವಾಗಿ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಪರವಾಗಿ ಪ್ರಚಾರಕ್ಕೆ ಬಂದಿದ್ದ ನರೇಂದ್ರ ಮೋದಿ ಅವರು, ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಮೋದಿ ಪ್ರಧಾನಿಯಾದರೆ ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ' ಎಂದು ದೇವೇಗೌಡರು ಆಡಿದ್ದ ಮಾತಿಗೆ ಪ್ರತಿಯಾಗಿ, "ಗೌಡರು ವಯೋವೃದ್ಧರಿದ್ದಾರೆ. ನನ್ನ ಗುಜರಾತ್ ಮನೆಗೆ ಬಂದರೆ ಅವರ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಬೇಡವೆಂದರೆ ವೃದ್ಧಾಶ್ರಮ ಸೇರಿಕೊಳ್ಳಲಿ" ಎಂದು ವ್ಯಂಗ್ಯವಾಡಿದ್ದರು. [ಮೋದಿ ಬಗ್ಗೆ ದೇವೇಗೌಡ ಹೇಳಿದ್ದೇನು?]
ಈಶ್ವರಪ್ಪ ಪ್ರತಿಕ್ರಿಯೆ : "ದೇವೇಗೌಡರು ಕರ್ನಾಟಕ ಬಿಟ್ಟು ಹೋಗುವುದು ಬೇಡ. ಅವರಿಗೆ ರಾಜಕೀಯದಲ್ಲಿ ಅಪಾರವಾದ ಅನುಭವವಿದೆ, ರೈತರ ಬಗ್ಗೆ ಸಾಕಷ್ಟು ಕಾಳಜಿಯಿದೆ. ಅವರ ಅನುಭವ ಮುಂದೆ ನಮಗೆ ಬೇಕಾಗುತ್ತದೆ. ಹಾಸನದಲ್ಲಿ ಮಾತ್ರವಲ್ಲ ಕರ್ನಾಟಕದ್ದೆಲ್ಲೂ ಜೆಡಿಎಸ್ ಗೆಲ್ಲುವುದಿಲ್ಲ. ಮೋದಿ ಪ್ರಧಾನಿ ಆಗುವುದನ್ನು ಜೆಡಿಎಸ್ ಅಷ್ಟೇ ಏಕೆ, ಸೂರ್ಯ ಚಂದ್ರರು ಕೂಡ ತಡೆಯಲು ಸಾಧ್ಯವಿಲ್ಲ" ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯಭರಿತ ಟೀಕಾಪ್ರಹಾರ ಮಾಡಿದ್ದಾರೆ. [ಬಚ್ಚೇಗೌಡರ ಸಂದರ್ಶನ]