ಲೋಕಸಭೆ ಚುನಾವಣೆ: ದೇವೇಗೌಡರ ಮುಂದೆ ಮೂರು ಕ್ಷೇತ್ರಗಳ ಆಯ್ಕೆ
ಬೆಂಗಳೂರು, ಮಾರ್ಚ್ 09: ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುತ್ತಲೇ ಬಂದಿದ್ದ ದೇವೇಗೌಡ ಅವರು ಈ ಬಾರಿಯೂ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತವಾಗಿದೆ.
ದೆಹಲಿಯಲ್ಲಿ ನಿನ್ನೆ ಮಾತನಾಡಿರುವ ರೇವಣ್ಣ ಅವರೇ ಈ ವಿಷಯವನ್ನು ಖಚಿತ ಪಡಿಸಿದ್ದಾರೆ. ಅಲ್ಲದೆ ಜೆಡಿಎಸ್ನ ಉನ್ನತ ಮೂಲಗಳು ಸಹ ದೇವೇಗೌಡ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಸೀಟು ಹಂಚಿಕೆ: ಜೆಡಿಎಸ್ಗೆ 7, ಕಾಂಗ್ರೆಸ್ 21: ಯಾವ ಕ್ಷೇತ್ರ ಯಾರಿಗೆ?
ದೇವೇಗೌಡ ಅವರು ಕಳೆದ ಬಾರಿ ಹಾಸನದಿಂದ ಚುನಾವಣೆಗೆ ಸ್ಪರ್ಧಿಸಿ ಸಂಸತ್ಗೆ ಆಯ್ಕೆ ಆಗಿದ್ದರು. ಆದರೆ ಈ ಬಾರಿ ಹಾಸನದಿಂದ ಪ್ರಜ್ವಲ್ ರೇವಣ್ಣ ಅವರು ಕಣಕ್ಕೆ ಇಳಿಯುತ್ತಿದ್ದು, ದೇವೇಗೌಡ ಅವರು ಬೇರೆ ಕ್ಷೇತ್ರದ ಕಡೆ ಮುಖ ಮಾಡುತ್ತಿದ್ದಾರೆ.
ದೇವೇಗೌಡ ಅವರ ಮುಂದೆ ಮೂರು ಕ್ಷೇತ್ರಗಳ ಆಯ್ಕೆ ಇದೆ. ಮೂರು ಕ್ಷೇತ್ರಗಳಲ್ಲಿ ಯಾವದಾದರೂ ಒಂದು ಕ್ಷೇತ್ರದಿಂದ ದೇವೇಗೌಡ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.
ದೇವೇಗೌಡ ಅವರ ಮುಂದಿರುವ ಆಯ್ಕೆಗಳು
ದೇವೇಗೌಡ ಅವರ ಮುಂದೆ ಮೈಸೂರು, ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರಗಳು ಇವೆ. ಹಾಸನದ ಹೊರತಾಗಿ ಈ ಮೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದ ಮೂಲಕ ಸ್ಪರ್ಧಿಸುವ ಇಚ್ಛೆಯನ್ನು ದೇವೇಗೌಡ ಅವರು ಹೊಂದಿದ್ದಾರೆ. ಪಕ್ಷವೂ ಈ ಮೂವರಲ್ಲಿ ಒಂದರಿಂದ ದೇವೇಗೌಡ ಅವರು ಸ್ಪರ್ಧಿಸಿದರೆ ಉತ್ತಮವೆಂದು ಹೇಳುತ್ತಿದೆ.
ಸಿದ್ದರಾಮಯ್ಯ ಅಡ್ಡಗಾಲು
ಜೆಡಿಎಸ್ ಪಕ್ಷವು ಮೈಸೂರು ಕ್ಷೇತ್ರವನ್ನು ತಮಗೆ ಬಿಟ್ಟುಕೊಡಲು ಕೇಳಿದೆ. ಆದರೆ ಸಿದ್ದರಾಮಯ್ಯ ಅವರು ಇದಕ್ಕೆ ನಿರಾಕರಿಸಿದ್ದಾರೆ. ಮೈಸೂರು ಕಾಂಗ್ರೆಸ್ಗೆ ನೀಡಲೇ ಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಲೋಕಸಭೆ ಚುನಾವಣೆ 2019:ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ತುಮಕೂರಿಗೆ ಪಟ್ಟು ಹಿಡಿದಿರುವ ಪರಮೇಶ್ವರ್
ಮೈಸೂರು ಆಗದಿದ್ದರೆ ತುಮಕೂರನ್ನು ನಮಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಕೇಳಿದೆ. ಆದರೆ ತುಮಕೂರಿನಲ್ಲಿ ಹಾಲಿ ಸಂಸದರು ಕಾಂಗ್ರೆಸ್ನವರಾಗಿದ್ದು ಮೈತ್ರಿಯ ಸೀಟು ಹಂಚಿಕೆ ಸೂತ್ರದ ಅನ್ವಯ ಹಾಲಿ ಇರುವ ಕ್ಷೇತ್ರಗಳನ್ನು ಬಿಟ್ಟುಕೊಡುವಂತಿಲ್ಲ ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದು ಕೂತಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರ ಬಿಡುಲು ಒಪ್ಪಿಗೆ
ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿದೆ. ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಸಹ ಸೂಚಿಸಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಒಳಪಟ್ಟಿರುವ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್
ಮೂರು ಕ್ಷೇತ್ರದಲ್ಲಿ ಹಾಲಿ ಸಂಸದರು ಯಾರು?
ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿಯ ಪ್ರತಾಪ್ ಸಿಂಹ ಅವರು ಸಂಸದರಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದಗೌಡ ಅವರು ಸಂಸದರಾಗಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾಗಿದ್ದಾರೆ.