ಉಪಚುನಾವಣೆ ಪ್ರಚಾರಕ್ಕೆ ದೇವೇಗೌಡ ಎಂಟ್ರಿ: ಅನರ್ಹರಿಗೆ ಗಡ-ಗಡ
ಬೆಂಗಳೂರು, ನವೆಂಬರ್ 27: ಉಪಚುನಾವಣೆ ಅಖಾಡಕ್ಕೆ ಸ್ವಲ್ಪ ತಡವಾಗಿಯೇ ದೇವೇಗೌಡರು ಎಂಟ್ರಿ ಕೊಟ್ಟಿದ್ದಾರೆ. ಇಂದಿನಿಂದ ಐದು ದಿನಗಳ ಕಾಲ ದೇವೇಗೌಡ ಅವರು ಬಿರುಸಿನ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದಿನಿಂದಲೇ ದೇವೇಗೌಡ ಅವರು ಪ್ರಚಾರ ಆರಂಭಿಸಿದ್ದು, ಮೊದಲಿಗೆ ಪಕ್ಷಕ್ಕೆ ಕೈಕೊಟ್ಟ ಎಚ್.ವಿಶ್ವನಾಥ್ ಚುನಾವಣೆಗೆ ನಿಂತಿರುವ ಹುಣಸೂರು ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಲಿದ್ದಾರೆ.
ಇಂದು ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ವಿರುದ್ಧ ಪ್ರಚಾರ ಮಾಡಲಿರುವ ದೇವೇಗೌಡ, ನಾಳೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆ ಮಾಡಲಿದ್ದಾರೆ. ಬಳಿಕ ನವೆಂಬರ್ 29 ರಂದು ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆ ಮಾಡಲಿದ್ದಾರೆ.
ನವೆಂಬರ್ 30 ರಂದು ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಡಿಸೆಂಬರ್ 1 ರಂದು ಯಶವಂತಪುರ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.
ದೇವೇಗೌಡ ಅವರು ಜೆಡಿಎಸ್ಗೆ ಹೆಚ್ಚಿನ ಅವಕಾಶ ಇರುವ ಹಳೆ ಮೈಸೂರು ಭಾಗದಲ್ಲಿ ಮಾತ್ರವೇ ಪ್ರಚಾರ ಮಾಡುತ್ತಿದ್ದು, ಉತ್ತರ ಕರ್ನಾಟಕ, ಕರಾವಳಿ ಕಡೆಗೆ ಹೆಚ್ಚಿನ ಗಮನ ವಹಿಸುತ್ತಿಲ್ಲ. ಗೆಲ್ಲುವ ಅವಕಾಶ ಇರುವ ಕಡೆ ಹೆಚ್ಚಿನ ಒತ್ತು ನೀಡಿ ಪ್ರಚಾರ ಮಾಡುವ ತಂತ್ರವನ್ನು ಜೆಡಿಎಸ್ ಅನುಸರಿಸುತ್ತಿದೆ.
ಕುಮಾರಸ್ವಾಮಿ ಅವರು ಈಗಾಗಲೇ ಬಿರುಸಿನ ಪ್ರಚಾರ ಆರಂಭ ಮಾಡಿದ್ದು, ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ ಸಹ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಜೆಡಿಎಸ್ಗೆ ಕೈಕೊಟ್ಟು ಬಿಜೆಪಿಗೆ ಸೇರಿರುವ 'ಅನರ್ಹ' ಎಚ್.ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ನ ಕೆ.ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ ಅವರನ್ನು ಸೋಲಿಸುವ ಗುರಿಯನ್ನು ಜೆಡಿಎಸ್ ಹೊಂದಿದ್ದು, ಈ ಕ್ಷೇತ್ರಗಳ ಮೇಲೆ ವಿಶೇಷ ಆಸಕ್ತಿವಹಿಸಿ ಪ್ರಚಾರದಲ್ಲಿ ತೊಡಗಿವೆ.