ರಾಹುಲ್ ಪ್ರಧಾನಿ ಅಭ್ಯರ್ಥಿಯಾಗಲಿ ಎಂದ 86ರ ದೇವೇಗೌಡರು
ಬೆಂಗಳೂರು, ಮೇ 18 : ಎಂಬತ್ತಾರು ವಸಂತಗಳನ್ನು ಪೂರೈಸಿರುವ ಕರ್ನಾಟಕದ ಮಣ್ಣಿನ ಮಗ, ಮಾಜಿ ಪ್ರಧಾನಿ, ದೇಶ ಕಂಡ ಪ್ರಖರ ರಾಜಕಾರಣಿ, ಅಪ್ರತಿಮ ಹೋರಾಟಗಾರ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರಿಗೆ 86ನೇ ಹುಟ್ಟುಹಬ್ಬದ ಶುಭಾಶಯಗಳು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಲೋಕಸಭೆಯ ಕಡೆಯ ಹಂತದ ಮತದಾನ ಮಾತ್ರ ಉಳಿದಿದ್ದು, ಎಲ್ಲರ ದೃಷ್ಟಿ ಮೇ 23ರಂದು ಹೊರಬೀಳಲಿರುವ ಫಲಿತಾಂಶದ ಮೇಲೆ ನೆಟ್ಟಿದ್ದರೆ, ಮಹಾಘಟಬಂಧನದಲ್ಲಿ ಪ್ರಧಾನಿ ಅಭ್ಯರ್ಥಿಯ ಹುಡುಕಾಟ ನಡೆದಿದ್ದ ಸಮಯದಲ್ಲಿ, ತಮ್ಮ ಆಯ್ಕೆ ರಾಹುಲ್ ಗಾಂಧಿ ಎಂದು ಬರ್ತಡೇ ಬಾಯ್ ಹೇಳಿದ್ದಾರೆ.
ಭಾವಿ ಪ್ರಧಾನಿ ದೇವೇಗೌಡ್ರು: ಅಭಿಮಾನಿಗಳ ಜೈಘೋಷ
ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ತಮ್ಮ ಬೆಂಬಲ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಇರಲಿದ್ದು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ಶಿಫಾರಸು ಮಾಡುವುದಾಗಿ, ತಿರುಪತಿಯಲ್ಲಿ ತಿಪ್ಪಮ್ಮನ ದರುಶನ ಮಾಡಿದ ನಂತರ ಪತ್ರಕರ್ತರಿಗೆ ಈ ವಿಷಯ ತಿಳಿಸಿದ್ದಾರೆ.
ಮತ್ತೊಂದೆಡೆ, ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು, ರಾಹುಲ್ ಗಾಂಧಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಹಲವಾರು ನಾಯಕರನ್ನು ಭೇಟಿ ಮಾಡುತ್ತಿದ್ದು, ಒಮ್ಮತದ ಅಭ್ಯರ್ಥಿಯ ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.
ಮೊದಲು ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಚಂದ್ರಬಾಬು ನಾಯ್ಡು ಅವರು, ಬಿಜೆಪಿಯನ್ನು ಕೇಂದ್ರದಿಂದ ಇಳಿಸಲು ವಿರೋಧಿಗಳ ಬಲವರ್ಧನೆಯಲ್ಲಿ ತೊಡಗಿದ್ದಾರೆ. ನಂತರ ಅವರು ಶರದ್ ಪವಾರ್ ಅವರನ್ನು ಕೂಡ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.
ಮೇ 23 ರ ನಂತರ JDS ನಡೆ ಏನು? ದೇವೇಗೌಡ್ರು ಹೇಳಿದ್ದಿಷ್ಟು...
ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚಂದ್ರಬಾಬು ನಾಯ್ಡು ಅವರು, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಅವರು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರೊಂದಿಗೂ ತಮ್ಮ ಯೋಜನೆಯನ್ನೂ ವಿವರಿಸಿದ್ದಾರೆ.
ಕೆಲ ದಿನಗಳ ಹಿಂದೆ ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಅವರು ಕೂಡ ತೃತೀಯ ರಂಗದ ರಚನೆಯ ಉದ್ದೇಶದಿಂದ ಹಲವಾರು ನಾಯಕರುಗಳನ್ನು ಭೇಟಿ ಮಾಡಿದ್ದರು. ಆದರೆ, ಅವರು ಕಾಂಗ್ರೆಸ್ಸನ್ನು ಹೊರತುಪಡಿಸಿ ತೃತೀಯ ರಂಗ ನಿರ್ಮಿಸಲು ಹೊರಟಿದ್ದರಿಂದ ಯಶಸ್ವಿಯಾಗಿರಲಿಲ್ಲ.
ಫಲಿತಾಂಶಕ್ಕೆ ದಿನಗಣನೆ: ಸೋನಿಯಾ ಗಾಂಧಿಗೆ ದೇವೇಗೌಡ್ರ 'ಸ್ಟ್ರಾಂಗ್' ಪತ್ರ!
ದೇಶದ ಅತ್ಯಂತ ಪುರಾತನ ಪಕ್ಷವಾದ ಕಾಂಗ್ರೆಸ್ಸನ್ನು ಹೊರಗಿಟ್ಟು ಯಾವುದೇ ಪ್ರಾದೇಶಿಕ ಪಕ್ಷವಾಗಲಿ ಕೇಂದ್ರದಲ್ಲಿ ಸರಕಾರ ರಚಿಸಲು ಸಾಧ್ಯವೇ ಇಲ್ಲ ಎಂದು ದೇವೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿರುವ ಜೆಡಿಎಸ್ ಹಾಗೂಹೀಗೂ ಜೀಕುತ್ತ ಸಾಗುತ್ತಿದೆ.
ವಿರೋಧಿಗಳು ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ತೋರುತ್ತಿರುವ ಈ ಸಮಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಂದು ಅವಧಿಗೆ ಸರಕಾರ ರಚಿಸುವ ವಿಶ್ವಾಸ ಹೊಂದಿದೆ ಮತ್ತು ಶಿವಸೇನೆ, ಎಐಎಡಿಎಂಕೆ ಮುಂತಾದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಯಾವ ಪಕ್ಷಕ್ಕೆ ಅಥವಾ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳು ಲಭಿಸುತ್ತವೆ ಎಂಬುದು ಮೇ 23ರಂದು ಗುರುವಾರ ಸಂಜೆಯ ಹೊತ್ತಿದೆ ತಿಳಿದುಬರಲಿದೆ.