ಜೆಡಿಎಸ್ ನಲ್ಲಿ ಭಿನ್ನಮತ, ಶಾಸಕ ಸ್ಥಾನಕ್ಕೆ ಪಿಳ್ಳಮುನಿಶಾಮಪ್ಪ ರಾಜೀನಾಮೆ
ಬೆಂಗಳೂರು, ಫೆಬ್ರವರಿ. 23 : ಜೆಡಿಎಸ್ ನಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳ ಮುನಿಶಾಮಪ್ಪ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಪಿಳ್ಳ ಮುನಿಸ್ವಾಮಪ್ಪ ತಮ್ಮ ರಾಜಿನಾಮೆ ಪತ್ರವನ್ನು ಗುರುವಾರ ಸ್ಪೀಕರ್ ಕೋಳಿವಾಡ ಅವರಿಗೆ ನೀಡಿದ್ದು, ಕೂಡಲೇ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ರಾಜಿನಾಮೆ ನಿರ್ಧಾರವನ್ನು ಮರು ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಪಿಳ್ಳ ಮುನಿಸ್ವಾಮಪ್ಪ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
ನನ್ನ ಇಚ್ಚೆಗೆ ವಿರುದ್ಧವಾಗಿ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳಲಾಗಿದ್ದು ಅವರೇ ಮುಂದಿನ ದೇವನಹಳ್ಳಿ ಅಭ್ಯರ್ಥಿ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ಪೀಕರ್ ಕೋಳಿವಾಡ ಪ್ರತಿಕ್ರಯಿಸಿದ್ದು, "ನನ್ನ ಕಚೇರಿಗೆ ಬಂದು ರಾಜೀನಾಮೆ ನೀಡಿದ್ದಾರೆ, ನಿಯಮಾವಳಿಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತಿದೆ.
ಆದರೆ, ರಾಜಿನಾಮೆಗೆ ಕಾರಣ ಏನು ಎಂಬುದನ್ನು ನಾನು ಕೇಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪಿಳ್ಳ ಮುನಿಶಾಮಪ್ಪ ಅವರ ಮನವೊಲಿಸಲು ಪ್ರಯತ್ನ ಆರಂಭಿಸಿದ್ದಾರೆ.