ಅನುದಾನ ಬಳಕೆಯಲ್ಲಿ ದತ್ತಾ ಮುಂದೆ, ಸಿ.ಟಿ. ರವಿ ಹಿಂದೆ
ಬೆಂಗಳೂರು, ಏಪ್ರಿಲ್ 10: ವಿವಿಧ ಯೋಜನೆಗಳ ಅಡಿಯಲ್ಲಿ ಮತ್ತು ಇಲಾಖೆಗಳ ಮೂಲಕ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಕೆಲವು ಅನುದಾನಗಳು ವಿವಿಧ ಪ್ರದೇಶಗಳ ಅಗತ್ಯಕ್ಕೆ ತಕ್ಕಂತೆ ಬಿಡುಗಡೆಯಾದರೆ, ಆಯಾ ಪ್ರದೇಶದ ಸ್ಥಳೀಯ ಅಭಿವೃದ್ಧಿಯಾಗಿ ಪ್ರತ್ಯೇಕ ಅನುದಾನ ಬಿಡುಗಡೆಯಾಗುತ್ತದೆ.
ರಾಯಚೂರಿಗೆ ಸರ್ಕಾರ ಕೊಟ್ಟದ್ದೆಷ್ಟು? ಖರ್ಚಾದದ್ದೆಷ್ಟು? ಒನ್ಇಂಡಿಯಾ ಕನ್ನಡ' ನೀಡುತ್ತಿದೆ ಮಾಹಿತಿ
ಮಲೆನಾಡಿನ ಸ್ವರ್ಗದ ತಾಣ ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯ ಒಂದೆಡೆ ಹಸಿರಿನ ವೈಭವದಿಂದ ಪ್ರವಾಸಿಗರನ್ನು ಸೆಳೆದರೆ, ಇನ್ನೊಂದೆಡೆ ಬರಗಾಲವೂ ಈ ಜಿಲ್ಲೆಯ ಕೆಲವು ಭಾಗಗಳನ್ನು ಬಾಧಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಬಿಡುಗಡೆಯಾದ ಹಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಎಷ್ಟು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ? ಎಷ್ಟು ಹಣ ಉಳಿಸಿದ್ದಾರೆ?
2013ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ 2017ರ ಡಿಸೆಂಬರ್ವರೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣ ಮತ್ತು ಶಾಸಕರು ಯಾವ ಯೋಜನೆಗೂ ಬಳಸದ ಕಾರಣ ಬಳಕೆಯಾಗದೆ ಉಳಿದ ಹಣದ ಮಾಹಿತಿ ಇಲ್ಲಿದೆ.
ಜಿಲ್ಲೆಯ ಐವರು ಶಾಸಕರಿಗೆ ಐದು ವರ್ಷದ ಅವಧಿಯಲ್ಲಿ ಒಟ್ಟು 47.29 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇದರಲ್ಲಿ ಇನ್ನೂ 14.34 ಕೋಟಿ ಹಣ ವ್ಯಯವಾಗಿಲ್ಲ. ಈ ಹಣ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿಯೇ ಕೊಳೆಯುತ್ತಿದೆ.
ಗಡಿ ಜಿಲ್ಲೆ ಬೆಳಗಾವಿಗೆ ಸರ್ಕಾರ ಕೊಟ್ಟ ಅನುದಾನವೆಷ್ಟು?
ಚುನಾವಣೆ ಬಂದಿದ್ದರಿಂದ ಬಾಕಿ ಉಳಿದಿದ್ದ ಅನುದಾನಗಳನ್ನು ವಿನಿಯೋಗಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಪ್ರಸಕ್ತ ಅವಧಿಯಲ್ಲಿ ತಲಾ 9.45 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಬಿಡುಗಡೆಯಾದ ಹಣದಲ್ಲಿ ಅತಿ ಹೆಚ್ಚು ಅನುದಾನ ಬಳಕೆ ಮಾಡಿಕೊಂಡ ಶಾಸಕರ ಪಟ್ಟಿಯಲ್ಲಿ ಕಡೂರು ಜೆಡಿಎಸ್ ಶಾಸಕ ವೈ.ಎಸ್.ವಿ. ದತ್ತ ಮುಂಚೂಣಿಯಲ್ಲಿದ್ದಾರೆ.
ಸರಳತೆಗೆ ಹೆಸರಾಗಿರುವ ವೈ.ಎಸ್.ವಿ. ದತ್ತ, ಇತರೆ ಶಾಸಕರಿಗಿಂತ ಅಧಿಕ ಪ್ರಮಾಣದಲ್ಲಿ ಅನುದಾನ ವಿನಿಯೋಗಿಸಿದ್ದಾರೆ. ಬಿಡುಗಡೆಯಾದ 9.45 ಕೋಟಿ ರೂಪಾಯಿ ಪೈಕಿ 8.40 ಕೋಟಿ ಹಣವನ್ನು ಅವರು ಬಳಸಿಕೊಂಡಿದ್ದಾರೆ. 1.04 ಕೋಟಿ ಮೊತ್ತ ಬಳಕೆಯಾಗದೆ ಉಳಿದಿದೆ.
ಅನುದಾನದ ಬಳಕೆ ವಿಚಾರದಲ್ಲಿ ತರೀಕೆರೆಯ ಕಾಂಗ್ರೆಸ್ ಶಾಸಕ ಜಿ.ಎಚ್. ಶ್ರೀನಿವಾಸ್ ಎರಡನೆಯ ಸ್ಥಾನದಲ್ಲಿದ್ದಾರೆ. ಅವರು ಇದೇ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ 6.97 ಕೋಟಿ ಮೊತ್ತವನ್ನು ಅವರು ಬಳಸಿಕೊಂಡಿದ್ದಾರೆ. ಇನ್ನು 2.48 ಕೋಟಿ ರೂಪಾಯಿ ಅನುದಾನ ಬಳಕೆಯಾಗಿಲ್ಲ.
ಶೃಂಗೇರಿಯ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್, 6.54 ಕೋಟಿ ರೂಪಾಯಿ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. ಆದರೆ, 2.91 ಕೋಟಿ ಮೊತ್ತ ಖಾತೆಯಲ್ಲಿಯೇ ಉಳಿದುಕೊಂಡಿದೆ.
ಅನುದಾನ ಬಳಕೆಯಲ್ಲಿ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ತಮ್ಮ ಕ್ಷೇತ್ರಕ್ಕೆ ಬಂದ ಹಣದಲ್ಲಿ ಅವರು ಇನ್ನೂ 3.53 ಕೋಟಿ ಹಣವನ್ನು ವಿನಿಯೋಗಿಸಿಯೇ ಇಲ್ಲ.
ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ. ರವಿ ಜಿಲ್ಲೆಯಲ್ಲಿ ಅನುದಾನವನ್ನು ಅತಿ ಕಡಿಮೆ ಬಳಸಿಕೊಂಡ ಶಾಸಕ. ಬಿಡುಗಡೆಯಾದ ಅನುದಾನದಲ್ಲಿ ಅರ್ಧಕ್ಕಿಂತ ತುಸು ಹೆಚ್ಚಿನ ಭಾಗವನ್ನು ಮಾತ್ರ ಅವರು ಬಳಸಿಕೊಂಡಿದ್ದಾರೆ.
9.45 ಕೋಟಿ ಅನುದಾನದಲ್ಲಿ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿ.ಟಿ. ರವಿ ಬಳಸಿಕೊಂಡಿರುವುದು 5.09 ಕೋಟಿ ಅನುದಾನವನ್ನು ಮಾತ್ರ. ಇನ್ನು ಉಳಿದ 4.36 ಕೋಟಿ ಮೊತ್ತದ ಹಣ ವ್ಯರ್ಥವಾಗಿ ಉಳಿದಿದೆ.