ಸದನದೊಳಗೇ ದೊಂಬರಿಗೆ ಅವಮಾನ; ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿಳಿವಳಿಕೆ ನೀಡುವವರು ಯಾರಿದ್ದಾರೆ?
Recommended Video
ಬೆಂಗಳೂರು, ಜುಲೈ 19: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಿಗೆ ತನ್ನದೇ ಆದ ಸ್ಥಾನವಿದೆ. ಸದಸ್ಯರು ಸದನದೊಳಗೆ ಆಡುವ ಪ್ರತಿ ಮಾತು ದಾಖಲೆಗಳಾಗಿ ಉಳಿದು ಹೋಗುತ್ತವೆ. ಹೀಗಿರುವಾಗ ಅಲೆಮಾರಿ ಜಾತಿಯೊಂದನ್ನು ಹೀಗಳೆಯುವ, ಅವರ ಕಲೆಯನ್ನು ನಕಾರಾತ್ಮಕವಾಗಿ ಬಿಂಬಿಸುವ ಅಸಹ್ಯವೊಂದಕ್ಕೆ ಕರ್ನಾಟಕದ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು.
ಸಿಎಂ ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಎರಡು ದಿನಗಳಿಂದ ವಿಧಾನಸೌಧದಲ್ಲಿ ನಡೆಯುತ್ತಿದೆ. ಶುಕ್ರವಾರ ಸಂಜೆ ಚರ್ಚೆಯಲ್ಲಿ ಮಾತನಾಡುವ ಅವಕಾಶ ಪಡೆದುಕೊಂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕ ರಾಜಕಾರಣವನ್ನು 'ದೊಂಬರಾಟ'ಕ್ಕೆ ಹೋಲಿಸಿದರು. ಅಷ್ಟಕ್ಕೆ ನಿಲ್ಲಿಸದ ಅವರು ತಮ್ಮ ಭಾಷಣದ ಉದ್ದಕ್ಕೂ ದೊಂಬರಾಟ ಎಂಬ ಪದವನ್ನು ನಕಾರಾತ್ಮಕ ರೀತಿಯಲ್ಲಿ ಕನಿಷ್ಠ 40 ಬಾರಿ ಪ್ರಸ್ತಾಪಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ : ಯಡಿಯೂರಪ್ಪ ಹೇಳಿದ್ದೇನು?
ಇಂತಹದೊಂದು ಅಸಹ್ಯ ಹೆಚ್ಚು ಕಡಿಮೆ 10 ನಿಮಿಷಗಳ ಕಾಲ ನಡೆದ ನಂತರ ಒಂದು ಹಂತದಲ್ಲಿ ಸ್ಪೀಕರ್ ಸ್ಥಾನದಲ್ಲಿ ಕುಳಿತ ಉಪಸಭಾಧ್ಯಕ್ಷ ಜೆ. ಕೆ. ಕೃಷ್ಣಾ ರೆಡ್ಡಿ, "ಆ ಪದವನ್ನು (ದೊಂಬರಾಟ) ಬಳಸಬೇಡಿ,'' ಎಂದರು. ತಕ್ಷಣವೇ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೈತಿಕ ಬೆಂಬಲ ನೀಡಲು ಎದ್ದು ನಿಂತರು.
"ದೊಂಬರಾಟ ಎಂಬ ಪದವನ್ನು ರೂಢಿಗತವಾಗಿ ರಾಜ್ಯಾದ್ಯಂತ ಬಳಸಿಕೊಂಡು ಬರಲಾಗುತ್ತಿದೆ. ಆ ಸಮಯದಾಯ ಬಗ್ಗೆ ಗೌರವ ಇದೆ. ಇದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಜಾತಿಗೆ ಅವಮಾನ ಮಾಡಲು ಬಳಸಿಲ್ಲ,'' ಎಂದು ಸಮಜಾಯಿಷಿ ನೀಡಿದರು ಸಿದ್ದರಾಮಯ್ಯ.
ಸದನದ ಇತರೆ ಸದಸ್ಯರು ಈ ಕುರಿತು ಯಾವುದೇ ಗಮನ ನೀಡದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಬಹಿರಂಗ ಪ್ರಚಾರ ಭಾಷಣದ ಮಾದರಿಯಲ್ಲಿದ್ದ ಮಾತುಗಳನ್ನು ಮುಂದುವರಿಸಿದರು.
ದೊಂಬರಾಟ- ರೂಢಿಗತ:
ದೊಂಬರು ಎಂಬ ಜಾತಿ ಕರ್ನಾಟಕದ ಪ್ರಮುಖ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿ ಬರುತ್ತದೆ. ಅವರನ್ನು ಉತ್ತರ ಕರ್ನಾಟಕದಲ್ಲಿ ಕೊಲ್ಲಟಿಗರೆಂದೂ ಕರೆಯುತ್ತಾರೆ. ಈ ಅಸ್ಪೃಶ್ಯ ಸಮುದಾಯದ ಪ್ರದರ್ಶನವನ್ನು ದೊಂಬರಾಟ ಎಂದು ಕರೆಯುತ್ತಾರೆ. ಕೊಲ್ಲಟಿಗರ ಆಟ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ದೊಂಬರು ಆಂಧ್ರಪ್ರದೇಶದಿಂದ, ಅದರಲ್ಲಿಯೂ ಕಡಪಾ, ನೆಲ್ಲೂರು, ಚಿತ್ತೂರು ಮತ್ತು ವಿಶಾಖಪಟ್ಟಣ ಜಿಲ್ಲೆಗಳಿಂದ ವಲಸೆ ಬಂದವರು ಎಂಬುದು ಲಭ್ಯವಾಗುವ ಮಾಹಿತಿ.
ಅವರು ತಮ್ಮ ತಾಯಿನುಡಿಯಾದ ತೆಲುಗು ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡ ಎರಡರಲ್ಲಿಯೂ ಸರಾಗವಾಗಿ ಮಾತನಾಡುತ್ತಾರೆ. ವಾಸ್ತವವಾಗಿ ದೊಂಬರ ಸಮುದಾಯವು ಭಾರತದ ಉದ್ದಗಲಕ್ಕೂ ಹರಡಿಕೊಂಡಿದ್ದು, ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಬುಡಕಟ್ಟಿನ ಹುಟ್ಟು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅನೇಕ ಐತಿಹ್ಯಗಳಿವೆ.
ಬೆಳಗಾವಿ: ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೆ ಕಿರಿಕ್
'ಬಿಜಾಪುರ ಜಿಲ್ಲೆಯ ಹೊನ್ನಿಹಾಳಿನಲ್ಲಿ ಸಿಕ್ಕಿರುವ ಶಾಸನವು, ದೊಂಬರಿಗೆ ಒಂದು ಹಳ್ಳಿಯನ್ನೇ ದಾನವಾಗಿ ಕೊಟ್ಟ ಪ್ರಸಂಗವನ್ನು ದಾಖಲೆ ಮಾಡಿದೆ. ಅಲ್ಲಿಯೇ ದೊಂಬರ ಹೆಣ್ಣುಮಕ್ಕಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವ ಶಿಲ್ಪಗಳು ದೊರಕಿವೆ. ಒಬ್ಬ ದೊಂಬಿತಿಯು ಒಂಟಿ ಕಾಲಿನ ಮೇಲೆ ನಿಂತುಕೊಂಡು ಇಬ್ಬರು ಮಕ್ಕಳು ಮತ್ತು ಒಂದು ಬಿಲ್ಲನ್ನು ಸಮತೋಲನ ಮಾಡಿ ಎತ್ತಿಕೊಂಡಿದ್ದಾಳೆ.' (ಮಾಹಿತಿ ಋಣ: ಕಾಮತ್ಸ್ ಪಾಟ್ ಪೌರಿ ವೆಬ್ ಸೈಟಿನಿಂದ)
'ದೊಂಬರ ಕುಣಿತ’ವು ಶಿವಮೊಗ್ಗ ಜಿಲ್ಲೆಯಲ್ಲಿರುವ ದೊಂಬರ ಉಪ ಸಮುದಾಯವೊಂದರ ಮಹಿಳೆಯರು ಪ್ರದರ್ಶಿಸುವ ವಿಶಿಷ್ಟವಾದ ಕಲೆ. ಆ ಮಹಿಳೆಯರು ಬಿಳಿಯ ಸೀರೆಗಳನ್ನು ಉಟ್ಟುಕೊಂಡು ನರ್ತಿಸಿದರೆ, ಅವರ ಸಂಗಡ ಕುಣಿಯುವ ಗಂಡಸರು ಮುಖವಾಡಗಳನ್ನು ಧರಿಸಿಕೊಳ್ಳಬೇಕು.
ದೊಂಬರು ತಮ್ಮ ದೊಂಬರಾಟಕ್ಕಾಗಿ ಮತ್ತು ಮೋಡಿ ಪ್ರದರ್ಶನಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಈ ಕಲೆಯಲ್ಲಿ ಧಾರ್ಮಿಕತೆಯಾಗಲೀ ಆಚರಣೆಗಳಾಗಲೀ ಒಂದಿನಿತೂ ಇಲ್ಲವೆನ್ನುವುದನ್ನು ಗಮನಿಸಬೇಕು. ಇದು ಹೊಟ್ಟೆಪಾಡಿಗಾಗಿ ಕಲಿತಿರುವ ಮನರಂಜನೆಯ ಕಲೆ. ಇದರ ಪರಿಣಾಮವಾಗಿ ದೊಂಬರು ತಮ್ಮ ಗಂಟುಗದಡಿಗಳ ಸಮೇತ ಊರೂರು ತಿರುಗುವುದು ಅನಿವಾರ್ಯವಾಯಿತು ಎಂಬುದು ಇವರ ಬಗೆಗೆ ಇರುವ ಪಠ್ಯಗಳು ನೀಡುವ ಮಾಹಿತಿ.
ರೂಢಿಯನ್ನು ಮುರಿಯಲಾರದವರು:
ಇತ್ತೀಚೆಗೆ ಬೆಂಗಳೂರಿನಲ್ಲಿ ಈ ದೊಂಬರಾಟ ಕಲೆಯನ್ನು ನಕಾರಾತ್ಮವಾಗಿ ಬಳಸುವುದನ್ನು ತಪ್ಪಿಸಿ ಎಂದು ಪ್ರತಿಭಟನೆಯೊಂದನ್ನು ಸಮುದಾಯದ ಜನ ನಡೆಸಿದ್ದರು. ಈ ಮೂಲಕವಾದರೂ ರೂಢಿಗತವಾಗಿರುವ ಭಾಷೆಯ ಬಳಕೆಯಲ್ಲಿ ಸೂಕ್ಷ್ಮತೆಯನ್ನು ಮಾಧ್ಯಮಗಳು, ನಾಗರಿಕ ಸಮಾಜ ಬೆಳೆಸಿಕೊಳ್ಳಲಿ ಎಂಬುದು ಅವರ ಆಗ್ರಹವಾಗಿತ್ತು.
ಆದರೆ, ಶುಕ್ರವಾರ ಸದನದ ಸದಸ್ಯೆಯೊಬ್ಬರು ದೊಂಬರಾಟವನ್ನು ನಕಾರಾತ್ಮವಾಗಿ ಬಳಸುವ ಮೂಲಕ ಭಾಷಾ ಬಳಕೆಯಲ್ಲಿರುವ ಕ್ಲೀಷೆ ಅಸಹ್ಯವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯರಂತಹ ಹಿರಿಯ ಸದಸ್ಯರೇ ಸಮಜಾಯಿಷಿ ನೀಡುವ ಮೂಲಕ ಎಂತಹ ಸೂಕ್ಷ್ಮ ವ್ಯಕ್ತಿಗಳಲ್ಲೂ ಅಡಗಿರುವ ಅಸೂಕ್ಷ್ಮತೆಯನ್ನು ತೋರಿಸಿದ್ದಾರೆ.
ಸೋಮವಾರ ಸದನ ಮತ್ತೆ ಸೇರಿದ ನಂತರವಾದರೂ ಪದ ಬಳಕೆಗೆ ಕ್ಷಮೆ ಕೇಳುವ ಮೂಲಕ ಜನರಿಗೆ ಸಂದೇಶವನ್ನು ತಲುಪಿಸುವ ಕೆಲಸ ಆಗಬೇಕಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಇದನ್ನು ಮನಗಾಣಲಿ ಎಂಬುದು 'ಒನ್ ಇಂಡಿಯಾ ಕನ್ನಡ'ದ ಆಗ್ರಹ ಕೂಡ.