ಸೌದಿಯಲ್ಲಿನ ಭಾರತೀಯರ ಕನಸಿನ ಗೋಪುರ ಕೆಡವಿದ ಅವಲಂಬನಾ ತೆರಿಗೆ
ಬೆಂಗಳೂರು, ಜುಲೈ 16 : ಸುಂದರವಾದ ಬದುಕು ಮತ್ತು ಆ ಬದುಕನ್ನು ಇನ್ನಷ್ಟು ಸುಂದರವಾಗಿರುವ ಕನಸನ್ನು ಹೊತ್ತು ಸೌದಿ ಅರೇಬಿಯಾಕ್ಕೆ ತೆರಳಿದ್ದ ಬಡ, ಕೆಳಮಧ್ಯಮ ಮತ್ತು ಮಧ್ಯಮ ವರ್ಗದ ಉದ್ಯೋಗಿಗಳು ಅಲ್ಲಿನ ತೆರಿಗೆ ಹೊಡೆತ ತಾಳಲಾರದೆ ತವರಿಗೆ ಕುಟುಂಬ ಸಮೇತರಾಗಿ ವಾಪಸಾಗಿದ್ದಾರೆ.
ಹೀಗೆ ಸಾವಿರಾರು ಕುಟುಂಬಗಳು ಗಲ್ಫ್ ನಿಂದ ಮರಳಿದ್ದು, ಇಲ್ಲಿ ನೆಲೆ ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳಲಾರದೆ ಪರದಾಡುತ್ತಿದ್ದಾರೆ. ಕಳೆದ ವರ್ಷ 'ಅವಲಂಬನಾ ತೆರಿಗೆ'ಯನ್ನು ಪ್ರತಿ ಭಾರತೀಯ ಕುಟುಂಬದ ಮೇಲೆ ಜಡಿದ ಮೇಲೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದರು. ಈಗ ಭಾರತಕ್ಕೆ ಮರಳಿದ ಮೇಲೂ ಅವರ ಬದುಕು ಅತಂತ್ರವಾಗಿದೆ.
ಸೌದಿಯಲ್ಲಿ ವಾಸಿಸುತ್ತಿದ್ದ ಉತ್ತರ ಕನ್ನಡ ಜನ ಮರಳಿ ತವರಿಗೆ!
ಕಳೆದ ವರ್ಷ ಜುಲೈ ತಿಂಗಳಲ್ಲಿ 'ಅವಲಂಬನಾ ತೆರಿಗೆ'ಯನ್ನು ಹೇರಲಾಗಿತ್ತು. ಇದರ ಪ್ರಕಾರ, ಕುಟುಂಬದ ಪ್ರತಿ ಅವಲಂಬಿತ ವ್ಯಕ್ತಿ, ಪ್ರತಿ ತಿಂಗಳು 100 ಸೌದಿ ರಿಯಾಲ್ ಹಣವನ್ನು ನೀಡಬೇಕು. ಇದು ಅಲ್ಲಿನ ಬಡವರ್ಗದ ಭಾರತೀಯರಿಗೆ ಭರಿಸಲಾಗದ ಭಾರೀ ಹೊಡೆತವಾಗಿದೆ. ಹಣವನ್ನು ಕಟ್ಟಲು ಶಕ್ತಿಯಿಲ್ಲದೆ ಸಾವಿರಾರು ಜನರು ಕುಟುಂಬ ಸಮೇತರಾಗಿ ಮರಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆ ಇಂದಿಗೂ ಪಂಜರ ಹಕ್ಕಿ
ಕಳೆದ ವರ್ಷ 100 ಸೌದಿ ರಿಯಾಲ್ ಅವಲಂಬನಾ ತೆರಿಗೆ ಇದ್ದರೆ, ಇದೇ ಜುಲೈನಿಂದ ಅದನ್ನು ಶೇ.100ರಷ್ಟು ಏರಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ವರ್ಷಕ್ಕೆ 100 ಸೌದಿ ರಿಯಾಲ್ ನಂತೆ ಏರಲಿದೆ.
ಭಟ್ಕಳ, ದಕ್ಷಿಣ ಕನ್ನಡ, ಕೊಡಗಿನವರು
ಇವರಲ್ಲಿ ಹೆಚ್ಚಿನವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು, ಕೊಡಗು, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಅಲ್ಲಿ ಗಳಿಸಿದ್ದೆಲ್ಲ ಅವಲಂಬನಾ ತೆರಿಗೆ ಎಂಬ ಹೊರೆ ನುಂಗಿ ನೀರು ಕುಡಿದಿದೆ. ಕೆಲಸವಿಲ್ಲದೆ ಖಾಲಿ ಕುಳಿತವರನ್ನು ಕೆಲಸಕ್ಕೆ ಅಟ್ಟಬೇಕು, ನಿಯಮಬಾಹಿರವಾಗಿ ಇರುವವರನ್ನು ಹೊರಹಾಕಬೇಕು ಎಂಬ ಉದ್ದೇಶದಿಂದ ಈ ತೆರಿಗೆಯನ್ನು ಹೇರುವವರೆಗೆ ಸೌದಿ ಅರೇಬಿಯಾ ಹೆಚ್ಚೂಕಡಿಮೆ ತೆರಿಗೆ ರಹಿತವಾಗಿತ್ತು, ಹಣ ಮಾಡಬೇಕೆಂಬುವವರಿಗೆ ಸ್ವರ್ಗವಾಗಿತ್ತು.
ಕೆಲವು ಉದ್ಯೋಗಿಗಳು ಮಾತ್ರ ಅಲ್ಲೇ ಉಳಿದುಕೊಂಡಿದ್ದಾರೆ
ವಾಪಸ್ ಬಂದಿರುವವ ಕುಟುಂಬಗಳಲ್ಲಿ ಕೆಲವರು ಸೌದಿಯಲ್ಲಿ ಕೆಲಸಕ್ಕಿದ್ದರೆ, ಕೆಲವರು ತಾವು ಮಾತ್ರ ಅಲ್ಲಿ ಉಳಿದುಕೊಂಡು ಅವಲಂಬಿತರನ್ನು ಮಾತ್ರ ಕರ್ನಾಟಕಕ್ಕೆ ವಾಪಸ್ ಕಳಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ, 500ರಿಂದ 1500 ಕುಟುಂಬಗಳು ಗಂಟುಮೂಟೆ ಕಟ್ಟಿಕೊಂಡು ವಾಪಸಾಗಿವೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರಪ್ರದೇಶ, ತೆಲಂಗಾಣ, ಕೇರಳದ ಜನರಿಗೂ ಹೊಡೆತ ನೀಡಿದೆ. ಕಲಿತ ಹೆಣ್ಣುಮಕ್ಕಳು ಮತ್ತು ಗಂಡಸರು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕೆಲವರು ಮಾತ್ರ ಯಶಸ್ವಿಯಾಗುತ್ತಿದ್ದಾರೆ.
ಉದ್ಯೋಗ ಗಿಟ್ಟಿಸಿಕೊಳ್ಳಲು ಪರದಾಟ
ವರ್ಷಾನುಗಟ್ಟಲೆ ಸೌದಿಯಲ್ಲಿಯೇ ಇದ್ದ ಮೇಲೆ ಇಲ್ಲಿಗೆ ವಾಪಸ್ ಬಂದು ಬದುಕು ಕಟ್ಟಿಕೊಳ್ಳಲು, ಉದ್ಯೋಗ ಹುಡುಕಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಹೀಗೆ ಮರಳಿದವರಿಗೆ ಕೇರಳ ಸರಕಾರ ನೆಲೆ ನೀಡಿ ಸಹಕರಿಸಿದೆ. ಇದೀ ರೀತಿ ಕರ್ನಾಟಕ ಸರಕಾರ ಕೂಡ ತಮ್ಮ ಕೂಗನ್ನು ಕೇಳಿಸಿಕೊಳ್ಳುತ್ತದೆ, ಉದ್ಯೋಗ ದೊರಕಿಸಿಕೊಡಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದಾರೆ. ಸಾಕಷ್ಟು ಹಣ ಮಾಡುವ ಉದ್ದೇಶದಿಂದ ಅಲ್ಲಿ ತೆರಳಿದ್ದ ಜನರು ಇಂದು ಬರಿಗೈ ದಾಸರಾಗಿದ್ದಾರೆ.
ಬಡವರ ಮೇಲೆ ಬರಸಿಡಿಲು
ಜಾಗತಿಕವಾಗಿ ತೈಲ ಬೆಲೆ ಇಳಿಯುತ್ತಿದ್ದರಿಂದ ಸೌದಿ ಅರೇಬಿಯಾ ಕೂಡ ಕಳೆದ ವರ್ಷ ಒತ್ತಡಕ್ಕೆ ಸಿಲುಕಿತ್ತು. ಹಣ ಕ್ರೋಢೀಕರಿಸುವ ಉದ್ದೇಶದಿಂದ ಅವಲಂಬಿತ ವಿದೇಶಿಯರ ಮೇಲೆ ತೆರಿಗೆ ಹೇರುವ ಕಾನೂನನ್ನು ಕಳೆದ ವರ್ಷದ ಜುಲೈನಲ್ಲಿ ಜಾರಿಗೆ ತಂದಿತು. ಇಲ್ಲಿಯವರೆಗೆ 100 ಸೌದಿ ರಿಯಾಲ್ ಇಲ್ಲ ಅವಲಂಬನಾ ತೆರಿಗೆ ಜುಲೈ 2018ರಿಂದ 200 ಆಗಿದ್ದು ಅಲ್ಲಿನ ಬಡವರ ಮೇಲೆ ಸಿಡಿಲು ಬಡಿದಂತಾಗಿದೆ. ಜುಲೈ 2019ರಿಂದ ಇದೇ ತೆರಿಗೆ 300 ಮತ್ತು 2020ರ ಜುಲೈನಿಂದ 400 ಆಗಲಿದೆ.
ಗಂಟು ಇದ್ದವರೂ ಗಂಟುಮೂಟೆ
ಈ ಕಾರಣದಿಂದಾಗಿಯೇ ಸಹಸ್ರಾರು ನೌಕರರು ತಾವು ಮಾತ್ರ ಸೌದಿ ಅರೇಬಿಯಾದಲ್ಲಿ ಉಳಿದುಕೊಂಡು ಒಲ್ಲದ ಮನಸ್ಸಿನಿಂದ, ಅಲ್ಲಿ ಕೆಲಸವಿಲ್ಲದೆ ಇದ್ದ ಕುಟುಂಬದ ಸದಸ್ಯರನ್ನು ಭಾರತಕ್ಕೆ ವಾಪಸ್ ಕಳಿಸಿದ್ದಾರೆ. ನೌಕರರು ಮಾತ್ರ ಅಲ್ಲಿ ಉಳಿದುಕೊಳ್ಳುವುದರಿಂದ ಅವರು ಈ ತೆರಿಗೆಯನ್ನು ಕಟ್ಟುವ ಅಗತ್ಯವಿಲ್ಲ. ಆದರೆ, ಮುಂದೆ ಏನೇನು ಬದಲಾವಣೆಗಳಾಗುವವೋ ಎಂಬ ಹೆದರಿಕೆಯಿಂದ ಮತ್ತು ಮುಂದಿನ ವರ್ಷದಿಂದ ತೆರಿಗೆ ಮತ್ತೆ ಹೆಚ್ಚಳವಾಗುತ್ತಿರುವುದರಿಂದ, ಸಾಕಷ್ಟು ಹಣದ ಗಂಟು ಇಟ್ಟುಕೊಂಡವರು ಕೂಡ ತಮ್ಮ ಕುಟುಂಬವನ್ನು ಈಗಲೇ ವಾಪಸ್ ಕಳಿಸುತ್ತಿದ್ದಾರೆ.
ಸೌದಿ ಅರೇಬಿಯಾ ಮೇಲೂ ಹೊಡೆತ
ಅವಲಂಬನಾ ತೆರಿಗೆ ಹೇರಿರುವುದು ಪರೋಕ್ಷವಾಗಿ ಸೌದಿ ಅರೇಬಿಯಾ ಮೇಲೂ ಹೊಡೆತ ನೀಡಿದೆ. ಅಲ್ಲಿನ ರಿಯಲ್ ಎಸ್ಟೇಟ್ ವ್ಯಾಪಾರ ಪಾತಾಳಕ್ಕೆ ಕುಸಿದಿದೆ. ಬಾಡಿಗೆ ದರಗಳು ಕಮ್ಮಿಯಾಗಿವೆ. ಒಂದು ಕುಟುಂಬದಲ್ಲಿ ಉದ್ಯೋಗಿ, ಹೆಂಡತಿ ಮತ್ತು ಮಕ್ಕಳು ಸೇರಿ ನಾಲ್ವರು ಇದ್ದರೆ ಸದ್ಯದ ತೆರಿಗೆಯ ಪ್ರಕಾರ, ಪ್ರತಿ ತಿಂಗಳು 600 ಸೌದಿ ರಿಯಾಲ್ ಅನ್ನು ಸರಕಾರಕ್ಕೆ ಸಂದಾಯ ಮಾಡಬೇಕಾಗುತ್ತದೆ. ಅಲ್ಲದೆ, ಈ ತೆರಿಗೆಯನ್ನು ವಾರ್ಷಿಕವಾಗಿ ಮತ್ತು ಮುಂಗಡವಾಗಿ ನೀಡಬೇಕಾಗಿರುವುದರಿಂದ ಬಡಜನತೆಗೆ ಭಾರೀ ಏಟು ಬಿದ್ದಂತಾಗಿದೆ, ಹಣ ಮಾಡುವ ಕನಸು ಗಾಳಿಗೋಪುರದಂತೆ ಕುಸಿದುಬಿದ್ದಿದೆ.