'ಯಾವ ಕಾರಣಕ್ಕೂ' ಶಾಲೆ-ಕಾಲೇಜುಗಳಿಗೆ ಬರಬೇಡಿ: ಶಿಕ್ಷಣ ಇಲಾಖೆ
ಬೆಂಗಳೂರು, ಸೆ. 30: ಇದೇ ವಾರದಲ್ಲಿ ಮೂರನೇ ಬಾರಿಗೆ ತನ್ನ ನಿರ್ಧಾರ ಬದಲಿಸುವ ಮೂಲಕ ಶಿಕ್ಷಣ ಇಲಾಖೆ ಗಮನ ಸೆಳೆದಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಶಾಲಾ-ಕಾಲೇಜುಗಳನ್ನು ತೆರೆಯುವ ಕುರಿತು ಶಿಕ್ಷಣ ಇಲಾಖೆ ಅಭಿಪ್ರಾಯ ಕೇಳಿತ್ತು. ಈ ಬಗ್ಗೆ ರಾಜ್ಯದ ಶಾಸಕರು ಹಾಗೂ ಸಂಸದರು ಅಭಿಪ್ರಾಯವನ್ನು ಶಿಕ್ಷಣ ಇಲಾಖೆಗೆ ಒದಗಿಸುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಎಲ್ಲರಿಗೂ ಪತ್ರ ಬರೆದಿದ್ದರು.
ಆದರೆ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಕೊರೊನಾ ವೈರಸ್ ಈಗ ಮತ್ತೆ ಹೆಚ್ಚಾಗುತ್ತಿದೆ. ಈ ಸಂದರ್ಭಧಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿದ್ದವು. ಜೊತೆಗೆ ಶಾಲೆಗಳನ್ನು ಆತುರದಲ್ಲಿ ಆರಂಭಿಸಬಾರದು ಎಂದೂ ವಿಪಕ್ಷಗಳು ಒತ್ತಾಯಿಸಿದ್ದವು.
ಅನ್ಲಾಕ್ 5: ಶಾಲೆಗಳ ಪುನರಾರಂಭ ಯಾವಾಗ? ಹೇಗೆ?
ಇದೀಗ ಮತ್ತೊಂದು ಹೊಸ ಆದೇಶವನ್ನು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ.
ಆತುರದ ನಿರ್ಧಾರವಿಲ್ಲ!
ಕೊರೊನಾ ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯಲು ಮಕ್ಕಳ ಪಾಲಕರು ತೀವ್ರವಾಗಿ ವಿರೋಧಿಸಿದ್ದರು. ಕೊರೊನಾ ಆತಂಕದಿಂದ ವಿಧಾನಸಭೆ ಅಧಿವೇಶನವನ್ನೇ ಮೊಟಕುಗೊಳಿಸಿದ್ದೀರಿ. ಇಂತಹ ಪತಿಸ್ಥಿತಿಯಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಅರ್ಜೆಂಟ್ ಮಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಷ್ಟೇ ಅಲ್ಲ ನಿಮ್ಮ ಮಕ್ಕಳ ರಕ್ಷಣೆಯ ಜವಾಬ್ದಾರಿ ನಮ್ಮದು. ಸಧ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ಚಿಂತನೆ ಇಲ್ಲ ಎಂದಿದ್ದರು.
ಸಂದೇಹ ಪರಿಹರಿಸಿಕೊಳ್ಳಿ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯನ್ನು 21.09.2020 ರಿಂದ ತೆರೆದು ವಿದ್ಯಾರ್ಥಿಗಳು ಸಂದೇಹ ಪರಿಹಾರಕ್ಕಾಗಿ ಶಾಲೆಗಳಿಗೆ ಭೇಟಿ ನೀಡಬಹುದು ಅನುಮತಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಕಡಿಮೆಯಾಗದೇ ಇರುವುದರಿಂದ ಸೆಪ್ಟಂಬರ್ ಅಂತ್ಯದ ಅದನ್ನು ತಡೆಹಿಡಿಯಲಾಗಿತ್ತು.
ಇದೀಗ ಮತ್ತೆ ಆದೇಶವನ್ನುನ ಪರಿಷ್ಕರಿಸಿದ್ದು, ಕೋವಿಡ್ ಹಂಚುತ್ತಿರುವ ಪ್ರಮಾಣ ಕಡಿಮೆಯಾಗದ ಕಾರಣ ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ಬರುವುದು ಕ್ಷೇಮಕರವಲ್ಲ ಎಂದು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ವಾರದಲ್ಲಿ ಮೂರು ಬಾರಿ ಗೊಂದಲ!
ಕಳೆದ ಮಾರ್ಚ್ ತಿಂಗಳಿನಿಂದಲೇ ಕೊರೊನಾ ವೈರಸ್ ಹಾಗೂ ಲಾಕ್ಡೌನ್ನಿಂದಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಹೀಗಾಗಿ ಶಾಲೆ ತೆರೆಯುವ ಬಗ್ಗೆ ಅಭಿಪ್ರಾಯ ಸೂಚಿಸಬೇಕು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಎಲ್ಲಾ ಶಾಸಕರುಗಳಿಗೆ ಪತ್ರ ಬರೆದಿದ್ದರು.
LKG ಇಂದ SSLC ವರೆಗೆ ಯಾವ ತರಗತಿಯನ್ನು ಮೊದಲು ಆರಂಭೀಸಬೇಕು? ಶಾಲೆಯನ್ನು ಆರಂಭಿಸುವುದಾದರೆ ಯಾವಾಗ ಆರಂಭಿಸಬೇಕು? ಎಂಬುದರ ಬಗ್ಗೆ ಅಭಿಪ್ರಾಯ ಹೇಳುವಂತೆ ಮನವಿ ಮನವಿ ಮಾಡಿದ್ದರು. ಶಾಲೆ ಆರಂಭಿಸಿದರೆ ಅದಕ್ಕೆ ಪಾಲಕರು ಯಾವ ರೀತಿಯಾಗಿ ತಮ್ಮ ಸಹಕಾರ ಕೊಡಬಹುದು ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಕೇಳಿದ್ದರು.
ಮಕ್ಕಳ ಪಾಲಕರ ವಿರೋಧ!
ಶಾಲೆ ಆರಂಭಿಸುವ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ರಾಜ್ಯಾದ್ಯಂತ ಪಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಹರಡುವ ಆತಂಕದಿಂದ ವಿಧಾನಸಭೆಯ ಅಧಿವೇಶನವನ್ನು ಮುಂದೂಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. ಇದೀಗ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್ 15ರ ವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರುವುದು ಬೇಡ ಎಂದು ಸೂಚಿಸಿದೆ.
ಆದರೆ ಮುಂದಿನ 15 ದಿನಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ನಿಲ್ಲಲಿದೆಯಾ? ಎಂದು ಮಕ್ಕಳ ಪಾಲಕರು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳ ಸಂದೇಹ ಪರಿಹರಿಸುವ ಬದಲು ಸರ್ಕಾರ ಮೊದಲು ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲಿ. ಆತುರಾತುರವಾಗಿ ಶಾಲೆ ಆರಂಭಿಸುವ ತೀರ್ಮಾನ ಬೇಡ ಎಂದು ಮನವಿ ಮಾಡಿದ್ದಾರೆ.
Recommended Video