ರಾಜ್ಯದ ಎಲ್ಲೆಲ್ಲೂ ಡೆಂಗ್ಯೂ, ವೈರಲ್ ಜ್ವರದ್ದೇ ಸುದ್ದಿ!
ಬೆಂಗಳೂರು, ಅಕ್ಟೋಬರ್ 30 : ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಸುರಿಯುತ್ತಿರುವ ಮಳೆಯ ಪ್ರಭಾವವೊ, ಮಳೆಗಾಲ ಮುಗಿದು ಚಳಿಗಾಲ ಕಾಲಿಟ್ಟಿರುವ ಲಕ್ಷಣವೋ, ಬೆಂಗಳೂರಿನಲ್ಲಿ ಆಷಾಢಮಾಸದಲ್ಲಿ ಕಂಡುಬರುವಂಥ ಕೆಟ್ಟ ಗಾಳಿ ಬೀಸಿದೆ.
ಬಿಸಿಲು ಎಲ್ಲೋ ಮಾಯವಾಗಿದೆ. ಭರ್ರನೆ ಬೀಸುವ ಕುಳಿರ್ಗಾಳಿ ಜನರನ್ನು ಕಂಗೆಡುವಂತೆ ಮಾಡಿದೆ. ಬೆಚ್ಚಗೆ ಮನೆಯಲ್ಲಿರದಿದ್ದರೆ ಇಂಥ ಕೆಟ್ಟ ಗಾಳಿಗೆ ಜ್ವರ ಬಂದು ಮಲಗುವುದು ಗ್ಯಾರಂಟಿ ಎನ್ನುವಂತೆ ಬೆಂಗಳೂರಿನಲ್ಲಿ ವಾತಾವರಣ ಬಿಗಡಾಯಿಸಿದೆ.
ಡೆಂಗ್ಯೂಗೆ ಚಿಕಿತ್ಸೆ ಕೊಡಿಸಲಾಗದೆ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ
ಸಾಲದೆಂಬಂತೆ, ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬರೀ ಜ್ವರದ್ದೇ ಸುದ್ದಿ. ಯಾರಿಗೋ ಚಳಿಜ್ವರ, ಮತ್ತಾರಿಗೋ ವೈರಲ್ ಫೀವರ್, ಇನ್ನಿಷ್ಟು ಜನರಿಗೆ ಡೆಂಗ್ಯೂ, ಚಿಕೂನ್ ಗೂನ್ಯ, ಮಲೇರಿಯಾ, ಎಚ್1ಎನ್1 ಇತ್ಯಾದಿ ಇತ್ಯಾದಿ. ವೈದ್ಯರಿಗೆ ಬಿಡುವಿಲ್ಲದ ಕೆಲಸ.
ರಂಪ ರಾಮಾಯಣ ಎಬ್ಬಿಸಿದ್ದ ಮಳೆಗಾಲ ಮುಗಿದು ಇನ್ನೇನು ಚಳಿಗಾಲ ಆರಂಭವಾಗುತ್ತಿದೆ ಎನ್ನುವಷ್ಟರಲ್ಲಿ ನಗರದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಲವೆಡೆಗಳಲ್ಲಿ ಫಾಗಿಂಗ್ ಮಾಡದೆ ಸೊಳ್ಳೆಗಳು ತಮ್ಮ ರೌದ್ರಾವತಾರವನ್ನು ತೋರಲು ಆರಂಭಿಸಿವೆ.
ಬೆಂಗಳೂರ ಕೆರೆಗಳು ಸೊಳ್ಳೆಗಳ ಬೀಡಾಗುತ್ತಿವೆ
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಬಿಕೊಂಡಿದ್ದ ಕೆರೆಗಳು ಕ್ರಮೇಣ ಬರಿದಾಗುತ್ತ, ತಮ್ಮ ಹಳೆಯ ಸ್ವರೂಪಕ್ಕೆ ಮರಳುತ್ತಿದ್ದಂತೆ, ಕೆರೆಗಳು ಸೊಳ್ಳೆಗಳ ಬೀಡಾಗುತ್ತಿವೆ. ಇದು ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಪುಟ್ಟೇನಹಳ್ಳಿ ಮುಂತಾದ ಕೆರೆಗಳಲ್ಲಿ ಕಂಡುಬಂದಿದೆ.
ಕಸ ಗುಡ್ಡೆಯೇರಿ ಸೊಳ್ಳೆಗಳ ಕಾಟ
ಹಲವಾರು ಅಪಾರ್ಟ್ಮೆಂಟುಗಳಲ್ಲಿ ಕಸ ವಿಲೇವಾರಿ ವೈಜ್ಞಾನಿಕವಾಗಿ ಆಗದೆ, ಬಿಬಿಎಂಪಿಯವರು ಕಸ ತೆಗೆದುಕೊಂಡು ಹೋಗುವುದನ್ನು ವಿಳಂಬ ಮಾಡುತ್ತಿರುವುದರಿಂದ ಕಸ ಗುಡ್ಡೆಯೇರಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಕೆಲ ಅಪಾರ್ಟ್ಮೆಂಟಿನವರೇ ತಮ್ಮ ಕೈಯಿಂದ ಒಂದಿಷ್ಟು ಖರ್ಚು ಮಾಡಿ ಸೊಳ್ಳೆ ಓಡಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಐವರು ಡೆಂಗ್ಯೂ ಜ್ವರಕ್ಕೆ ಅಸುನೀಗಿದ್ದಾರೆ
ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಬೆಂಗಳೂರಿಗಿಂತ ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿವೆ. ಅಕ್ಟೋಬರ್ ತಿಂಗಳಲ್ಲಿ ದಾವಣಗೆರೆ, ಹಾವೇರಿ, ಮೈಸೂರು ಮತ್ತು ಮಂಡ್ಯದಲ್ಲಿ ಇಬ್ಬರು ಸೇರಿ ಒಟ್ಟು ಐವರು ಡೆಂಗ್ಯೂ ಜ್ವರಕ್ಕೆ ಅಸುನೀಗಿದ್ದಾರೆ.
ಕಲಬುರಗಿಯಲ್ಲಿ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣ
ಕಲಬುರಗಿಯಲ್ಲಿ 5704, ಮೈಸೂರಿನಲ್ಲಿ 4155, ಮಂಡ್ಯದಲ್ಲಿ 3203, ಉಡುಪಿಯಲ್ಲಿ 3441, ತುಮಕೂರಿನಲ್ಲಿ 3931, ಬಳ್ಳಾರಿಯಲ್ಲಿ 2534, ಚಿತ್ರದುರ್ಗದಲ್ಲಿ 2790, ಬೆಂಗಳೂರು ನಗರದಲ್ಲಿ 2386 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಗ್ರಾಮಾಂತರಕ್ಕಿಂತ ನಗರಗಳಲ್ಲಿಯೇ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ.
ಚಿಕೂನ್ ಗುನ್ಯ ಕಲಬುರಗಿಯಲ್ಲಿ ಹೆಚ್ಚು
ಇನ್ನು ಶಂಕಿತ ಚಿಕೂನ್ ಗುನ್ಯ ಪ್ರಕರಣಗಳು ಕೂಡ ಬೆಂಗಳೂರು, ಕಲಬುರಗಿ, ತುಮಕೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ದಾಖಲಾಗಿವೆ. ಆದರೆ, ಅದೃಷ್ಟವಶಾತ್ ಯಾರೂ ಚಿಕೂನ್ ಗುನ್ಯಕ್ಕೆ ಬಲಿಯಾದ ವರದಿ ಬಂದಿಲ್ಲ.
ಹದಿನೈದು ರೋಗಿಗಳು ಅಸುನೀಗಿದ್ದಾರೆ
ಡೆಂಗ್ಯೂ ಮತ್ತು ಚಿಕೂನ್ ಗುನ್ಯಗಳ ಜೊತೆ ಎಚ್1ಎನ್1 ಅಥವಾ ಸ್ವೈನ್ ಫ್ಲ್ಯೂ ಪ್ರಕರಣಗಳು ಕೂಡ ಕಳೆದ ಎಂಟು ವರ್ಷಗಳಲ್ಲಿ ರಾಜ್ಯದಲ್ಲಿ ಹೆಚ್ಚಾಗಿವೆ. ಒಟ್ಟು 3245 ಎಚ್1ಎನ್1 ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದರೆ, ಅವುಗಳಲ್ಲಿ 15 ಜನರು ಅಸುನೀಗಿರುವುದು ತಿಳಿದುಬಂದಿದೆ.
ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯ
ಕರ್ನಾಟಕದಾದ್ಯಂತ ಜ್ವರದ ಲಕ್ಷಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಾಗರಿಕರಿಗೆ ಅನಿವಾರ್ಯವಾಗಿದೆ. ಜ್ವರದ ಲಕ್ಷಣಗಳು ಕಂಡುಬರುತ್ತಿದ್ದಂತೆ ತಕ್ಷಣ ವೈದ್ಯರಿಂದ ತಪಾಸಣೆ ಮಾಡಿಸುವುದು, ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡುವುದು ಅತ್ಯಗತ್ಯ.
ಮಕ್ಕಳು ಮತ್ತು ವೃದ್ಧರ ಬಗ್ಗೆ ಹೆಚ್ಚಿನ ನಿಗಾ
ಜೊತೆಗೆ, ಮಕ್ಕಳು ಮತ್ತು ವೃದ್ಧರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಚಳಿಗಾಳಿಗೆ ಹೆಚ್ಚು ತೆರೆದುಕೊಳ್ಳದೆ ದೇಹವನ್ನು ಬೆಚ್ಚಗಿಡಿ, ಮನೆಗಳಲ್ಲಿ ಮತ್ತು ಸುತ್ತಮುತ್ತಲಲ್ಲಿ, ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಕ್ರಮಗಳನ್ನು ತೆಗೆದುಕೊಳ್ಳಿ. ಮನೆಗಳಲ್ಲಿ ಸೊಳ್ಳೆಪರದೆ ತಪ್ಪದೆ ಬಳಸಿ.