ಅಪನಗದೀಕರಣ : ಸಂಭ್ರಮಾಚರಣೆ, ಪ್ರತಿಭಟನೆ
Recommended Video
ಬೆಂಗಳೂರು, ನವೆಂಬರ್ 8 : ನೋಟುಗಳ ನಿಷೇಧಕ್ಕೆ ಒಂದು ವರ್ಷ ಪೂರೈಸಿದೆ. ದೇಶಾದ್ಯಂತ ಪರ-ವಿರೋಧ ಚರ್ಚೆ ಇನ್ನೂ ನಡೆಯುತ್ತಿದೆ. ಕರ್ನಾಟಕದಲ್ಲಿ ಬುಧವಾರ ಕಾಂಗ್ರೆಸ್ ಕರಾಳ ದಿನ ಆಚರಣೆ ಮಾಡಿ ಪ್ರತಿಭಟನೆ ನಡೆಸಿದರು, ಬಿಜೆಪಿ ಸಂಭ್ರಮಾಚರಣೆ ನಡೆಸಿತು.
ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?
ಅಪನಗದೀಕರಣದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಮುಂದಾಲೋಚನೆ ಇಲ್ಲದ ನಿರ್ಧಾರದಿಂದ ಜನರು ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರಿದ್ದು ರಾಜ್ಯಾದ್ಯಂತ 'ಕರಾಳ ದಿನಾಚರಣೆ' ಆಚರಿಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ನೋಟ್ ಬ್ಯಾನ್ ಬೆಂಬಲಿಸಿದವರಿಗೆ ವಂದನೆ ಸಲ್ಲಿಸಿದ ಮೋದಿ
ಅಪನಗದೀಕರಣದಿಂದ ಉಪಯೋಗವಾಗಿದೆ ಎಂದು ಬಿಜೆಪಿ ಸಂಭ್ರಮಾಚರಣೆ ನಡೆಸುತ್ತಿದೆ. 500 ಮತ್ತು 1000 ರೂ. ನೋಟುಗಳನ್ನು ನಿಷೇಧ ಮಾಡುವ ಮೂಲಕ ಕಪ್ಪುಹಣವನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ನೋಟು ನಿಷೇಧದ ನೆನಪಿಗೆ ಇಟ್ಟುಕೊಂಡ ಆ 500ರ ನೋಟು!
ಚಿಕ್ಕಮಗಳೂರಿನ ಮುಗುಳವಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ಕ್ರಾಂತಿಕಾರಕ ತೀರ್ಮಾನ ಮಾಡಿದೆ ಎಂದು ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಗಣನೆಗೆ ತೆಗೆದುಕೊಳ್ಳದೇ ನೋಟು ಅಮಾನ್ಯೀಕರಣ ಮಾಡಿದ್ದಾರೆ' ಎಂದು ಕುಮಾರಸ್ವಾಮಿ ಆರೋಪಿಸಿದರು.
ಅಪನಗದೀಕರಣ ಎಂಬುದು ಮೋದಿಯ ವಿವೇಚನಾರಹಿತ ನಡೆ: ರಾಹುಲ್
'ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನ ಮಂತ್ರಿಗಳು ನೋಟು ಅಮಾನ್ಯೀಕರಣದಿಂದ ದೇಶದ ಭ್ರಷ್ಟ ಜನರು, ಭಯೋತ್ಪಾದಕರ ಬಳಿ ಇರುವ ಹಣ ತಂದುಬಡವರಿಗೆ ಹಂಚುತ್ತೇನೆ ಎಂದು ಹೇಳಿದ್ದರು. 2 ಸಾವಿರ ರೂಪಾಯಿಗಳ ಹೊಸ ನೋಟುಗಳನ್ನು ಮುದ್ರಿಸಲು ಸರ್ಕಾರ ಎಷ್ಟು ವೆಚ್ಚ ಮಾಡಿದೆ?' ಎಂದು ಪ್ರಶ್ನಿಸಿದರು.
ಶಿರಸಿಯಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ
ನೋಟುಗಳ ನಿಷೇಧದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದರು. ಬುಧವಾರ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಕರಾಳ ದಿನ ಆಚರಣೆ ಮಾಡಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಕರಾಳ ದಿನಾಚರಣೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದ ಕೋರ್ಟ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನೋಟುಗಳ ನಿಷೇಧವಾದಿ ಒಂದು ವರ್ಷ ಕಳೆದರೂ ಸಹ ಜನ ಸಾಮಾನ್ಯರಲ್ಲಿ ಚಿಲ್ಲರೆ ಅಭಾವ ಇನ್ನೂ ನೀಗಿಲ್ಲ, ಸಣ್ಣ ವ್ಯಾಪಾರಸ್ಥರ ಸಮಸ್ಯೆ ನೀಗಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಹಣದ ಪ್ರತಿಕೃತಿ ದಹನ
ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ನಗರದ ಗೋಪಿ ವೃತ್ತದ ಬಳಿ ಜಿಲ್ಲಾ ಬಿಜೆಪಿ ಮುಖಂಡರು ಕಪ್ಪುಹಣ ಸೂಟ್ ಕೇಸ್ ಪ್ರತಿಕೃತಿ ದಹನ ನಡೆಸಿದರು. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿದೆ ಎಂದು ಹೇಳಿದರು.ಜಿಲ್ಲಾ ಬಿಜೆಪಿಯ ಮುಖಂಡರಾದ ಡಿ.ಎಸ್.ಅರುಣ್, ಜ್ಯೋತಿಪ್ರಕಾಶ್, ಅರ್ಚನಾ ಬೆಳ್ಳೆಕೆರೆ, ಸುರೇಖ ಮುರುಳೀಧರ ಮೊದಲಾದವರು ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಪ್ರತಿಭಟನೆ
ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಲಬುರಗಿ ನಗರದ ಜಗತ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಲಾಯಿತು. ಶಾಸಕರಾದ ಬಿ.ಆರ್.ಪಾಟೀಲ, ಅಲ್ಲಮ್ಮ ಪ್ರಭು ಪಾಟೀಲ ಇತರರು ಉಪಸ್ಥಿತರಿದ್ದರು.