ಮದುವೆ ಸಹಾಯ ಧನ ಕೊಡೋಕೆ ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ಧ ಲಂಚಬಾಕರು
ಬೆಂಗಳೂರು, ಜನವರಿ 28 : ಗಂಗಾ ಕಲ್ಯಾಣ ಯೋಜನೆ ಅಡಿ ರೈತ ಪಡೆದಿದ್ದ ಬೋರ್ ವೆಲ್ ಗೆ ಪವರ್ ಕನ್ಷನ್ ಕೊಡಲಿಕ್ಕೆ ಲಂಚ ಕೇಳಿ ಇಂಜಿನಿಯರ್ ಜೈಲಿಗೆ ಹೋಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮದುವೆ ಸಾಹಾಯ ಧನ ಪಡೆಯಲು ನವ ಜೋಡಿಯಿಂದ ಲಂಚ ವಸೂಲಿ ಮಾಡಿ ಇಬ್ಬರು ಕಾರ್ಮಿಕ ಇಲಾಖೆ ಅಧಿಕಾರಿಗಳು ಜೈಲು ಸೇರಿದ್ದಾರೆ.
ಎಸಿಬಿ ಅಧಿಕಾರಿಗಳು ಗುರುವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೂವರು ಅಧಿಕಾರಿಗಳನ್ನು ಬಂಧಿಸಿದ್ದು, ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅನವೇರಿ ಗ್ರಾಮದ ನಿವಾಸಿಯೊಬ್ಬರಿಗೆ ಗಂಗಾ ಕಲ್ಯಾಣ ಯೋಜನೆ ಬೋರ್ ವೆಲ್ ಕೊರೆಸಲಾಗಿತ್ತು. ಅದಕ್ಕೆ ಟ್ರಾನ್ಸ್ ಫರ್ಮರ್ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡುವಂತೆ ಕೋರಿ ಭದ್ರಾವತಿ ಉಪ ವಿಭಾಗದ ಹೊಳೆ ಹೊನ್ನೂರು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ನೋಡಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಎಸ್. ಪ್ರಕಾಶ್ ಐದು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಗುರುವಾರ ರೈತನಿಂದ ಲಂಚ ಸ್ವೀಕರಿಸುವಾಗ ಶಿವಮೊಗ್ಗ ಜಿಲ್ಲೆಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣ ಸಮೇತ ಬಂಧಿಸಿದ್ದಾರೆ. ಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಮಾಡಿದ್ದ ಇಬ್ಬರು ಕಾರ್ಮಿಕರು ಮದುವೆಯಾಗಿದ್ದರು. ಮದುವೆ ಸಹಾಯ ಧನ ಮಂಜೂರು ಮಾಡುವಂತೆ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ನೋಡಿದ ಹಿರಿಯ ಲೇಬರ್ ಇನ್ ಸ್ಪೆಕ್ಟರ್ ಅವರ ಕಂಪ್ಯೂಟರ್ ಆಪರೇಟರ್ ಮಾಲತಿ ಅವರನ್ನು ಭೇಟಿ ಮಾಡಿದಾಗ, ದಾಖಲಾತಿಗಳನ್ನು ತರುವಂತೆ ಸೂಚಿಸಿದ್ದಾರೆ. ದಾಖಲೆಗಳನ್ನು ನೀಡಿದ ಬಳಿಕ ಲೇಬರ್ ಇನ್ಸ್ಪೆಕ್ಟರ್ ಗೀತಾ ಅವರ ಬಳಿ ಕರೆದುಕೊಂಡು ಹೋಗಿದ್ದಾರೆ. ಮಾಲತಿ ಅವರ ಕೈಗೆ ಮೂರು ಸಾವಿರ ಲಂಚ ನೀಡುವಂತೆ ಗೀತಾ ಸೂಚಿಸಿದ್ದು, ಅದರಂತೆ ಮೂರು ಸಾವಿರ ಲಂಚ ಸ್ವೀಕರಿಸಿದ ಮಾಲತಿಯನ್ನು ಚಾಮರಾಜನಗರ ಜಿಲ್ಲಾ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಬಡವರ ಬಳಿ ಸುಲಿಗೆ ಮಾಡಲು ಹೋಗಿ ಮೂವರು ಅಧಿಕಾರಿಗಳು ಜೈಲುಪಾಲಾಗಿದ್ದಾರೆ.