ರಾಜ್ಯದಲ್ಲಿ 77% ಕೊರೊನಾ ಪ್ರಕರಣಗಳಿಗೆ "ಡೆಲ್ಟಾ" ಕಾರಣ; ಮಕ್ಕಳಲ್ಲೂ ಇದೇ ಸೋಂಕು
ಬೆಂಗಳೂರು, ಆಗಸ್ಟ್ 03: ರಾಜ್ಯದಲ್ಲಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರವೇ ಪ್ರಧಾನವಾಗಿದ್ದು, ಮಕ್ಕಳಲ್ಲಿ ಸೋಂಕು ಉಂಟಾಗಲು ಈ ರೂಪಾಂತರವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಕೊರೊನಾ ಎರಡನೇ ಅಲೆ ಸಂದರ್ಭ ಸೋಂಕಿನ ಆನುವಂಶಿಕ ಅನುಕ್ರಮ ಪರೀಕ್ಷೆ (Genome Sequencing) ನಡೆಸಲಾಗಿದ್ದು, ಡೆಲ್ಟಾ ರೂಪಾಂತರ ಅತಿ ವೇಗವಾಗಿ ಹರಡಬಲ್ಲದಾಗಿ ಸಾಬೀತಾಗಿದೆ.
"ಕೊರೊನಾ ಸೋಂಕಿತ ಮಕ್ಕಳಲ್ಲಿ ಬೇರೆ ಯಾವುದೇ ರೂಪಾಂತರ ಪತ್ತೆಯಾಗಿಲ್ಲ. ಡೆಲ್ಟಾ ರೂಪಾಂತರ ಮಾತ್ರ ಗೋಚರಿಸಿದೆ. ರಾಜ್ಯದಲ್ಲಿ ದಾಖಲಾದ ಬಹುತೇಕ ಕೊರೊನಾ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ಪ್ರಧಾನವಾಗಿದೆ" ಎಂದು ಜೆನೋಮ್ ಸೀಕ್ವೆನ್ಸಿಂಗ್ನ ನೋಡಲ್ ಅಧಿಕಾರಿ ಪ್ರೊ. ವಿ. ರವಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮಕ್ಕಳಲ್ಲಿನ ಕೊರೊನಾ ಸೋಂಕಿನ ಆನುವಂಶಿಕದ ಕುರಿತು ರವಿ ಅವರು ಅಧ್ಯಯನ ಕೈಗೊಂಡಿದ್ದು, "ಇಂಡಿಯನ್ ಎಕ್ಸ್ಪ್ರೆಸ್" ಜೊತೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಮಕ್ಕಳಲ್ಲಿನ ಸೋಂಕಿನ ಕುರಿತು ಸಿದ್ಧತೆಗೆ ಆದ್ಯತೆ
ರಾಜ್ಯದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಗೆ ಸಿದ್ಧತೆಯ ಭಾಗವಾಗಿ ಎರಡನೇ ಅಲೆಯಲ್ಲಿ ಸೋಂಕಿತರಾದ ಮಕ್ಕಳಲ್ಲಿನ ಸೋಂಕಿನ ಜೆನೋಮ್ ಪರೀಕ್ಷೆ ನಡೆಸಲಾಗಿದೆ ಎಂದು ರವಿ ಹೇಳಿದ್ದಾರೆ. ಮಕ್ಕಳಿಗೆ ಬೇರೆ ರೂಪಾಂತರಗಳೇನಾದರೂ ಸಮಸ್ಯೆಯಾಗಬಹುದೇ ಎಂಬ ಕುರಿತು ಅರ್ಥ ಮಾಡಿಕೊಳ್ಳಲು ಈ ಪರೀಕ್ಷೆ ನೆರವಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಏರಿಕೆ; ಮತ್ತೆ ರಾತ್ರಿ, ವೀಕೆಂಡ್ ಕರ್ಫ್ಯೂ ಜಾರಿಗೆ ಸಲಹೆ
ಕೊರೊನಾ ಬಿಕ್ಕಟ್ಟಿನ ಸಂದರ್ಭ ಜೆನೋಮ್ ಸೀಕ್ವೆನ್ಸಿಂಗ್
ರಾಜ್ಯದಲ್ಲಿನ ಕೊರೊನಾ ಸೋಂಕಿನ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ತಾಂತ್ರಿಕ ಸಲಹಾ ಸಮಿತಿಯು ನಿಮ್ಹಾನ್ಸ್ನ ಮಾಜಿ ಪ್ರಾಧ್ಯಾಪಕ ಹಾಗೂ ಕರ್ನಾಟಕದ ಎಂಟು ಸದಸ್ಯರ ಜೆನೋಮಿಕ್ ಸರ್ವೆಲೆನ್ಸ್ ಸಮಿತಿ ಅಧ್ಯಕ್ಷರಾದ ಪ್ರೊ. ವಿ ರವಿ ಅವರಿಗೆ ಕೊರೊನಾ ಬಿಕ್ಕಟ್ಟಿನ ಸಂದರ್ಭ ಮಕ್ಕಳಲ್ಲಿನ ಕೊರೊನಾ ಸೋಂಕಿನ ಸಂಬಂಧ ಅಧ್ಯಯನ ನಡೆಸಲು ಸೂಚಿಸಲಾಗಿತ್ತು.
77 % ಸೋಂಕಿಗೆ ಡೆಲ್ಟಾ ಕಾರಣ
ಈ ಜೆನೋಮ್ ಸೀಕ್ವೆನ್ಸಿಂಗ್ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 77 ಪ್ರತಿಶತದಷ್ಟು ಸೋಂಕು ಡೆಲ್ಟಾ (B.1.617.2) ರೂಪಾಂತರದಿಂದ ಉಂಟಾಗಿವೆ. 1089ರಲ್ಲಿ 1413 ಕೊರೊನಾ ಪ್ರಕರಣಗಳು ಡೆಲ್ಟಾ ರೂಪಾಂತರದ್ದಾಗಿವೆ. ಡೆಲ್ಟಾ ಹೊರತಾಗಿ 159 ಪ್ರಕರಣಗಳಲ್ಲಿ ಕಪ್ಪಾ ರೂಪಾಂತರ, 155 ಪ್ರಕರಣಗಳಲ್ಲಿ ಆಲ್ಫಾ ರೂಪಾಂತರ, ಏಳರಲ್ಲಿ ಬೆಟಾ ರೂಪಾಂತರ, ಮೂರರಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿದೆ. ಕರ್ನಾಟಕದಲ್ಲಿ ದಾಖಲಾದ 29.05 ಲಕ್ಷ ಪಾಸಿಟಿವ್ ಪ್ರಕರಣಗಳಲ್ಲಿ ಸುಮಾರು 10 ಪ್ರತಿಶತದಷ್ಟು ಮಕ್ಕಳು ಸೋಂಕಿಗೆ ಒಳಗಾಗಿದ್ದು, 0-19 ವಯಸ್ಸಿನವರಾಗಿದ್ದಾರೆ ಹಾಗೂ ಅವರಲ್ಲಿ ಮರಣ ಪ್ರಮಾಣವು ಶೇ 0.1ರಷ್ಟಿದೆ ಎಂದು ಪರೀಕ್ಷೆ ತಿಳಿಸಿದೆ.
ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಭೀತಿ
ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ರಾಜ್ಯದಲ್ಲಿ ಕೊರೊನಾ ಆತಂಕ ಉಂಟಾಗಿದೆ. ಕರ್ನಾಟಕದಲ್ಲಿ ಸೋಮವಾರ 1285 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1383 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 29,08,284ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,612 ಆಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ, ಕೊರೊನಾ ನಿಯಂತ್ರಣಕ್ಕೆ ಕೆಲವೊಂದು ಸಲಹೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೈಮೀರಿ ಹೋಗುವ ಮುನ್ನ ಕೊರೊನಾ ನಿಯಂತ್ರಣಕ್ಕೆ ಮತ್ತೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಹೇರುವಂತೆ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.