ಮಳೆ ಕೊರತೆ, ಮುಂಗಾರು ವಿಳಂಬ, ಜಲಾಶಯಗಳು ಖಾಲಿ ಖಾಲಿ
ಮುಂಗಾರು ಮಳೆ ವಿಳಂಬದಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಖಾಲಿಯಾಗತೊಡಗಿವೆ. ಮಳೆ ಕೊರತೆ, ಬರ ಪರಿಸ್ಥಿತಿ ನಡುವೆ ಸರ್ಕಾರ ಮತ್ತೊಮ್ಮೆ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಮುಂಗಾರು ಮಳೆ ಕಾಣದ ಕಂಗೆಟ್ಟಿರುವ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ನೆಲಮಟ್ಟದಲ್ಲಿರುವುದು ಆತಂಕಕಾರಿಯಾಗಿದೆ.
ಸತತ ಬರದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಮುಂಗಾರು ಆರಂಭ ನಿಗದಿತ ಸಮಯಕ್ಕಿಂತ ವಿಳಂಬವಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ವರಾಹಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಜಲಾಶಯಗಳ ನೀರು ಖಾಲಿಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(KSNMDC) ನಿರ್ದೇಶಕ ಜಿಎಸ್ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರು
ಕಳೆದ ವರ್ಷ ಮೇ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಬಂದಿತ್ತು. ಜಲಾಶಯಗಳು ತುಂಬಿ ತುಳುಕಿತ್ತು. ಈ ವೇಳೆಗಾಗಲೇ ಕಬಿನಿ ತುಂಬಿರಬೇಕಿತ್ತು. ಆದರೆ, ಮಳೆ ಕೊರತೆ, ಮುಂಗಾರು ವಿಳಂಬ ಜೊತೆಗೆ ವಾಯು ಚಂಡಮಾರುತದ ಪ್ರಭಾವದಿಂದ ಮಳೆ ನಿಧಾನವಾಗಿದ್ದು, ಜಲಾಶಯಗಳು ನೀರಿನಿಂದ ತುಂಬಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕು ಎಂದಿದ್ದಾರೆ.
ಕಳೆದ ವರ್ಷದ ಹೋಲಿಕೆಯಲ್ಲಿ ಶೇ 50ಕ್ಕಿಂತಲೂ ಕಡಿಮೆ ನೀರು
ಕಳೆದ ವರ್ಷ ಸಂಗ್ರಹವಾಗಿದ್ದ ನೀರಿಗಿಂತ ಶೇ 50ಕ್ಕಿಂತಲೂ ಕಡಿಮೆ ನೀರು ಈ ಜಲಾಶಯಗಳಲ್ಲಿ ಇದೆ. ಒಟ್ಟು 13 ಜಲಾಗರಗ ಪೈಕಿ ಸೂಪಾ ಮತ್ತು ನಾರಾಯಣ ಪುರ ಜಲಾಶಯ ಮಾತ್ರ ಶೇ 30ರಷ್ಟು ನೀರು ಹೊಂದಿವೆ. ಕಾವೇರಿ ಕೊಳ್ಳದ ಜಲಾಶಯಗಳು ಶೇ 10ರಿಂದ ಶೇ 14ರಷ್ಟು ಮಾತ್ರ ನೀರು ಹೊಂದಿವೆ.
ಯಾವ ಯಾವ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹ
26.14 ಟಿಎಂಸಿ ಅಡಿ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 7.88 ಟಿಎಂಸಿ ಮಾತ್ರ ನೀರಿದೆ. ಕಳೆದ ವರ್ಷ ಸುಮಾರು 14 ಟಿಎಂಸಿ ನೀರಿತ್ತು. ಮಲಪ್ರಭ ಜಲಾಶಯದಲ್ಲಿ 0.93 ಅಡಿ ಟಿಎಂಸಿ ನೀರಿದೆ. ಘಟಪ್ರಭದಲ್ಲಿ 0.41 ಟಿಎಂಸಿ ಅಡಿಯಷ್ಟು ನೀರಿದೆ. ತುಂಗಭದ್ರಾ ಜಲಾಶಯದಲ್ಲಿ 2.19 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಈ ಜಲಾಶಯಗಳಲ್ಲಿ ಕನಿಷ್ಠ 20 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಮಲೆನಾಡಾಗಿದ್ದ ಹಿರಿಯೂರು ಇಂದಾಗಿದೆ ಬರದ ನಾಡು
ಹಿಂಗಾರು ಕೈಕೊಟ್ಟಿದೆ, ಮುಂಗಾರು ದುರ್ಬಲವಾಗಿದೆ
ಹಿಂಗಾರು ಕೈಕೊಟ್ಟಿದೆ, ಮುಂಗಾರು ದುರ್ಬಲವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಆ ಭಾಗದಲ್ಲಿ ಜಲಾಶಯಗಳಿಗೆ ಒಳ ಹರಿವು ಕಂಡು ಬಂದಿಲ್ಲ. ತಿಂಗಳಾಂತ್ಯಕ್ಕೆ ಮುಂಗಾರು ಚುರುಕುಗೊಳ್ಳಲಿದ್ದಾರೆ. ನೀರಿನ ಕೊರತೆ ತೀವ್ರವಾಗಿ ಕಾಡಲಿದೆ.
ಮಳೆ ಕೊರತೆ, ಮುಂಗಾರು ವಿಳಂಬ ಜೊತೆಗೆ ವಾಯು ಚಂಡಮಾರುತದ ಪ್ರಭಾವದಿಂದ ಮಳೆ ನಿಧಾನವಾಗಿದ್ದು, ಜಲಾಶಯಗಳು ನೀರಿನಿಂದ ತುಂಬಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕು
ದೇಶದೆಲ್ಲೆಡೆ ಇದೇ ಪರಿಸ್ಥಿತಿ
ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ತಮಿಳುನಾಡನ್ನು ಆವರಿಸಲಿದೆ. ಅಲ್ಲಿಂದ ಕರ್ನಾಟಕ, ಕೊಂಕಣ ಹಾಗೂ ಗೋವಾ, ಆಂಧ್ರಪ್ರದೇಶ, ಬಂಗಾಳ, ಸಿಕ್ಕಿಂ, ಒಡಿಶಾದಲ್ಲಿ ಮಳೆಯಾಗಲಿದೆ. ಜೂನ್ 25 ರ ಹೊತ್ತಿಗೆ ಮಹಾರಾಷ್ಟ್ರ ಸೇರಿ ದೇಶಾದ್ಯಂತ ಮುಂಗಾರು ಪ್ರಬಲವಾಗಲಿದೆ. ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೀರಿನ ಕೊರತೆ ಎದುರಾಗಿದೆ, ಬರ ಪರಿಸ್ಥಿತಿ ಎದುರಿಸಲಾಗುತ್ತಿದೆ. ಸುತ್ತಮುತ್ತಲಿರುವ ಜಲಾಶಯಗಳಲ್ಲಿ ಶೇ.10ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾದಲ್ಲಿ ಮುಂದಿನ ಮೂರು ನಾಲ್ಕು ದಿನ ಮಳೆ ಮುಂದುವರೆಯಲಿದೆ. ಈ ತಿಂಗಳು ಅತಿ ಕಡಿಮೆ ಮಳೆಯಾಗಲಿದೆ.
ಇನ್ನೆರೆಡು ದಿನ ರಾಜ್ಯದಲ್ಲಿ ಮಳೆ ಬರುವ ಯಾವ ಲಕ್ಷಣಗಳೂ ಇಲ್ಲ
ಮುನ್ಸೂಚನೆ : ಮಳೆಯಾಗುವ ಯಾವ ಲಕ್ಷಣ ಇದೆಯೆ?
ಜೂನ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಮಳೆಯಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಜೂನ್ 21ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಿಂಗಳಾಂತ್ಯಕ್ಕೆರಾಜ್ಯಾದ್ಯಂತ ಮಳೆಯಾಗಲಿದೆ.
ಕಳೆದ ವರ್ಷ ಜೂನ್ 9ಕ್ಕೆ ಪ್ರವೇಶಿಸಿದ್ದ ಮುಂಗಾರು ಜೂನ್ 14ರ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿ ಉತ್ತಮ ಮಳೆಯಾಗಿತ್ತು. ಕಳೆದ ವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿತ್ತು. ಆದರೆ, ಅಧಿಕೃತವಾಗಿ ಮುಂಗಾರು ಪ್ರವೇಶ ತೀರಾ ವಿಳಂಬವಾಗಿದೆ.