ರಾಜ್ಯಕ್ಕೆ ತೀವ್ರವಾಗಿ ಕಾಡಲಾರಂಭಿಸಿದ ಈ ಇಬ್ಬರು ದಿಗ್ಗಜರ ಚುನಾವಣಾ ಸೋಲು
ವಿರೋಧ ಪಕ್ಷಗಳು ಪ್ರಬಲವಾಗಿದ್ದರೆ, ಆಡಳಿತ ಪಕ್ಷದ ತಪ್ಪನ್ನು ಸಮರ್ಥವಾಗಿ ಎತ್ತಿ ತೋರಿಸಬಹುದು ಮತ್ತು ಅದರ ವಿರುದ್ದ ಬೀದಿಗಿಳಿಯಬಹುದು. ಬಹುಮತ ಅನ್ನೋದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವ ಆಡಳಿತ ಪಕ್ಷದ ಧೋರಣೆಗೆ ಕಡಿವಾಣವನ್ನೂ ಹಾಕಬಹುದು.
ಆದರೆ, ರಾಜ್ಯದ ವಿಚಾರಕ್ಕೆ ಬಂದಾಗ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ, ಮೋದಿ ಸರಕಾರದ ವಿರುದ್ದ ಸಟೆದು ನಿಲ್ಲುತ್ತಿಲ್ಲ. ಅಲ್ಲಲ್ಲಿ, ಹೋರಾಟ ನಡೆಸುತ್ತಿದ್ದರೂ, ಅದರ ಬಿಸಿ ಕೇಂದ್ರಕ್ಕೆ ತಟ್ಟುತ್ತಿಲ್ಲ.
ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರೆ, ಬರ ಪರಿಹಾರ ಇಷ್ಟೊಂದು ವಿಳಂಬವಾಗುತ್ತಿರಲಿಲ್ಲ. ಉತ್ತರ ಕರ್ನಾಟಕ ಭಾಗದ ಜನತೆಯ ಕಷ್ಟಕ್ಕೆ ಆತ್ಮಸಾಕ್ಷಿಯಾಗಿ ಮೂರೂ ಪಕ್ಷಗಳು ಕೆಲಸ ಮಾಡುತ್ತಿವೆಯೋ ಅಥವಾ ಇದರಲ್ಲೂ ರಾಜಕೀಯ ಹುಡುಕುತ್ತಿವೆಯೋ ಎನ್ನುವುದು ಸಾರ್ವಜನಿಕರಿಗಿರುವ ಗುಮಾನಿ.
25 ಇದ್ದದ್ದು 2, 105 ಇದ್ದದ್ದು 10 ಆಗುವ ಮುನ್ನ ಮೋದಿ ಎಚ್ಚೆತ್ತುಕೊಳ್ಳಲಿ
ಇಂತಹ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ತೀವ್ರವಾಗಿ ಕಾಡುತ್ತಿರುವ ಅಂಶವೇನಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ, ಎರಡು ಕ್ಷೇತ್ರಗಳಲ್ಲಿನ ದಿಗ್ಗಜರ ಸೋಲು. ಇವರಿಬ್ಬರಿದ್ದಿದ್ದರೆ, ಬರ ಪರಿಹಾರದ ವಿಚಾರದಲ್ಲಿ ಇಷ್ಟೊಂದು ವಿಳಂಬವಾಗುತ್ತಿರಲಿಲ್ಲ ಎನ್ನುವ ಮಾತು ಕೇಳಿಬರಲಾರಂಭಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ, ಯಾವ ರೀತಿ ವಿರೋಧ ಪಕ್ಷಗಳಿಗೆ ಜರ್ಕ್ ಹೊಡೆದಿತ್ತೆಂದರೆ, ಎಲ್ಲಾ ಘಟಾನುಗಟಿಗಳು ಸೋಲು ಅನುಭವಿಸಿದ್ದರು. ಅದರಲ್ಲಿ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡ್ರು, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಪ್ರಮುಖರು. 28 ರಲ್ಲಿ 25ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.ಆದರೆ, ಪ್ರಯೋಜನವಾಗಿದ್ದು ಏನು?
ಬಿಜೆಪಿ ಹೊರತಾಗಿ ಗೆದ್ದ ಮೂವರಲ್ಲಿ ಇಬ್ಬರು ಹೊಸಬರು
ಬಿಜೆಪಿ ಹೊರತಾಗಿ ಗೆದ್ದ ಮೂವರಲ್ಲಿ ಸುಮಲತಾ ಅಂಬರೀಶ್ ಮತ್ತು ಪ್ರಜ್ವಲ್ ರೇವಣ್ಣ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇನ್ನು, ಡಿ.ಕೆ.ಸುರೇಶ್, ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತ ಎನ್ನುವುದಕ್ಕಿಂತ, ಸಹೋದರನ ಚಿಂತೆಯಲ್ಲೇ ಇದ್ದಾರೆ ಎನ್ನುವುದು ಸೂಕ್ತ.
ಆಡ್ವಾಣಿಯನ್ನು ಮೂಲೆಗುಂಪು ಮಾಡಿದ್ದ ಅಮಿತ್ ಶಾ ಗ್ಯಾಂಗ್ ಈಗ ಬಿಎಸ್ವೈ ಹಿಂದೆ?
ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರ ಸೋಲು
ಹಾಗಾಗಿ, ಪ್ರಮುಖವಾಗಿ ಕರ್ನಾಟಕಕ್ಕೆ ಕಾಡುತ್ತಿರುವುದು ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರ ಸೋಲು. ಗೌಡ್ರು ಮಾಜಿ ಪ್ರಧಾನಿಯಾಗಿದ್ದವರು ಮತ್ತು ಖರ್ಗೆ ವಿರೋಧ ಪಕ್ಷದ ನಾಯಕರಾಗಿದ್ದವರು. ರಾಜಕೀಯದ ಆಳ ಅನುಭವವನ್ನು ಹೊಂದಿರುವ ಇವರು, ಮೋದಿ ಸರಕಾರ, ಯಾವ ಕಾರಣಕ್ಕೆ, ಬರ ಪರಿಹಾರ ವಿಳಂಬ ಮಾಡುತ್ತಿದೆ ಎನ್ನುವ ಅಂಶವನ್ನು ಹೊರಗೆಳೆಯಬಹುದಿತ್ತು.
ಸಂಸತ್ತಿನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದರೆ ಅದಕ್ಕೆ ತೂಕ ಜಾಸ್ತಿ
ಲೋಕಸಭೆಯ ಹೊರಗೂ ಕೇಂದ್ರದ ಕಿವಿಹಿಂಡುವ ಕೆಲಸವನ್ನು ಇವರುಗಳು ಮಾಡಬಹುದು. ಆದರೆ, ಸಂಸತ್ತಿನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದರೆ ಅದಕ್ಕೆ ತೂಕ ಜಾಸ್ತಿ. ಮತ್ತು, ಆಡಳಿತ ಪಕ್ಷ ಅದಕ್ಕೆ ನೀಡುವ ಉತ್ತರ, ಡಾಕ್ಯುಮೆಂಟ್ / ರೆಕಾರ್ಡ್ ಆಗುತ್ತದೆ. ಹಾಗಾಗಿಯೇ, ಇವರಿಬ್ಬರ ಸೋಲು, ರಾಜ್ಯಕ್ಕೆ ಕಾಡಲಾರಂಭಿಸಿದೆ.
ಮಾಜಿ ಮುಖ್ಯಮಂತ್ರಿಗಳು ನೇರವಾಗಿ ಇನ್ನೊಬ್ಬರು ಮಾಜಿ ಸಿಎಂ ದೂರಿದ್ದಾರೆ
ತುಮಕೂರಿನಲ್ಲಿ ಗೌಡ್ರು ಮತ್ತು ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ, ಮಾಜಿ ಮುಖ್ಯಮಂತ್ರಿಗಳು ನೇರವಾಗಿ ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ದೂರಿದ್ದಾರೆ. ಮೋದಿ ಹವಾಗಿಂತ, ಈ ಎರಡು ಕ್ಷೇತ್ರಗಳಲ್ಲಿ ಈ ತಂತ್ರಗಾರಿಕೆಯೇ ವರ್ಕೌಟ್ ಆಗಿರಬಹುದು. ಒಟ್ಟಿನಲ್ಲಿ, ವಿಪಕ್ಷಗಳು ಹೇಳುವಂತೆ, ಮೋದಿ, ಶಾ ಮುಂದೆ ನಿಂತು ಮಾತನಾಡುವ ಧೈರ್ಯ ಬಿಜೆಪಿ ಸಂಸದರಿಗೆ ಇದೆಯೋ, ಇಲ್ಲವೋ? ಖರ್ಗೆ, ದೇವೇಗೌಡ್ರ ಸೋಲು ರಾಜ್ಯಕ್ಕೆ ಮಾತ್ರ ಕಾಡಲಾರಂಭಿಸಿದೆ.