ಮೋದಿ, ಬಿಜೆಪಿ ಮಟ್ಟ ಹಾಕುವುದೇ ನನ್ನ ಗುರಿ: ಯಾಕ್ ದೇವೇಗೌಡ್ರೇ ಇಷ್ಟು ಸಿಟ್ಟು?
Recommended Video
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಒಂದು ಮಾತಾಡಿದ್ರೆ ಅದರಲ್ಲಿ ನೂರೆಂಟು ಗೂಡಾರ್ಥಗಳು ಇರುತ್ತವೆ, ಇನ್ನೇನೋ ರಾಜಕೀಯ ಲೆಕ್ಕಾಚಾರಗಳು ಇರುತ್ತವೆ ಎನ್ನುವುದು ಸೂಕ್ಷ್ಮವಾಗಿ ಗೌಡರನ್ನು ಅರಿತಿರುವ ದೇಶದ ಪ್ರಮುಖ ಮುಖಂಡರಿಗೆ ಗೊತ್ತಿರುವ ವಿಚಾರವೇ..
ತಮ್ಮ ರಾಜಕೀಯ ಜೀವನದುದ್ದಕ್ಕೂ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಿಕೊಂಡು ಬಂದಿರುವ ಗೌಡ್ರು, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಮಟ್ಟಹಾಕುವುದೇ ನನ್ನ ಏಕೈಕ ಗುರಿ ಎಂದು ಹೇಳಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಸಂಬಂಧ ಕರೆದಿದ್ದ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ನಾವು ಎಷ್ಟು ಸೀಟು ಗೆಲ್ಲುತ್ತೇವೆ ಅನ್ನುವುದು ಮುಖ್ಯವಲ್ಲ, ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಿರಬೇಕೆಂದು ಕರೆನೀಡಿದ್ದಾರೆ.
ಜಾಣ ಹುಡುಗಿ ಕಾಂಗ್ರೆಸ್ ಪಾಸು ಮಾಡಿಸಿದ ಲೆಕ್ಕದ ಮೇಷ್ಟ್ರು ದೇವೇಗೌಡರು
ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದರಿಂದ ಕಾಂಗ್ರೆಸ್ ಜೊತೆ ಕೈಜೋಡಿಸಿ ಮುಂಬರುವ ಸಾರ್ವತ್ರಿಕ ಚುನಾವಣೆ ಎದುರಿಸಬೇಕಾಗಿದೆ. ಏನೇ ಆಗಲಿ, ಮೋದಿ ಮತ್ತು ಬಿಜೆಪಿಯನ್ನು ಮಟ್ಟಹಾಕುವುದೇ ನಮ್ಮ ಗುರಿಯಾಗಿರಬೇಕು. ಇದಕ್ಕಾಗಿ ಈಗಿಂದಲೇ ನಾವು ತಯಾರಿ ನಡೆಸಬೇಕಾಗಿದೆ ಎಂದು ಪಕ್ಷದ ಮುಖಂಡರಲ್ಲಿ ಗೌಡ್ರು ಮನವಿ ಮಾಡಿದ್ದಾರೆ.
ಅಸೆಂಬ್ಲಿ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಇದಕ್ಕೆ ನಾನು ಮತದಾರರನ್ನು ದೂರಲು ಹೋಗುವುದಿಲ್ಲ, ನಮ್ಮಲ್ಲಿರುವವರೇ ನಮ್ಮ ಸೋಲಿಗೆ ಕಾರಣರಾದರು. ಮುಂಬರುವ ದಿನಗಳಲ್ಲಿ ಅಂತವರ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೌಡ್ರು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ವಿರುದ್ದ ಗೌಡ್ರ ಸಿಟ್ಟಿಗೆ ಕಾರಣ ಏನಿರಬಹುದು? ಹೀಗಿರಬಹುದು ಕೆಲವೊಂದು ಸಾಧ್ಯತೆಗಳು..
ಗೌಡ್ರು ಮತ್ತು ಎಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದ್ದ ಯಡಿಯೂರಪ್ಪ
ಕುಮಾರಸ್ವಾಮಿಯವರ ವಿಶ್ವಾಸ ಗೊತ್ತುವಳಿ ಮಂಡನೆಯ ವೇಳೆ ಮಾತನಾಡುತ್ತಿದ್ದ ಯಡಿಯೂರಪ್ಪ ಅಕ್ಷರಸಃ ಗೌಡ್ರು ಮತ್ತು ಎಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದ್ದರು. ಅಪ್ಪ, ಮಕ್ಕಳು ಕಾಂಗ್ರೆಸ್ ಪಕ್ಷವನ್ನು ಯಾವ ಅಧೋಗತಿಗೆ ತಂದು ನಿಲ್ಲಿಸುತ್ತಾರೆಂದು ವಾಗ್ದಾಳಿ ನಡೆಸಿದ್ದರು. ನಮ್ಮ ಹೋರಾಟ ಏನಿದ್ದರೂ ಇನ್ನು ಮುಂದೆ ಅಪ್ಪಮಕ್ಕಳ ವಿರುದ್ದ ಎಂದು ಯಡಿಯೂರಪ್ಪ ಟೀಕಾ ಪ್ರಹಾರ ನಡೆಸಿದ್ದರು. ಹಾಗಾಗಿ, ಕಾಂಗ್ರೆಸ್ ಜೊತೆ ಕೈಜೋಡಿಸಿ, ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ತರುವ ಉದ್ದೇಶ ಗೌಡ್ರದ್ದು ಆಗಿರಬಹುದು. ಆ ಮೂಲಕ, ಕಾಂಗ್ರೆಸ್ ಅನ್ನು ಅಪ್ಪಮಕ್ಕಳು ಅಧೋಗತಿಗೆ ತರುತ್ತಾರೆ ಎನ್ನುವ ಬಿಎಸ್ವೈ ಹೇಳಿಕೆಯನ್ನು ಮೆಟ್ಟಿ ನಿಲ್ಲಬಹುದು.
ಕುಮಾರಸ್ವಾಮಿ ಸಂಪುಟದ ಖಾತೆ ಹಂಚಿಕೆ: ದೇವೇಗೌಡ್ರ ಮಾಸ್ಟರ್ ಮೈಂಡ್
ಪ್ರಮುಖ ಪಕ್ಷದ ಮುಖಂಡರನ್ನು ಒಗ್ಗೂಡಿಸುವಲ್ಲಿ ಗೌಡ್ರು ಯಶಸ್ವಿ
ಕುಮಾರಸ್ವಾಮಿಯವರ ಪ್ರಮಾಣವಚನಕ್ಕೆ ದೇಶದ ಎಲ್ಲಾ ಪ್ರಮುಖ ಪಕ್ಷದ ಮುಖಂಡರನ್ನು ಒಗ್ಗೂಡಿಸುವಲ್ಲಿ ದೇವೇಗೌಡ್ರು ಯಶಸ್ವಿಯಾಗಿದ್ದರು. ಹೆಚ್ಚುಕಮ್ಮಿ ಎಲ್ಲಾ ರಾಜ್ಯದ ನಾಯಕರು ಆಗಮಿಸಿದ್ದರು. ಎಚ್ಡಿಕೆ ಪ್ರಮಾಣವಚನ ಒಂದು ರೀತಿಯಲ್ಲಿ ಸರ್ವಪಕ್ಷಗಳ ಸಮ್ಮಿಲನದಂತಿತ್ತು. ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವರ್ಷವಿದೆ. ತೃತೀಯ ರಂಗವನ್ನು ಬಲಪಡಿಸುವ ಉದ್ದೇಶದಿಂದ, ಮೋದಿ ವಿರುದ್ದ ಎಲ್ಲರೂ ಕೈಜೋಡಿಸುವ ಸಾಧ್ಯತೆ ದಟ್ಟವಾಗಿರುವುದರಿಂದ ಗೌಡ್ರು, ಬಿಜೆಪಿ ವಿರುದ್ದ ಕಿಡಿಕಾರಿರಬಹುದು.
ರಾಜ್ಯದ ಸಮ್ಮಿಶ್ರ ಸರಕಾರ ಪಲ್ಟಿ ಹೊಡೆದರೆ
ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ, ಒಂದು ವೇಳೆ ರಾಜ್ಯದ ಸಮ್ಮಿಶ್ರ ಸರಕಾರ ಪಲ್ಟಿ ಹೊಡೆದರೆ, ಮುಂದಾಲೋಚನೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ತೊಡಗಿಸಿಕೊಳ್ಳಲು ವೇದಿಕೆಯಾಗಲಿ ಎನ್ನುವ ಕಾರಣವೂ ಗೌಡ್ರ ಹೇಳಿಕೆಯ ಹಿಂದಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ರೇವಣ್ಣ ಕೂಡಾ, ಈ ಸರಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಹೊಸ ಸಂದೇಶ ರವಾನಿಸುವ ಉದ್ದೇಶ
ಕುಮಾರಣ್ಣನ ಪ್ರಮಾಣವಚನಕ್ಕೆ ಪ್ರಾದೇಶಿಕ ಪಕ್ಷಗಳ ಮುಖಂಡರು ಆಗಮಿಸಿದ್ದು ಗಮನಿಸಬೇಕಾದ ಅಂಶ. ಟಿಡಿಪಿಯಿಂದ ಚಂದ್ರಬಾಬು ನಾಯ್ಡು, ಡಿಎಂಕೆ ಪ್ರತಿನಿಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ, ಲಾಲೂ ಪುತ್ರ, ಕೆಸಿಆರ್ ಮುಂತಾದ ಮುಖಂಡರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಲಾಲೂ ಪ್ರಸಾದ್ ಜೈಲಿನಲ್ಲಿರುವ ಈ ಹೊತ್ತಿನಲ್ಲಿ ಅನುಭವಿ ರಾಜಕಾರಣಿ ದೇವೇಗೌಡ್ರು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಹೊಸ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿರಬಹುದು.
ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ತಗ್ಗಿಸುವ ಉದ್ದೇಶ
ಇದರ ಜೊತೆಗೆ, ವಿಶ್ವದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ತಗ್ಗಿಸಲು, ಕಾಂಗ್ರೆಸ್ ಜೊತೆ ಕೈಜೋಡಿಸಿ ಗೌಡ್ರೇ ಎಲ್ಲರನ್ನೂ ಮುಂಬರುವ ಚುನಾವಣೆಯ ವೇಳೆ ಒಂದು ಮಾಡಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನವನ್ನು ಆರಂಭಿಸಿದ್ದಾರೆ ಎನ್ನುವ ಮಾಹಿತಿಯಿದೆ.