'ರಾಷ್ಟ್ರೀಯ ವಿಪತ್ತು': ಘೋಷಣೆ ಯಾಕೆ? ಕರ್ನಾಟಕಕ್ಕೆ ಏನು ಲಾಭ?
Recommended Video
ಬೆಂಗಳೂರು, ಆಗಸ್ಟ್ 13: ಕಳೆದ 12 ದಿನಗಳಿಂದ ಸುರಿಯುತ್ತಿರುವ ಮಳೆ, ಅದು ಸೃಷ್ಟಿಸಿರುವ ಪ್ರಾಕೃತಿಕ ವಿಕೋಪ ಕರ್ನಾಟಕ ಮಟ್ಟಿಗೆ ಹಿಂದೆಂದೂ ಕಾಣದ ವಿಪತ್ತೊಂದನ್ನು ಸೃಷ್ಟಿಸಿದೆ.
ಹೀಗಾಗಿ ಪ್ರವಾಹ ಪರಿಹಾರ ಸಮರೋಪಾದಿಯಲ್ಲಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಇದನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಿ ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ ಮತ್ತು ಇದರಲ್ಲಿ ಅರ್ಥವೂ ಇದೆ. ಈವರೆಗೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿವೆ.
ಜನರು ಸೂರುಗಳನ್ನು ಕಳೆದುಕೊಂಡು 'ಕಾಳಜಿ ಕೇಂದ್ರ'ಗಳನ್ನು ಸೇರಿಕೊಂಡಿದ್ದಾರೆ. ಜಾನುವಾರುಗಳನ್ನು ಉಳಿಸಿಕೊಳ್ಳಲಾದೆ ಕಣ್ಣೀರು ಹಾಕುತ್ತಿದ್ದಾರೆ. ಮುನಿದ ಪ್ರಕೃತಿಯಿಂದ ಆಗಿರುವ ಜರ್ಜರಿತ ಪರಿಸ್ಥಿತಿಯನ್ನು ದಾಟಿ ಹೊಸ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಬಾಗಲಕೋಟೆ, ಕೊಡಗು, ಬೆಳಗಾವಿ, ಹಾಸನ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಆಗಿರುವ ಹಾನಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ರಾಜ್ಯದ ಹಲವು ನಾಯಕರು ಕಣ್ಣಾರೆ ಕಂಡು ಬಂದಿದ್ದಾರೆ. ಸದ್ಯ ಲಭ್ಯ ಇರುವ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡರೂ ಈವರೆಗೆ ಆಗಿರುವ ಅಂದಾಜಿಸಿರುವ ಹಾನಿಯೇ ಗಾಬರಿ ಹುಟ್ಟಿಸುವಂತಿದೆ.
ಪ್ರಾಣ ಕಳೆದುಕೊಂಡ ನತದೃಷ್ಟರು, ಕಾಳಜಿ ಕೇಂದ್ರ ಸೇರಿದ ಲಕ್ಷಾಂತರರು
ಆಗಸ್ಟ್ 1ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ 40 ಮಂದಿ ಮೃತಪಟ್ಟಿದ್ದು 14ಕ್ಕೂ ಹೆಚ್ಚುಮಂದಿ ಕಾಣೆಯಾಗಿದ್ದಾರೆ. 5, 81, 702 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 50, 595 ಜಾನುವಾರುಗಳನ್ನು ರಕ್ಷಿಸಲಾಗಿದೆ. 1,168 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈವರೆಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆ 32,73,54.
ರಾಜ್ಯ, ಕೇಂದ್ರ ಸರಕಾರಗಳು ಹಣ ಬಿಡುಗಡೆ ಮಾಡಿದ ಮಾಹಿತಿ ಅಲಭ್ಯ
ಒಂದೆಡೆ ಪ್ರವಾಹ ಭೀಕರ ಸನ್ನಿವೇಶಗಳನ್ನು ಸೃಷ್ಟಿಸಿದ್ದರೆ, ಕರ್ನಾಟಕದ ಏಕವ್ಯಕ್ತಿ ಸರಕಾರ ಮಾತ್ರ ಸ್ಥಳ ಪರಿಶೀಲನೆಯಲ್ಲೇ ಮುಳುಗಿ ಹೋಗಿದೆ. ಈವರೆಗೆ ಪ್ರವಾಹ ಪರಿಹಾರಕ್ಕೆ ಬಿಡುಗಡೆಯಾದ ಮೊತ್ತ ಎಷ್ಟು ಎಂಬ ಬಗ್ಗೆ ಅಧಿಕೃತ ಮಾಹಿತಿಯೇ ಲಭ್ಯ ಇಲ್ಲ. ಮಾಜಿ ಸಚಿವ ಗೋವಿಂದ ಕಾರಜೋಳ 204 ಕೋಟಿ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. ಇದರಲ್ಲಿ 78 ಕೋಟಿ ಬಿಡುಗಡೆ ಆಗಿದೆ ಎಂದು ಹೇಳುತ್ತಾರೆ. ಕೇಂದ್ರ ಸಚಿವ ಸದಾನಂದ ಗೌಡ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ ಸಮಯದಲ್ಲಿ 128 ಕೋಟಿ ರೂಪಾಯಿ ಹಣ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಕೇಂದ್ರ ಸರಕಾರಕ್ಕೆ 3000 ಸಾವಿರ ಕೋಟಿಯ ಬೇಡಿಕೆ ಮುಂದಿಟ್ಟಿದ್ದಾರೆ. ಇವೆಲ್ಲವೂ ಕಾಗದದ ಮೇಲೆ ಉಳಿದ ಅಂಕಿ ಅಂಶಗಳೇ ಹೊರತು, ಈವರೆಗೆ ಪರಿಹಾರದ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿರುವ 100 ಕೋಟಿ ಹಣದಲ್ಲೇ ಈಗ ತಕ್ಷಣದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇದರ ಹೊರತಾಗಿ ಸಂಘ ಸಂಸ್ಥೆಗಳು, ವ್ಯಕ್ತಿಗಳು ನೀಡಿರುವ ಕೊಡುಗೆಯೇ ದೊಡ್ಡ ಮೊತ್ತವಾಗಿದೆ.
ನೆರೆ ಪರಿಹಾರಕ್ಕೆ ಉಳಿದಿರುವ ಏಕೈಕ ದಾರಿ ಇದು
ಕುಂಟುತ್ತಾ ಸಾಗುತ್ತಿರುವ ರಾಜ್ಯದ ಪ್ರವಾಹ ಪರಿಹಾರಗಳಿಗೆ ಚುರುಕು ಮುಟ್ಟಿಸಲು ಹಾಗೂ ತಾರ್ಕಿಕವಾಗಿ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲು ಇರುವ ಆಯ್ಕೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವುದು. ಇದರಿಂದ ರಾಜ್ಯದ ಜನರಿಗೆ ಆಗುವ ಲಾಭಗಳೇನು? ಎಂಬುದನ್ನು ನೋಡುವುದಕ್ಕೆ ಮುಂಚೆ, ಏನಿದು ವಿಕೋಪ ಘೋಷಣೆ ಎಂಬುದನ್ನು ಗಮನಿಸಬೇಕಿದೆ. ವಿಕೋಪಗಳನ್ನು ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿಯ (ಎಂಡಿಎಂಎ) ಅಡಿಯಲ್ಲಿ ಜಿಲ್ಲಾ ಮಟ್ಟದ ವಿಪತ್ತು, ರಾಜ್ಯಮಟ್ಟದ ವಿಪತ್ತು ಮತ್ತು ರಾಷ್ಟ್ರೀಯ ಮಟ್ಟದ ವಿಪತ್ತು ಎಂದು ಮೂರು ಆಯಾಮಗಳಲ್ಲಿ ಗುರುತಿಸಲಾಗುತ್ತದೆ.
ಭೂಕಂಪ, ನೆರೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿ, ಇಡೀ ಒಂದು ವ್ಯಾಪಕ ಪ್ರದೇಶ ಪುನರುಜ್ಜೀವನವಾಗಬೇಕೆಂದು ಕೇಂದ್ರಕ್ಕೆ ಮನವರಿಕೆ ಆದಾಗ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕದಲ್ಲಿ ನಡೆದಿರುವ ಪ್ರವಾಹ ಪರಿಸ್ಥಿತಿ ಈ ಮಾನದಂಡಗಳಿಗೆ ಅನ್ವಯವಾಗುತ್ತದೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಾವೆಲ್ಲಿ ಹಿಂದುಳಿಯುತ್ತೇವೆ?
ಒಂದು ವೇಳೆ, ರಾಜ್ಯ ಸರಕಾರ ಕೇಂದ್ರಕ್ಕೆ ಇದೊಂದು ರಾಷ್ಟ್ರೀಯ ವಿಪತ್ತು ಎಂದು ಮನವರಿಕೆ ಮಾಡಿಕೊಟ್ಟರೆ ಸಂಕಷ್ಟದಲ್ಲಿರುವ ಜನರಿಗೆ ಸಾಕಷ್ಟು ಲಾಭಗಳಿವೆ. ಬೆಳೆ ಹಾನಿ, ಸರ್ಕಾರಿ ಆಸ್ತಿಪಾಸ್ತಿ , ಜೀವಹಾನಿಗೆ ತ್ವರಿತಗತಿಯಲ್ಲಿ ಪರಿಹಾರ ಲಭ್ಯವಾಗಲಿದೆ.
ಇನ್ನೊಂದು ಲಾಭವೆಂದರೆ ಕೇಂದ್ರ ಸರ್ಕಾರ ಅಂತಹ ರೈತರ ಸಾಲವನ್ನೂ ಮನ್ನಾ ಮಾಡುವ ಸಾಧ್ಯತೆ ಇರುತ್ತದೆ. 2009ರಲ್ಲಿ ಈ ರೀತಿ ನಿರ್ಧಾರವನ್ನು ಕೂಡ ತೆಗೆದುಕೊಂಡಿರುವ ನಿದರ್ಶನವೂ ಇದೆ. ರೈತರು ಕಳೆದುಕೊಂಡಿರುವ ಆಸ್ತಿಪಾಸ್ತಿಗಳಿಗೂ ತಕ್ಷಣವೇ ಪರಿಹಾರ ದೊರೆಯಲಿದೆ.