ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 11 : "ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುವುದು ಬಿಟ್ಟು ರಾಜ್ಯಕ್ಕೆ ಆರ್ಥಿಕ ನೆರವು ಘೋಷಿಸಬೇಕು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದಲ್ಲಿ ಹಿಂದೆ ಕಂಡರಿಯದ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಚಿವರನ್ನು ಕಳಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಬೇಕು" ಎಂದು ಒತ್ತಾಯಿಸಿದರು.
17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ
"ರಾಜ್ಯದ 17 ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಆದ ಹೆಚ್ಚಿನ ಮಳೆಯೂ ರಾಜ್ಯದ ಪ್ರವಾಹಕ್ಕೆ ಕಾರಣವಾಗಿದೆ. 6.50 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಮತ್ತು ನಾರಾಯಣಪುರದಿಂದ ಬಿಟ್ಟಿರುವುದು ಇದೇ ಮೊದಲು" ಎಂದರು.
ಪ್ರವಾಹ ಸಂತ್ರಸ್ಥರನ್ನು ನಿಂದಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ!
"ತುರ್ತಾಗಿ ರಾಜ್ಯಕ್ಕೆ ಇನ್ನೊಂದಷ್ಟು ಹೆಲಿಕಾಪ್ಟರ್ ತರಿಸಿ ಪ್ರವಾಹ ಪೀಡಿತರನ್ನು ರಕ್ಷಿಸಲು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಒತ್ತಾಯ ಮಾಡಬೇಕು. ಯಡಿಯೂರಪ್ಪ ಏಕ ಪಾತ್ರಾಭಿನಯ ಮಾಡುತ್ತಿದ್ದಾರೆ. 15 ದಿನ ಕಳೆದಿದೆ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ" ಎಂದು ಆರೋಪಿಸಿದರು.
ಮಹಾ ಪ್ರವಾಹ : ಅಮಿತ್ ಶಾರಿಂದ ಇಂದು ವೈಮಾನಿಕ ಸಮೀಕ್ಷೆ
1600 ಕೋಟಿ ಅನುದಾನ ಕೊಟ್ಟಿದ್ದರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸರ್ಕಾರ ಹೇಳಿರುವ ಹಾಗೆ 25 ರಿಂದ 30 ಮಂದಿ ಸಾವನ್ನಪ್ಪಿದ್ದಾರೆ.ಈ ಪ್ರಮಾಣದ ಪ್ರವಾಹವನ್ನು ನಾನು ನೋಡಿರಲಿಲ್ಲ. ನಾನು ವಿಪಕ್ಷ ನಾಯಕನಾಗಿದ್ದಾಗ ಒಮ್ಮೆ ಪ್ರವಾಹ ಆಗಿತ್ತು. ಆದರೆ, ಈ ಪ್ರಮಾಣದಲ್ಲಿ ಪ್ರವಾಹ ಆಗಿರಲಿಲ್ಲ. ನಾವು ಪ್ರಧಾನ ಮಂತ್ರಿಗಳಿಗೆ ಒತ್ತಾಯ ಮಾಡಿದ್ದೆವು.ಆಗ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಸ್ಥಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮಾಡಿದ್ದರು. ಸ್ಥಳದಲ್ಲಿಯೇ 1600 ಕೋಟಿ ಅನುದಾನ ನೀಡಿದ್ದರು" ಎಂದರು.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ
"ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಿತ್ತು. ಆದರೆ, ಇದುವರೆಗೂ ಘೋಷಣೆ ಮಾಡಿಲ್ಲ. ಪ್ರಧಾನ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು.ಅಮಿತ್ ಶಾ, ನಿರ್ಮಲ ಸೀತಾರಾಮನ್ ಬರುವುದರಿಂದ ಘಟನೆಗೆ ಗಂಭೀರತೆ ಬರುವುದಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
5 ಸಾವಿರ ಕೋಟಿ ಅನುದಾನ ಬೇಕು
"ರಾಜ್ಯದಲ್ಲಿ ಪ್ರವಾಹದಿಂದಾಗಿ ಸುಮಾರು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರ ಕನಿಷ್ಠ 5 ಸಾವಿರ ಕೋಟಿ ಅನುದಾನ ನೀಡಬೇಕು. ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ. ಸೇತುವೆಗಳು ಕುಸಿದು ಬಿದ್ದಿವೆ. ಮನೆಗಳು ಕುಸಿದಿವೆ" ಎಂದು ಸಿದ್ದರಾಮಯ್ಯ ಹೇಳಿದರು.
ಶಾಸಕರು ಕೆಲಸ ಮಾಡಲು ಸಾಧ್ಯವೇ?
"ವಿಶ್ವಾಸ ಮತ ಯಾಚನೆ ವೇಳೆ ಈಗಲೇ ಆಗಬೇಕು ಎನ್ನುತ್ತಿದ್ದ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಏಕೆ ಮಾಡುತ್ತಿಲ್ಲ.ಸರ್ಕಾರ ಬೀಳಿಸುವಾಗ ಇದ್ದ ಕಾಳಜಿ ಸರ್ಕಾರ ರಚನೆಗೆ ಏಕೆ ಇಲ್ಲ.ಪೂರ್ಣ ಪ್ರಮಾಣದ ಸರ್ಕಾರ ಇದ್ದಿದ್ದರೆ ಪರಿಣಾಮಕಾರಿಯಾಗಿ ಕೆಲಸಗಳು ಆಗುತ್ತಿದ್ದವು. ಶಾಸಕರು ಸಚಿವರ ರೀತಿ ಕೆಲಸ ಮಾಡಲು ಸಾಧ್ಯವೇ?.ಅನೇಕ ಕಡೆಗಳಲ್ಲಿ ಗಂಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ, ಸರ್ಕಾರ ಅದರ ಕಡೆಗೂ ಗಮನ ಕೊಡಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
ವೈದ್ಯರ ಸೂಚನೆ ಪಾಲನೆ
"ಸಾಮಾಜಿಕ ಜಾಲ ತಾಣಗಳಲ್ಲಿ ನಾನು ದೆಹಲಿಗೆ ಹೋಗಿದ್ದೇನೆ.ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ.ನಾನು ಇಂತಹ ಸಮಯದಲ್ಲಿ ಸದಾ ಜನರ ಜೊತೆಗೆ ಇರುವವನು. ಆದರೆ, ನನಗೆ ಬಲಗಣ್ಣು ಆಪರೇಷನ್ ಆಗಿದೆ.ಧೂಳಿನಿಂದ ದೂರ ಇರಿ ಎಂದು ವೈದ್ಯರು ಹೇಳಿದ್ದಾರೆ. ನಾಳೆ ಮತ್ತೆ ವೈದ್ಯರನ್ನ ಭೇಟಿ ಮಾಡ್ತೇನೆ.ಅವರು ಯಾವಾಗ ಹೋಗಿ ಅಂತಾರೂ ಆಗ ಕೂಡಲೇ ಅಲ್ಲಿಗೆ ಹೋಗುತ್ತೇನೆ.ಈಗಾಗಲೇ ನನ್ನ ಪುತ್ರ ಯತೀಂದ್ರರನ್ನು ಸ್ಥಳಕ್ಕೆ ಕಳಿಸಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದರು.