ಉತ್ತರ ಕರ್ನಾಟಕ ಜನರ ಋಣ ತೀರಿಸುವ ಹೊಣೆ ನನ್ನ ಮೇಲಿದೆ: ಸಿಎಂ
ಬಸವನ ಬಾಗೇವಾಡಿ, ಡಿಸೆಂಬರ್, 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಜನರು ನನ್ನ ಬಗ್ಗೆ ಅಪಾರ ವಿಶ್ವಾಸವಿಟ್ಟಿದ್ದಾರೆ. ಉತ್ತರ ಕರ್ನಾಟಕ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ ಎಂದು ಬಸವನ ಬಾಗೇವಾಡಿಯಲ್ಲಿ ಹೇಳಿದರು.
ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಬೇಕೆಂಬ ಸಿದ್ಧಾಂತ ನಮ್ಮದು. ಪ್ರಧಾನಿಗಳೇ ಕಪ್ಪು ಹಣ ಇದ್ದವರನ್ನ ಹೊರಗೆಳೆಯಿರಿ. ಅವರ ನಿದ್ದೆಗೆಡಿಸಿ. ಆದರೆ ಬಡವರ ನಿದ್ದೆಗೆಡಿಸಬೇಡಿ. ಬ್ಯಾಂಕ್ ಗಳ ಮುಂದೆ ಶ್ರೀಮಂತರು ಕ್ಯೂ ನಿಂತಿಲ್ಲ. ಸಾಲುಗಟ್ಟಿ ನಿಂತವರೆಲ್ಲ ಬಡವರು ಮತ್ತು ಮಧ್ಯಮ ವರ್ಗದವರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಎಂದು ಮುಖ್ಯಮಂತ್ರಿಗಳು ನುಡಿದರು.[ವೈಮಾನಿಕ ಸಮೀಕ್ಷೆ : ಕಲಬುರಗಿ-ಬೀದರ್ ಗೆ ಸಿಎಂ ಸಿದ್ದರಾಮಯ್ಯ ಭೇಟಿ]
ನೋಟು ಅಮಾನ್ಯದ ಬಳಿಕ ರೈತರಿಗೆ ಆಗಿರುವ ತೊಂದರೆ ಬಗ್ಗೆ ಕೇಂದ್ರಕ್ಕೆ ಮೂರು ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ. ರೈತರ ಹಿತದೃಷ್ಟಿಯಿಂದ ಮತ್ತೆ ಪತ್ರ ಬರೆಯುವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಬರ ಅನುದಾನ ನಿರೀಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ತಲೆದೋರಿದೆ, ಇನ್ನೊಂದೆಡೆ ಅನಾವೃಷ್ಟಿ ಸಂಭವಿಸಿದೆ ಎಂದರು. [ಮಳೆಗೆ ಉತ್ತರ ಕರ್ನಾಟಕ ತತ್ತರ : ಅಪಾರ ಆಸ್ತಿಪಾಸ್ತಿ ನಷ್ಟ]
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಬರ ಪರಿಹಾರಕ್ಕಾಗಿ 4702 ಕೋಟಿ ರೂ. ಹಾಗೂ ಅನಾವೃಷ್ಟಿಯ ಪರಿಹಾರಕ್ಕಾಗಿ 376 ಕೋಟಿ ರೂ. ಗಳ ಅನುದಾನವನ್ನು ರಾಜ್ಯಕ್ಕೆ ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೆ ಮನವಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ದೆಹಲಿಗೆ ತೆರಳಿ, ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೇವೆ. ಲೋಕಸಭೆ ಅಧಿವೇಶನ ನಂತರ ಈ ಕುರಿತು ಸಭೆ ಕೈಗೊಂಡು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಕುರಿತು ಯಾವುದೇ ಕ್ರಮ ಆಗಿಲ್ಲ ಎಂದು ನುಡಿದ ಮುಖ್ಯಮಂತ್ರಿಯವರು, ಈ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ ಎಂದರು.