ಬ್ಯಾಂಕ್ ನಿಂದ ರಿಕವರಿ ನೋಟಿಸ್: ಬೆಳಗಾವಿ ಸಾಹುಕಾರ ಜಾರಕಿಹೊಳಿ ಥಂಡಾ
ಬೆಂಗಳೂರು, ಜೂನ್ 28: ಸಮ್ಮಿಶ್ರ ಸರಕಾರವನ್ನು ಕೆಡವೇ ಕೆಡವುತ್ತೇನೆಂದು ತಿರುಗಾಡುತ್ತಿದ್ದ ರಮೇಶ್ ಜಾರಕಿಹೊಳಿಯ ಸತತ ಪ್ರಯತ್ನಗಳು ವಿಫಲವಾದಾಗ, ತನ್ನ ಬೆಂಬಲಿಗರೂ ದೂರವಾಗಿ, ಜಾರಕಿಹೊಳಿ ಏಕಾಂಗಿಯಾಗಿದ್ದರು.
ಈ ರಾಜಕೀಯ ಹಿನ್ನಡೆಯ ನಡುವೆ, ಬೆಳಗಾವಿಯ ಸಾಹುಕಾರನಿಗೆ ಇನ್ನೊಂದು ಆಘಾತ ಎದುರಾಗಿದೆ. ತನ್ನ ಒಡೆತನದ ಸಕ್ಕರೆ ಕಾರ್ಖಾನೆಯ ಹೆಸರಿನಲ್ಲಿ ತೆಗೆದುಕೊಂಡ ಸಾಲವನ್ನು ಮರು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಕ್ಕೆ ನಾಲ್ಕು ಬ್ಯಾಂಕುಗಳು ಜಾರಕಿಹೊಳಿಗೆ ನೋಟಿಸ್ ಕಳುಹಿಸಿವೆ.
ಉಲ್ಟಾ ಹೊಡೆದ ಮಹೇಶ್ ಕುಮಟಳ್ಳಿ, ತಣ್ಣಗಾಯಿತೆ ಅತೃಪ್ತರ ಬಂಡಾಯ?
ಭಾಗ್ಯಲಕ್ಷ್ಮಿ ಶುಗರ್ಸ್ ಕಂಪೆನಿಯ ಹೆಸರಿನಲ್ಲಿ ಜಾರಕಿಹೊಳಿ ವಿವಿಧ ಅಪೆಕ್ಸ್ ಬ್ಯಾಂಕುಗಳಿಂದ 206.52 ಕೋಟಿ ರೂ. ಸಾಲ ಪಡೆದಿದ್ದರು. ಇದನ್ನು ನಿರ್ದಿಷ್ಟ ಅವಧಿಯಲ್ಲಿ ಮರುಪಾವತಿಸದೇ ಇರುವುದರಿಂದ ಬ್ಯಾಂಕುಗಳು ನೋಟಿಸ್ ಜಾರಿ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ, ಸಾಲದ ಹಣ ರಿಕವರಿ ಮಾಡಿಕೊಳ್ಳುವುದಾಗಿ ಹೇಳಿವೆ.
ವಿಜಯಪುರ ಡಿಸಿಸಿ ಬ್ಯಾಂಕ್, ತುಮಕೂರು ಡಿಸಿಸಿ ಬ್ಯಾಂಕ್, ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಸೇರಿದಂತೆ ಐದು ಅಪೆಕ್ಸ್ ಬ್ಯಾಂಕುಗಳಲ್ಲಿ ರಮೇಶ್ ಜಾರಕಿಹೊಳಿ ಸಾಲ ಪಡೆದಿದ್ದಾರೆ. ಸಾಲವನ್ನೂ ಪರಪಾವತಿಸದೇ, ಕಬ್ಬು ಬೆಳೆಗಾರರಿಗೂ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪ, ರಮೇಶ್ ಜಾರಕಿಹೊಳಿ ವಿರುದ್ದ ಕೇಳಿಬರುತ್ತಿದೆ.
ಬ್ಯಾಂಕ್ ನೋಟಿಸ್ ನೀಡಿದ ಅರವತ್ತು ದಿನದೊಳಗೆ ಸಾಲದ ಮೊತ್ತ ಪಾವತಿಸಬೇಕಾಗಿದೆ, ಜಾರಕಿಹೊಳಿಗೆ ನೋಟಿಸ್ ಜಾರಿಮಾಡಿ ಐವತ್ತು ದಿನಗಳು ಕಳೆದಿವೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಸುತ್ತು ರಾಜಕೀಯ ಅಲ್ಲೋಲ ಕಲ್ಲೋಲ ನಡೆಸಲು ಹೊರಟ ಜಾರಕಿಹೂಳಿ?
ರಮೇಶ್ ಜಾರಕಿಹೊಳಿ ಸಾಲ ಪಡೆದಿರುವ ಬಹುತೇಕ ಎಲ್ಲಾ ಅಪೆಕ್ಸ್ ಬ್ಯಾಂಕುಗಳಲ್ಲಿನ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಪಕ್ಷದ ಛಾಯೆಯಿದೆ. ಹಾಗಾಗಿ, ಸಮ್ಮಿಶ್ರ ಸರಕಾರ ಅಲುಗಾಡಿಸುವ ಕೆಲಸಕ್ಕೆ ಇನ್ನು ಮುಂದೆಯಾದರೂ ಜಾರಕಿಹೊಳಿ ಕೈಹಾಕದೇ ಇರಲಿ, ಎನ್ನುವ ಕಾರಣಕ್ಕಾಗಿ, ಬ್ಯಾಂಕುಗಳ ನೋಟಿಸ್ 'ರಾಜಕೀಯ ಪ್ರೇರಿತ' ಎನ್ನುವ ಮಾತೂ ಕೇಳಿಬರುತ್ತಿದೆ.