ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ನಿಗೂಢ ಸಾವಿನ ಸುತ್ತ 'ಅನುಮಾನ'ದ ಹುತ್ತ
ಬಾಳಿ ಬದುಕಬೇಕಾಗಿದ್ದ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆಯೆಂದು ಆಳ್ವಾಸ್ ಆಡಳಿತ ಮಂಡಳಿ ಹೇಳಿದರೆ, ಇದೊಂದು ವ್ಯವಸ್ಥಿತ ಕೊಲೆಯೆಂದು ಕಾವ್ಯ ಪೋಷಕರ ನೋವಿನ ಮಾತು.
ಬಾಳಿ ಬದುಕಬೇಕಾಗಿದ್ದ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವನ್ನಪ್ಪಿದ್ದಾಳೆ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದು ಆತ್ಮಹತ್ಯೆ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದರೆ, ಇಲ್ಲಾ ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಪೋಷಕರ ನೋವಿನ ನುಡಿ.
ಪೊಲೀಸರು ತನಿಖೆ ಆರಂಭಿಸಿದ್ದಾರೆ, ಆಳ್ವಾಸ್ ಕಾಲೇಜಿನ ಮುಖ್ಯಸ್ಥ ಡಾ. ಮೋಹನದಾಸ್ ಆಳ್ವ ಒಂದು ಪಕ್ಷದ ಜೊತೆ ಗುರುತಿಸಿಕೊಂಡು ಬಂದವರು ಎನ್ನುವುದು ಊರಿಗೇ ಗೊತ್ತಿರುವ ವಿಚಾರ. ಹಾಗಾಗಿ, ತನಿಖೆಯ ನೆಪದಲ್ಲಿ ರಾಜಕೀಯ ಮೇಲಾಟ ನಡೆಯದಿರಲಿ, ಪಾರದರ್ಶಕ ತನಿಖೆಯಿಂದ ಸತ್ಯ ಹೊರಬರಲಿ.
ಚುನಾವಣಾ ಈ ವರ್ಷದಲ್ಲಿ ಮತಬ್ಯಾಂಕಿಗಾಗಿ ಕಾವ್ಯ ಸಾವು, ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಸಾವಿನ ತನಿಖೆಯಂತೆ ಹಳ್ಳ ಸೇರದಿರಲಿ. ಈ ಮಧ್ಯೆ, ಪ್ರಕರಣದಲ್ಲಿ ಶಂಕಿತಸ್ಥ ಎಂದು ಗುರುತಿಸಲಾಗಿರುವ ಪಿಟಿ ಮಾಸ್ಟರ್ ನವೀನ್ ಕುಮಾರ್ ಅನ್ನುವವರನ್ನು ಆಳ್ವಾಸ್ ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದೆ.
ಸಸ್ಪೆಂಡ್ ಮಾಡಿದರೆ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತಾ, ಪ್ರತೀ ವರ್ಷ ಎಷ್ಟೊಂದು ಹೆಣ್ಣುಮಕ್ಕಳು ಆಳ್ವಾಸ್ ಕಾಲೇಜ್ ಕ್ಯಾಂಪಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಮೂಡಬಿದಿರೆ ಆಸುಪಾಸಿನಲ್ಲಿ ಜನ ಮಾತನಾಡಿಕೊಳ್ಳುತ್ತಿರುವುದು ಗಂಭೀರ ವಿಚಾರ.
ಘಟನೆ ನಡೆದ ದಿನ (ಜುಲೈ 20) ಬೆಳಗ್ಗೆ ನಾಲ್ಕು ಗಂಟೆಗೆ ಕಾವ್ಯಶ್ರೀಯನ್ನು ಕಾಲೇಜಿಗೆ ಕರೆಸಿಕೊಳ್ಳಲಾಗಿತ್ತು ಎನ್ನುವುದು ಪೋಷಕರ ಮಾತು. ಇದಕ್ಕೆ ತದ್ವಿರುದ್ದವಾಗಿ, ಆಳ್ವಾಸ್ ಕಾಲೇಜ್ ಸಿಸಿಟಿವಿ ಫುಟೇಜ್ ನಲ್ಲಿ ಬೆಳಗ್ಗೆ 6.42ಕ್ಕೆ ಕಾವ್ಯ ಕಾಲೇಜ್ ಆವರಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ದೃಶ್ಯ ಮತ್ತು 9.48ಕ್ಕೆ ಕಾಲೇಜ್ ಆವರಣ ಪ್ರವೇಶಿಸುತ್ತಿರುವ ದೃಶ್ಯ ಸೆರೆಯಾಗಿದೆ. ಮುಂದೆ ಓದಿ..
ಡಾ. ಮೋಹನದಾಸ್ ಆಳ್ವ ಹೇಳಿಕೆ
ಮೋಹನದಾಸ್ ಆಳ್ವ ಅವರು ಹೇಳುವ ಪ್ರಕಾರ, ಕಾವ್ಯಶ್ರೀ ಹಾಸ್ಟೆಲಿನ ಫ್ಯಾನಿಗೆ ನೇತು ಹಾಕಿಕೊಂಡಿದ್ದಳು, ಇದನ್ನು ಹಾಸ್ಟೆಲಿನ ಹುಡುಗಿಯರೇ ಹೇಳಿದ್ದಾರೆ. ಕೂಡಲೇ ಕಾವ್ಯಶ್ರೀಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆ ನಾಲ್ಕು ಗಂಟೆಗೆ ಅಕೆಯನ್ನು ಕಾಲೇಜಿಗೆ ಕರೆಸಿಕೊಂಡಿಲ್ಲ. ಅದು ಸುಳ್ಳು ಮಾಹಿತಿ ಎಂದಿದ್ದಾರೆ.
ಹಾಸ್ಟೆಲಿಗೆ ಸೀರೆ ಹೇಗೆ ಬಂತು ಎನ್ನುವುದು ಪ್ರಶ್ನೆ
ಹಾಸ್ಟೆಲಿಗೆ ಸೀರೆ ಹೇಗೆ ಬಂತು ಎನ್ನುವ ಪ್ರಶ್ನೆಗೆ ಆಳ್ವ ಅವರು ಹೇಳುವುದು, ಪಕ್ಕದ ಹಾಸ್ಟೆಲಿಗೆ ಬಂದಿದ್ದ ಬೇರೆ ವಿದ್ಯಾರ್ಥಿನಿಗಳ ಪೋಷಕರು ಸೀರೆ ತಂದಿರಬಹುದು. ಆ ದಿನ ಮೂರೂವರೆ ತನಕ ಆಕೆ ಕ್ಲಾಸ್ ನಲ್ಲಿದ್ದಾಳೆ. ಒಂದು ತಿಂಗಳಿ ಹಿಂದೆಯಷ್ಟೇ ನಮ್ಮ ಕಾಲೇಜಿಗೆ ಸೇರಿದ್ದಳು. ಓದಿನಲ್ಲಿ ಸಾಧಾರಣ ಹುಷಾರಿದ್ದಳು. ಕ್ರೀಡಾ ಕೋಟದಡಿಯಲಿ ಆಕೆಯನ್ನು ನಮ್ಮ ಕಾಲೇಜಿಗೆ ಸೇರಿಸಿಕೊಳ್ಳಲಾಗಿತ್ತು,
ರಾಬರ್ಟ್ ರೊಸಾರಿಯೋ ಹೇಳಿಕೆ
ದಕ್ಷಿಣಕನ್ನಡ ಮೂಲದ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ, ಆಳ್ವಾಸ್ ಸಂಸ್ಥೆ ಮತ್ತು ಮೋಹನದಾಸ್ ಆಳ್ವ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕನಿಷ್ಠ ಹತ್ತರಿಂದ ಹದಿನೈದು ಅಸಹಜ ಸಾವು ಪ್ರಕರಣ ಆಳ್ವಾಸ್ ಕ್ಯಾಂಪಸ್ ನಲ್ಲಿ ಪ್ರತೀ ವರ್ಷ ವರದಿಯಾಗುತ್ತದೆ. ಕಾವ್ಯಶ್ರೀ ಅವಳದ್ದೂ ಅಸಹಜ ಸಾವೇ, ಮೋಹನದಾಸ್ ಆಳ್ವ ಅವರನ್ನು ತನಿಖೆಗೆ ಒಳಪಡಿಸಿದರೆ ಎಲ್ಲಾ ಸತ್ಯ ಹೊರಬರುತ್ತದೆ ಎಂದು ರೊಸಾರಿಯೋ ಹೇಳುತ್ತಾರೆ.
ಆರ್ಟಿಐಗೆ ಅರ್ಜಿ ಹಾಕಿದರೂ ಮಾಹಿತಿ ಸಿಕ್ಕಿಲ್ಲ
ಕಾಲೇಜ್ ಆವರಣದಲ್ಲಿ ಇಷ್ಟು ಅಸಹಜ ಸಾವು ನಡೆಯುತ್ತಿರುವ ಬಗ್ಗೆ 2016ರಲ್ಲಿ ಮಾಹಿತಿ ಪಡೆಯಲು ಆರ್ಟಿಐಗೆ ಅರ್ಜಿ ಸಲ್ಲಿಸಿದ್ದೆವು, ಇದುವರೆಗೂ ನಮಗೆ ಆ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ. ಕಾವ್ಯಶ್ರೀಯದ್ದು ಕೊಲೆ ಎಂದೇ ನನ್ನ ನಂಬಿಕೆ. ಸಾಕ್ಷಿ ನಾಶ, ಮಾಧ್ಯಮಗಳ ಹೆಡ್ಲೈನ್ ಎಲ್ಲವೂ ಪೂರ್ವನಿಯೋಜಿತ. ಆಳ್ವ ಅವರ ಹೇಳಿಕೆಗಳು ಗೊಂದಲವಾಗಿದೆ. ಪೋಸ್ಟ್ ಮಾರ್ಟಂ ವರದಿ ಬರುವ ಮುನ್ನವೇ ಇದು ಆತ್ಮಹತ್ಯೆಯೆಂದು ಹೇಳಲು ಹೇಗೆ ಸಾಧ್ಯ? - ರೊಸಾರಿಯೋ.
ಪೋಷಕರ ಆಕ್ರಂದನ
ನನ್ನ ಮಗಳ ಮುಖವನ್ನು ಬಿಟ್ಟು ಬೇರೆ ಯಾವುದನ್ನೂ ನಮಗೆ ನೋಡಲು ಬಿಡಲಿಲ್ಲ. ಮೃತದೇಹ ಟ್ರ್ಯಾಕ್ ಸೂಟ್ ನಲ್ಲಿ ಸಿಕ್ಕಿದೆ, ಶವದಲ್ಲಿ ಒಂದೇ ಒಂದು ಗಾಯಗಳಿಲ್ಲ ಎಂದು ಆಳ್ವ ಅವರು ಹೇಗೆ ಹೇಳುತ್ತಾರೆ. ನಮ್ಮ ಅನುಮತಿಯಿಲ್ಲದೇ ಶವವನ್ನು ಶವಾಗಾರಕ್ಕೆ ಹೇಗೆ ಸಾಗಿಸಿದರು ಎನ್ನುವುದು ಪೋಷಕರ ಪ್ರಶ್ನೆ.
ನನ್ನ ಮಗಳನ್ನು ಸಾಯಿಸಿದರು
ಎನ್ನ ಬಾಲೆನು ಕೆರಿಯೆರು (ನನ್ನ ಮಗಳನ್ನು ಸಾಯಿಸಿದರು) ಆಳ್ವಾಸ್ ಕಾಲೇಜಿಗೆ ಯಾರೂ ಮಕ್ಕಳನ್ನು ಹಾಕಬೇಡಿ, ನನ್ನ ಮಗಳಿಗೆ ಆದ ತೊಂದರೆ ಬೇರೆ ಯಾರಿಗೂ ಆಗದಿರಲಿ. ನನ್ನ ಮಗಳನ್ನು ಕೊಲೆ ಮಾಡಿಬಿಟ್ರಲ್ಲಾ ಎಂದು ಕಾವ್ಯಶ್ರೀ ಪೋಷಕರ ಆಕ್ರಂದನ ಮನಕಲಕುತ್ತದೆ.
ತಾವುದೇ ತನಿಖೆಗೆ ನಾನು ಸಿದ್ದ
ಯಾವುದೇ ತನಿಖೆಗೆ ನಾನು ಸಿದ್ದನಿದ್ದೇನೆ, ನಾನು ಯಾವುದೇ ಮುಚ್ಚುಮರೆ ಮಾಡುವುದಿಲ್ಲ. ಮಾರ್ಕ್ ಕಮ್ಮಿ ಬಂದಿರುವುದಕ್ಕೆ ಕಾವ್ಯಶ್ರೀಗೆ ಬೇಸರವಿದೆ, ಸುಳ್ಳು ಸುಳ್ಳೇ, ಸತ್ಯವೇ ದೇವರು ಎಂದು ನಂಬಿರುವವನು. ದಶಕಗಳಿಂದ ವಿದ್ಯಾಸಂಸ್ಥೆ ನಡೆಸಿಕೊಂಡು ಬಂದಿದ್ದೇನೆ, 26 ಸಾವಿರ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ, ನಮ್ಮ ಮೇಲೆ ಬಂದಿರುವ ಆರೋಪಕ್ಕೆ ತನಿಖೆಯಿಂದ ಉತ್ತರ ಸಿಗಲಿಯೆಂದು ಆಶಿಸುತ್ತೇನೆಂದು ಡಾ.ಆಳ್ವ ಹೇಳಿದ್ದಾರೆ.