ಪುತ್ರನ ಮುಖ ನೋಡದ ನೋವು ಕಾಡಿತಾ ಪ್ರೊ. ನಿಸಾರ್ ಅಹಮ್ಮದ್ ಅವರಿಗೆ?
ಬೆಂಗಳೂರು, ಮೇ 07: ನಿತ್ಯೋತ್ಸವದ ಕವಿ ನಿಸಾರ್ ಅಹಮ್ಮದ್ ಅವರು ವಿಧಿವಶರಾಗಿ ವಾರವಾಗುತ್ತಿದೆ. ಅವರ ಅಗಲುವಿಕೆಗೆ ಇಡೀ ಕನ್ನಡ ನಾಡು ಕಂಬನಿ ಮಿಡಿದಿದೆ. ಕೊಟ್ಯಂತರ ಸಾಹಿತ್ಯಾಭಿಮಾನಿಗಳು ಪ್ರೊ. ನಿಸಾರ್ ಅಹಮ್ಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮೆರೆದ ಆ ಸಾಹಿತಿಯನ್ನು ಕನ್ನಡ ನಾಡು ಅರ್ಥಪೂರ್ಣವಾಗಿ ಬೀಳ್ಕೊಡಲಿಲ್ಲ. ಅದಕ್ಕೆ ಕಾರಣವಾಗಿದ್ದು ಕೊರೊನಾ ಎಂಬ ಮಹಾಮಾರಿ.
ವಿಪರ್ಯಾಸ ಅಂದರೆ ಕೊರೊನಾ ವೈರಸ್ ಮಹಾಮಾರಿ ಪರೋಕ್ಷವಾಗಿ ಪ್ರೊಫೆಸರ್ ನಿಸಾರ್ ಅಹಮ್ಮದ್ ಅವರ ಮೇಲೆ ಪರಿಣಾಮ ಬೀರಿತು. ಅದಕ್ಕೆ ಕಾರಣವಾಗಿದ್ದು ಆ ಒಂದು ಸಾವು. ಆ ಸಾವಿನಿಂದ ಪ್ರೊ. ನಿಸಾರ್ ಅಹಮ್ಮದ್ ತೀರಾ ನೊಂದಿದ್ದರು. ಆ ನೋವಿನಿಂದ ಹೊರಗೆ ಬರುವುದು ಅವರಿಗೆ ಆಗಲಿಲ್ಲ. ಕೊರೊನಾ ವೈರಸ್ ಅಟ್ಟಹಾಸದಲ್ಲಿ ಅವರ ನೋವು ಕೇಳಿಸಲಿಲ್ಲ, ಅಥವಾ ಅವರು ತಮ್ಮ ನೋವನ್ನು ಹಂಚಿಕೊಳ್ಳಲಿಲ್ಲ.
ಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶ
ಆತ್ಮವಿಸ್ವಾಸದಿಂದ ಎಲ್ಲವನ್ನೂ ಎದುರಿಸಿದ್ದರು
ಹೌದು ಕಳೆದ ನಾಲ್ಕೈದು ವರ್ಷಗಳಿಂದಲೂ ಪ್ರೊ. ನಿಸಾರ್ ಅಹಮ್ಮದ್ ಅವರಿಗಿದ್ದ ಕ್ಯಾನ್ಸರ್ನೊಂದಿಗೆ ಹೋರಾಡುತ್ತಲೇ ಬಂದಿದ್ದರು. ಆತ್ಮವಿಸ್ವಾಸದಿಂದ ಎಲ್ಲವನ್ನೂ ಎದುರಿಸಿದ್ದರು. ಹೀಗಾಗಿ ವೈದ್ಯರು ಕೂಡ ಅವರ ಆರೋಗ್ಯದ ಬಗ್ಗೆ ಭರವಸೆ ಕೊಟ್ಟಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಪ್ರೊಫೆಸರ್ ಆರೋಗ್ಯವಾಗಿಯೆ ಇದ್ದರು. ಆದರೆ ಅವರು ವಿಧಿವಶರಾಗುವ ಹತ್ತು ದಿನಗಳ ಹಿಂದೆ ಅಮೆರಿಕದಿಂದ ಬಂದಿದ್ದ ಅಘಾತಕಾರಿ ಸುದ್ದಿಯನ್ನು ಎದುರಿಸಲು ಅವರಿಂದ ಆಗಲಿಲ್ಲ. ಹೌದು ಅದು ಪುತ್ರನ ಸಾವಿನ ಸುದ್ದಿ.
ಕೊನೆಯ ಬಾರಿ ಪುತ್ರನ ಮುಖವನ್ನೂ ನೋಡಲಾಗಲಿಲ್ಲ
ಪ್ರೊ. ನಿಸಾರ್ ಅಹಮ್ಮದ್ ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಅವರಲ್ಲಿ ಒಬ್ಬ ಮಗಳು, ಒಬ್ಬಮಗ ಅಮೆರಿಕದಲ್ಲಿ ವಾಸವಾಗಿದ್ದಾರೆ. ಅಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಪುತ್ರನಿಗೂ ಕ್ಯಾನ್ಸರ್ ಇತ್ತಂತೆ. ಅಮೆರಿಕದಲ್ಲಿಯೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಕೊರೊನಾ ವೈರಸ್ ಅಟ್ಟಹಾಸದಿಂದ ಅಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಬಿಟ್ಟರೆ ಬೇರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಹೀಗಾಗಿ ದಿ. ಪ್ರೊ. ನಿಸಾರ್ ಅಹಮ್ಮದ್ ಅವರ ಪುತ್ರ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ತರಲೂ ಆಗಿಲ್ಲ. ಜೊತೆಗೆ ಪುತ್ರನ ಮುಖವನ್ನು ಕೊನೆಯ ಬಾರಿ ನೋಡುವುದು ಪ್ರೊಫೆಸರ್ ಅವರಿಗೆ ಆಗಲಿಲ್ಲ. ಇದೇ ಕೊರಗು ಅವರನ್ನು ತುಂಬಾ ಕಾಡಿತು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕೊನೆಯಲ್ಲಿ ಕಂಡವರು.
ಲಾಕ್ಡೌನ್ನಿಂದ ಅಂತಾರಾಷ್ಟ್ರೀಯ ಗಡಿ ಬಂದ್
ಲಾಕ್ಡೌನ್ನಿಂದ ದೇಶಗಳ ಗಡಿ ಬಂದ್ ಆಗಿವೆ. ಹೀಗಾಗಿ ಮಗನ ಮುಖವನ್ನು ಕೊನೆಯ ಸಲ ನೋಡಲಾಗಲಿಲ್ಲ. ಅಮೆರಿಕಕ್ಕೆ ಹೋಗುವುದಾಗಲಿ ಅಥವಾ ಅಲ್ಲಿಂದ ಮೃತದೇಹವನ್ನು ತರುವುದಾಗಲಿ ಆಗಲಿಲ್ಲ. ಈ ಪುತ್ರ ಶೋಕ ಪ್ರೊಫೆಸರ್ ಅವರನ್ನು ಮತ್ತಷ್ಟು ಕಾಡಿತು. ಜೊತೆಗೆ ಅಮೆರಿಕದಲ್ಲಿ ಕೊರೊನಾ ವೈರಸ್ ಹರಡುವ ಆತಂಕದಿಂದ ಕುಟುಂಬಸ್ಥರಿಗೂ ಮೃತದೇಹಗಳನ್ನು ಕೊಡುತ್ತಿಲ್ಲ. ಪುತ್ರನ ದೇಹ ಸಾಮೂಹಿಕ ಅಂತ್ಯಸಂಸ್ಕಾರವಾಯಿತು ಎಂಬ ನೋವು ಅವರನ್ನು ಕಾಡಿದೆ.
ವರ್ಷದ ಹಿಂದೆ ಅಗಲಿದ್ದ ಪ್ರೀತಿಯ ಮಡದಿ
ಇನ್ನು ಪ್ರೊ. ನಿಸಾರ್ ಅಹಮ್ಮದ್ ಅವರ ಪತ್ನಿ ಷಹವಾಜ್ ಬೇಗಂ ಅವರು ವಯೋಸಹಜವಾಗಿ ವಿಧಿವಶರಾಗಿದ್ದರು. ಪ್ರೀತಿಯ ಮಡದಿಯ ಅಗಲುವಿಕೆ ಕೂಡ ಪ್ರೊಫೆಸರ್ರನ್ನು ಕಾಡಿತ್ತು. ಅದಾದ ಬಳಿಕ ಕೊರೊನಾ ವೈರಸ್ ಅಟ್ಟಹಾಸದಲ್ಲಿ ಪುತ್ರನ ಸಾವು ಅವರನ್ನುಮತ್ತಷ್ಟು ಕಾಡಿದೆ. ಹೀಗಾಗಿ ತೀರಾ ನೋವಿನಿಂದ ಅವರು ಕನ್ನಡ ನಾಡಿನ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಎಲ್ಲೆಲ್ಲಿ ಹೇಗೆ ತೀರಿಸುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈ ಎಲ್ಲದರ ಮಧ್ಯೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಕೊಟ್ಟ ಪ್ರೊ. ನಿಸಾರ್ ಅಹಮ್ಮದ್ ಅವರನ್ನು ಅರ್ಥಪೂರ್ಣವಾಗಿ ಬೀಳ್ಕೊಡಲು ಆಗಲಿಲ್ಲ.