ಲಕ್ಷ್ಮಣ ಸವದಿಗೆ ಪಕ್ಷದ ಬಗ್ಗೆ ಬೇಸರ, ಆಪ್ತರ ಬಳಿ ಏನು ಹೇಳಿದ್ರು?
ಬೆಂಗಳೂರು, ಸೆಪ್ಟೆಂಬರ್ 10: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಕೂಡ ಈ ಬಾರಿ ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಲಭಿಸಿದೆ.
ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಮೂಲಕ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿರುವ ಸವದಿ ಇದೀಗ ಹೆಚ್ಚೂ ಕಡಿಮೆ ಏಕಾಂಗಿಯಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಅಭಿಪ್ರಾಯಪಟ್ಟಿವೆ.
ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ
ನಾನು ಸೋತು ಮನೆಯಲ್ಲಿದ್ದವನು, ನಾನಾಗಿಯೇ ಯಾವ ಅಧಿಕಾರ ಬೇಕು ಎಂದೂ ಕೇಳಿಲ್ಲ, ಪಕ್ಷದ ವರಿಷ್ಠರು, ಸಂಘದ ನಾಯಕರ ಸೂಚನೆ ಮೇರೆಗೆ ಸಚಿವ, ಡಿಸಿಎಂ ಸ್ಥಾನ ಪಡೆಯಬೇಕಾಯಿತು.
ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ನಾನು ನನ್ನ ಕ್ಷೇತ್ರಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು ಹಿರಿಯ ನಾಯಕರ ಕೋಪಕ್ಕೆ ತುತ್ತಾಗಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂತರ ಕಾಪಾಡಿಕೊಳ್ಳುತ್ತಿರುವ ಸಚಿವರು
ಸಂಪುಟ ಸೇರುವವರೆಗೆ ಜೊತೆಗಿದ್ದ ಕೆಲವು ಸಚಿವರು ಹಾಗೂ ಶಾಸಕರು ಈ ಲಕ್ಷ್ಮಣ ಸವದಿಯವರ ಬಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿವೆ. ಆದರೆ ಇದು ಗುಟ್ಟಿನ ವಿಷಯವೇನಲ್ಲ, ಈ ಅನಪೇಕ್ಷಿತ ಬೆಳವಣಿಗೆಯಿಂದ ಸವದಿ ಬೇಸರಪಟ್ಟುಕೊಂಡಿದ್ದಾರೆ ಎಂದು ಆಪ್ತರು ಹೇಳಿದ್ದಾರೆ.
ಕೇವಲ ಇಬ್ಬರು ಉಪಮುಖ್ಯಮಂತ್ರಿಗಳಿಗೆ ಪ್ರಾಶಸ್ತ್ಯ
ಮೂವರು ಉಪಮುಖ್ಯಮಂತ್ರಿಗಳಲ್ಲಿ ಗೋವಿಂದ ಕಾರಜೋಳ ಹಾಗೂ ಡಾ. ಸಿಎನ್ ಅಶ್ವತ್ಥನಾರಾಯಣ ಅವರಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಇದು ಸಾರ್ವಜನಿಕವಾಗಿಯೂ ಗೋಚರವಾಗುತ್ತಿದೆ.
ಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯ
ಬೆಳವಣಿಗೆ ಗಮನಿಸುತ್ತಿರುವ ವರಿಷ್ಠರು, ಸಂಘ ಪರಿವಾರದವರು
ಈ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮಧ್ಯಪ್ರವಶ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ. ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರಿಗೆ ಮನಸ್ಸಿಲ್ಲದಿದ್ದರೂ ಪಕ್ಷದ ಹೈಕಮಾಂಡ್ ಹಾಗೂ ಸಂಘ ಪರಿವಾರದ ಪ್ರಮುಖರು ತಮ್ಮದೇ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡರು.
ಲಕ್ಷ್ಮಣ ಸವದಿ ಯಡಿಯೂರಪ್ಪ ಪರಮಾಪ್ತರಲ್ಲಿ ಒಬ್ಬರು
ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿ ಹುದ್ದೆ ಅಲಂಕರಿಸುವುದಕ್ಕಿಂತಲೂ ಮುನ್ನ ಯಡಿಯೂರಪ್ಪ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದರು. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ನಂತರ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ಸವದಿ ಅವರನ್ನು ನೇಮಿಸುವ ಮೂಲಕ ತಮ್ಮ ತಂಡದಲ್ಲಿ ಸೇರಿಸಿಕೊಮಡಿದ್ದರು. ಇಂತಹ ಯಡಿಯೂರಪ್ಪನವರೇ ತಮ್ಮನ್ನು ಆಪ್ತ ವಲಯದಲ್ಲಿ ಸೇರಿಸಿಕೊಳ್ಳುತ್ತಿಲ್ಲ ಎಂದು ಸವದಿಗೆ ಅನ್ನಿಸಿದೆ ಎಂದು ಆಪ್ತವಲಯಗಳು ತಿಳಿಸಿವೆ.