ದಿನದಿಂದ ದಿನಕ್ಕೆ ಅಮಿತ್ ಶಾಗೆ ಬಿಸಿ ತುಪ್ಪವಾಗುತ್ತಿರುವ ರಾಜ್ಯ ಬಿಜೆಪಿ ನಾಯಕರ ಡಿಮಾಂಡ್
ಉಪಮುಖ್ಯಮಂತ್ರಿ ಹುದ್ದೆ ಎನ್ನುವುದು ದೆಹಲಿ ಬಿಜೆಪಿ ವರಿಷ್ಠರಿಗೆ ಬಿಸಿತುಪ್ಪವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಸಮರ್ಥ ಸಿಎಂ ಇರಬೇಕಾದರೆ, ಡಿಸಿಎಂ ಹುದ್ದೆ ಯಾಕೆ ಎನ್ನುವ ಬಣ ಒಂದು ಕಡೆ. ಜಾತಿಯ ಹೆಸರನ್ನು ಹೇಳಿಕೊಂಡು, ಆ ಹುದ್ದೆಗೆ ಡಿಮಾಂಡ್ ಮಾಡುತ್ತಿರುವ ಬಣ ಇನ್ನೊಂದು ಕಡೆ.
ಸದ್ಯಕ್ಕೆ ಧನುರ್ಮಾಸದ ಕಾರಣದಿಂದಾಗಿ ಸುಮ್ಮನಾಗಿರುವ ನೂತನ ಶಾಸಕರು, ಸಂಕ್ರಾಂತಿ ಮುಗಿಯುತ್ತಿದ್ದಂತೇ ಮತ್ತೆ ಸಂಪುಟ ರಚನೆಯ ವಿಚಾರದಲ್ಲಿ ಆಖಾಡಕ್ಕೆ ಇಳಿಯುವುದು ಅತ್ಯಂತ ಸ್ಪಷ್ಠ.
ತಮ್ಮ ಹೆಸರನ್ನು ಡಿಸಿಎಂ ಹುದ್ದೆಗೆ ಪರಿಗಣಿಸಬೇಕೆಂದು ಈಗಾಗಲೇ ರಮೇಶ್ ಜಾರಕಿಹೊಳಿ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಟ್ಟು ಹಿಡಿದು ಕೂತಿರುವುದು ಗೊತ್ತಿರುವ ವಿಚಾರ. ಅವರ ಸಮುದಾಯದ ಪೀಠಾಧಿಪತಿಗಳೂ, ಯಡಿಯೂರಪ್ಪನವರಿಗೆ ಒತ್ತಡವನ್ನು ಹಾಕುತ್ತಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ.
ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು
ಈ ವಿಚಾರದಲ್ಲಿ, ಒಂದು ಹೆಜ್ಜೆ ಮುಂದೆ ಹೋಗಿರುವ ಸಚಿವ ರಾಮುಲು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಹಿರಂಗವಾಗಿಯೇ ಆ ಸ್ಥಾನದ ಆಕಾಂಕ್ಷಿ ತಾನು ಎಂದು ರಾಮುಲು ಈಗಾಗಲೇ ಹೇಳಿಯಾಗಿದೆ.
ತಾನು ಪಕ್ಷದ ವಿರುದ್ದ ಕೆಲಸ ಮಾಡುವುದಿಲ್ಲ
"ತಾನು ಪಕ್ಷದ ವಿರುದ್ದ ಕೆಲಸ ಮಾಡುವುದಿಲ್ಲ. ನನಗೆ ಉಪಮುಖ್ಯಮಂತ್ರಿ ಹುದ್ದೆ ನೀಡದೇ ಇದ್ದಲ್ಲಿ ನನ್ನ ಜೊತೆಗೆ, ನನ್ನ ಸಮುದಾಯಕ್ಕೂ ಮುಜುಗರವಾಗುತ್ತದೆ. ಇದನ್ನೆಲ್ಲಾ ನಮ್ಮ ನಾಯಕರಿಗೆ ಮನವೊರಿಕೆ ಮಾಡಿದ್ದೇನೆ" ಎನ್ನುವ ಹೇಳಿಕೆಯನ್ನು ಆರೋಗ್ಯ ಸಚಿವ ಶ್ರೀರಾಮುಲು ನೀಡಿದ್ದಾರೆ.
ರಾಮುಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ
ಧನುರ್ಮಾಸ ಇನ್ನೇನು ಮುಗಿಯುತ್ತಿರುವುದರಿಂದ, ಕೊನೆಯ ಹಂತದ ಕಸರತ್ತು ನಡೆಸಲು ರಾಮುಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲು ಠಿಕಾಣಿ ಹೂಡಿರುವ ರಾಮುಲುಗೆ ಇದುವರೆಗೆ, ಶಾ ಭೇಟಿ ಸಾಧ್ಯವಾಗಲಿಲ್ಲ.
ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ
ರಾಜಸ್ಥಾನ ಪ್ರವಾಸದಲ್ಲಿರುವ ಅಮಿತ್ ಶಾ
ರಾಜಸ್ಥಾನ ಪ್ರವಾಸದಲ್ಲಿರುವ ಅಮಿತ್ ಶಾ, ಶನಿವಾರ (ಜ 4) ದೆಹಲಿಗೆ ವಾಪಸ್ ಆಗುವ ಸಾಧ್ಯತೆಯಿದೆ. ಶಾ ಅವರ ಭೇಟಿ ಸಾಧ್ಯವಾದರೆ, ಪಕ್ಷಕ್ಕಾಗಿ ತಾನು ಮಾಡಿದ ಕೆಲಸ, ಸಮುದಾಯದ ಒತ್ತಡ ಎಲ್ಲವನ್ನೂ ಅಮಿತ್ ಶಾಗೆ, ರಾಮುಲು ವಿವರಿಸುವ ಸಾಧ್ಯತೆಯಿದೆ.
ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು
ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು, ಜಾರಕಿಹೊಳಿ ಮತ್ತು ಶ್ರೀರಾಮುಲು ನಮ್ಮ ಕಣ್ಣುಗಳು ಇದ್ದಂತೆ. ಇಬ್ಬರಲ್ಲಿ, ಯಾರಿಗೆ ಡಿಸಿಎಂ ಹುದ್ದೆ ಕೊಟ್ಟರೂ, ನಮಗೆ ಅಭ್ಯಂತರವಿಲ್ಲ. ಬಿಜೆಪಿ ಚುನಾವಣೆಗೆ ಮುನ್ನ ನೀಡಿದ ವಾಗ್ದಾನವನ್ನು ಪೂರೈಸಬೇಕೆಂದು ಯಡಿಯೂರಪ್ಪನವರಲ್ಲಿ ಒತ್ತಾಯಿಸಿದ್ದಾರೆ.
ಅಂತಿಮ ಕಸರತ್ತು: ಅಮಿತ್ ಶಾ ಭೇಟಿ ಮಾಡಲು ದೆಹಲಿಯಲ್ಲಿ ಶ್ರೀರಾಮುಲು ಠಿಕಾಣಿ
ಒಂದು ವೇಳೆ, ಡಿಸಿಎಂ ಹುದ್ದೆ ನೀಡದಿದ್ದಲ್ಲಿ ವಾಲ್ಮೀಕಿ ಸಮುದಾಯದ ಎಲ್ಲಾ ಶಾಸಕರು ರಾಜೀನಾಮೆ ನೀಡಲಿದ್ದಾರೆ" ಎನ್ನುವ ಎಚ್ಚರಿಕೆಯನ್ನೂ ಪ್ರಸನ್ನಾನಂದ ಸ್ವಾಮೀಜಿ ನೀಡಿದ್ದಾರೆ. ಒಟ್ಟಿನಲ್ಲಿ, ದಿನದಿಂದ ದಿನಕ್ಕೆ ಬಿಜೆಪಿ ವರಿಷ್ಠರಿಗೆ, ಉಪಮುಖ್ಯಮಂತ್ರಿ ಹುದ್ದೆ ಬಿಸಿತುಪ್ಪವಾಗುತ್ತಿದೆ.