ಸಣ್ಣ ಪಕ್ಷದ ಮಾತು ಕೇಳಬೇಕಿರುವುದು ನೋವು ತಂದಿದೆ: ಪರಮೇಶ್ವರ್
Recommended Video
ಬೆಂಗಳೂರು, ಜೂನ್ 2: ಸಂಪುಟ ರಚನೆಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಮೈತ್ರಿ ಸರ್ಕಾರದಲ್ಲಿನ ಶಾಸಕರ ಅಸಮಾಧಾನ ಹೆಚ್ಚಾಗುತ್ತಿದೆ.
ಖಾತೆ ಹಮಚಿಕೆ ವಿಚಾರದಲ್ಲಿದ್ದ ಗೊಂದಲಗಳು ಬಗೆಹರಿಸಿದರೂ ಯಾರಿಗೆ ಯಾವ ಖಾತೆ ಸಿಗಲಿದೆ, ಯಾವ ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಲಿವೆ ಎಂಬ ಕುತೂಹಲ ಹೆಚ್ಚಾಗಿವೆ.
ಸಂಸತ್ ಚುನಾವಣೆಗೆ ಸೀಟು ಹಂಚಿಕೆ ಫೈನಲ್ ಆಗಿಲ್ಲ: ಪರಂ ಸ್ಪಷ್ಟನೆ
ಈ ಮಧ್ಯೆಯೇ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಜೆಡಿಎಸ್ ಜತೆಗಿನ ಮೈತ್ರಿಯ ಕುರಿತಂತೆ ತಮ್ಮೊಳಗಿನ ಬೇಸರವನ್ನು ಹೊರಹಾಕಿದ್ದಾರೆ.
ಅನಿವಾರ್ಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜತೆ ಕೈಜೋಡಿಸಿದ್ದೇವೆ. ಜೆಡಿಎಸ್ ನವರು ಪ್ರಮುಖ ಖಾತೆಗಳು ತಮಗೇ ಬೇಕೆಂದು ಪಟ್ಟು ಹಿಡಿದು ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ಸಣ್ಣ ಪಕ್ಷದ ಮಾತು ಕೇಳಬೇಕಾಗಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಪರಮೇಶ್ವರ್ ಅವರು ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಬೇಸರ ಹಂಚಿಕೊಂಡಿದ್ದಾರೆ.
ಅದರ ಜತೆಗೆ ಅವರು ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಮುಂದೆ ಇಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಲ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದರೆ ನಮ್ಮ ಧ್ವನಿ ಗಟ್ಟಿಯಾಗಲಿದೆ ಎಂದು ಅತೃಪ್ತರ ಮನವೊಲಿಸಲು ಪರಮೇಶ್ವರ್ ಮುಂದಾಗಿದ್ದಾರೆ.
ಡಿಕೆಶಿಗೆ ಯಾವ ಖಾತೆಯೂ ಇಲ್ಲ, ಉಡುಗೊರೆಯೂ ಇಲ್ಲ!
ಇದೇ ಸಂದರ್ಭದಲ್ಲಿ ಅವರು ಲೋಕಸಭೆಯ ಚುನಾವಣೆಯನ್ನು ಜೆಡಿಎಸ್ ಜತೆಗೂಡಿ ಎದುರಿಸುವ ಬಗ್ಗೆ ಸಹ ಮಾತನಾಡಿದ್ದಾರೆ.
ಈ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಶೇ 38.8ರಷ್ಟು ಮತಗಳನ್ನು ನನೀಡಿದ್ದಾರೆ. 2013ರ ಚುನಾವಣೆಗಿಂತ ಎರಡು ಪರ್ಸೆಂಟ್ ಜಾಸ್ತಿ ಕೊಟ್ಟಿದ್ದಾರೆ. ಅನೇಕ ತಾಂತ್ರಿಕ ಕಾರಣದಿಂದ ನಮಗೆ ಸಂಖ್ಯಾಬಲ ಹೆಚ್ಚಾಗಲಿಲ್ಲ.
ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ ಎಂಬುದನ್ನು ಈಗಾಗಲೇ ಪ್ರಕಟಣೆ ಮಾಡಿದ್ದೇವೆ.
ಯಾರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆಯೋ ಅವರಿಗೆ ಟಿಕೆಟ್ ಹಂಚಿಕೆ ಮಾಡಬೇಕು ಎಂಬ ಸಲಹೆ ಮಾಡಲಾಗಿದೆ. ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕಿದೆ ಎಂದರು.