ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಮಹತ್ವದ ಮಾತುಕತೆ
Recommended Video
ಬೆಂಗಳೂರು, ನವೆಂಬರ್ 07: ಉಪಚುನಾವಣೆ ಮುಗಿಸಿ ಖುಷಿಯಿಂದಿರುವ ಕಾಂಗ್ರೆಸ್ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಬಹು ಕಾಲದಿಂದ ಮುಂದೂಡಿಕೊಂಡು ಬರುತ್ತಿದ್ದ ಸಂಪುಟ ವಿಸ್ತರಣೆಯನ್ನು ಈಗ ಮಾಡಲೇ ಬೇಕಿದೆ.
ಇದೇ ವಿಷಯವಾಗಿ ಇಂದು ಡಿಸಿಎಂ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಚರ್ಚೆ ಮಾಡಿದ್ದಾರೆ.
ದೀಪಾವಳಿ ಶುಭಾಶಯಕೋರಲೆಂದು ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ್ದ ಪರಮೇಶ್ವರ್ ಅವರು ಬಹು ಕಾಲ ಸಂಪುಟ ವಿಸ್ತರಣೆ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಜೊತೆ ಜಮೀರ್ ಅಹ್ಮದ್ ಕೂಡ ಇದ್ದರು.
ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ
ನಿನ್ನೆಯಷ್ಟೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಜೊತೆ ಇದೇ ವಿಚಾರವಾಗಿ ಚರ್ಚೆ ನಡೆಸಿ ಹೋಗಿದ್ದಾರೆ. ಅದರ ಮುಂದಿನ ಭಾಗವಾಗಿಯೇ ಇಂದು ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಪಟ್ಟಿ ತಯಾರಿಸಿರುವ ದಿನೇಶ್ ಗುಂಡೂರಾವ್
ವೇಣುಗೋಪಾಲ್ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಅವರು ಸಂಪುಟ ಸೇರ್ಪಡೆಗೊಳ್ಳಬೇಕಾದವರ ಪಟ್ಟಿ ತಯಾರು ಮಾಡಿದ್ದು ಸಿದ್ದರಾಮಯ್ಯ ಅವರು ಪಟ್ಟಿಯ ಪರಾಮರ್ಶೆ ನಡೆಸುತ್ತಾರೆ, ಹಾಗಾಗಿ ಇಂದಿನ ಪರಮೇಶ್ವರ್, ಸಿದ್ದರಾಮಯ್ಯ ಭೇಟಿ ಬಹು ಮುಖ್ಯವಾಗಿದೆ.
ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು
ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಕಾಂಗ್ರೆಸ್
ಲೋಕಸಭೆ ಚುನಾವಣೆ ಸನಿಹದಲ್ಲಿರುವ ಕಾರಣ ಸಂಪುಟ ವಿಸ್ತರಣೆಯು ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅವಶ್ಯಕತೆ ಕಾಂಗ್ರೆಸ್ಗೆ ಇದೆ. ಹಾಗಾಗಿ ಹಿರಿಯ ನಾಯಕರು ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕಕ್ಕೆ ಇಂದಿನಿಂದ ಶ್ರೀಕಾರ!
ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ವಿಸ್ತರಣೆ
ಲೋಕಸಭೆ ಚುನಾವಣೆಗೆ ಅನುಕೂಲವಾಗುವಂತೆ ಸಂಪುಟ ವಿಸ್ತರಣೆ ಮಾಡುವ ಯೋಚನೆಯೂ ಕಾಂಗ್ರೆಸ್ ಮಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಹಾಯಕರವಾಗುವ ಮಾದರಿಯಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಉಳಿಕೆ ಸ್ಥಾನಗಳು
ಕಾಂಗ್ರೆಸ್ ಬಳಿ ಆರು ಸಚಿವ ಸ್ಥಾನಗಳು ಉಳಿಕೆಯಾಗಿವೆ. ಜೆಡಿಎಸ್ನಲ್ಲಿ ಎರಡು ಸ್ಥಾನ ಇವೆ. ಮಹೇಶ್ ಅವರ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿದ್ದು ಅದನ್ನೂ ಸೇರಿದಂತೆ ಎರಡು ಸ್ಥಾನ ಬಾಕಿ ಇದೆ. ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳು ಅತಿ ಹೆಚ್ಚಿದ್ದಾರೆ. ಇದು ಕಾಂಗ್ರೆಸ್ಗೆ ತಲೆ ನೋವಾಗಿದೆ.
ಯಾರ್ಯಾರು ಆಕಾಂಕ್ಷಿಗಳು
ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಮಾಜಿ ಸಚಿವ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಡಾ.ಸುಧಾಕರ್, ಎಚ್ಕೆ ಪಾಟೀಲ್, ಬಿಸಿ ಪಾಟೀಲ್, ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಮಾಜಿ ಸಚಿವ ತನ್ವೀರ್ ಸೇಠ್, ಆನಂದ್ ಸಿಂಗ್, ತುಕಾರಾಂ, ಪರಮೇಶ್ವರ್ ನಾಯಕ್, ಭಿಮಾ ನಾಯಕ್, ಇನ್ನೂ ಹಲವು ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. 20 ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನವನ್ನು ಕೇಳುತ್ತಿದ್ದಾರೆ.