ಕಾಂಗ್ರೆಸ್ ಸಚಿವರ ಸಭೆಯಲ್ಲಿ ರಾಜಕೀಯ ಚರ್ಚೆಯೇ ನಡೆದಿಲ್ಲ: ಪರಮೇಶ್ವರ್
ಬೆಂಗಳೂರು, ಜೂನ್ 28: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಬುಗಿಲೆದ್ದಿದ್ದರೂ ಇಂದಿನ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಸಭೆಯಲ್ಲಿ ರಾಜಕೀಯ ಚರ್ಚೆಯೇ ನಡೆದಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ ಮುಂಬರುವ ಲೋಕಸಭಾ ಚುನಾವಣೆ ಕುರಿತಂತೆ ಮಾತ್ರ ಚರ್ಚಿಸಿದ್ದೇವೆ ಬೇರೆ ಏನೂ ಚರ್ಚಿಸಿಲ್ಲ ಎಂದು ಹೇಳಿ ಸರ್ಕಾರದಲ್ಲಿನ ಭಿನ್ನಮತವನ್ನು ಅಡಗಿಸಲು ಪ್ರಯತ್ನಿಸಿದರು.
ಕಾಂಗ್ರೆಸ್ ಸಚಿವರ ಬಾಯಿಗೆ ಬೀಗ: ಹೈಕಮಾಂಡ್ ಸಂದೇಶ ರವಾನಿಸಿದ ಪರಮೇಶ್ವರ್
ಕಾಂಗ್ರೆಸ್ ಸಚಿವರ ಸಭೆ ಕರೆದಿದ್ದೆವು. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ತಯಾರಿ ಮಾಡಿಕೊಳ್ಳಲು ಮತ್ತು ಹೆಚ್ಚು ಸ್ಥಾನ ಗೆಲ್ಲಲು ರಣನೀತಿ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಪಕ್ಷದ ಎಲ್ಲಾ ಸಚಿವರು ಭಾಗವಹಿಸಿದ್ದರು, ಅವರೂ ಸಲಹೆ ಕೊಟ್ಟರು. ಅಖಿಲ ಭಾರತ ಕಾಂಗ್ರೆಸ್ ಸೂಚನೆ ಅವರಿಗೆ ತಿಳಿಸಿದ್ದೇನೆ. ಅವರ ಜವಾಬ್ದಾರಿಯನ್ನೂ ತಿಳಿಸಿದ್ದೇನೆ. ಮೈತ್ರಿ ಸರ್ಕಾರದಲ್ಲಿದ್ದೇವೆ, ನಮ್ಮ ಇಲಾಖೆಯಲ್ಲಿ ಕ್ರಿಯಾಶೀಲ ಕೆಲಸ ಮಾಡಲು ಸೂಚನೆ ಕೊಡಲಾಗಿದೆ ಎಂದರು.
ಸಣ್ಣ ಪುಟ್ಟ ಗೊಂದಲ ಬಗೆಹರಿಸಲು ತಿಳಿಸಿದ್ದಾರೆ, ಈ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ. ಜಿಲ್ಲಾ ಸಚಿವರನ್ನು ಶೀಘ್ರ ನೇಮಕ ಮಾಡಬೇಕು ಎಂಬ ಚರ್ಚೆ ನಡೆಯಿತು. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಸಚಿವರೆಲ್ಲ ಹೇಳಿದ್ದಾರೆ. ಬೇರೆ ವಿಷಯ ಚರ್ಚೆ ನಡೆದಿಲ್ಲ, ಜಿಲ್ಲಾ ಕಚೇರಿ ಕಾಂಗ್ರೆಸ್ ಕಚೇರಿಗೆ ಹೋಗಬೇಕು, ವಿಧಾನಸಭೆ ಕ್ಷೇತ್ರಕ್ಕೆ ಹೋದಾಗ ಪಕ್ಷದ ಶಾಸಕರು, ಅಭ್ಯರ್ಥಿ ಗಳ ಜತೆ ಮಾತನಾಡಬೇಕು ಎಂದು ಸಚಿವರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಸಚಿವ ಸಂಪುಟದ ಬಗ್ಗೆ ಈ ಹಂತದಲ್ಲಿ ಚರ್ಚೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಏಳು ಸ್ಥಾನ ಭರ್ತಿಯಾಗಬೇಕು. ಅದಕ್ಕೂ ಮುನ್ನ ನಿಗಮಮಂಡಳಿಗಳಿಗೆ ಶಾಸಕರಿಗೆ ನೀಡಬೇಕೆಂದು ಆದಷ್ಟು ಬೇಗ ನೇಮಕ ಮಾಡಬೇಕೆಂಬ ಸಲಹೆ, ಒತ್ತಾಯ ಬಂದಿದೆ. ಸಿದ್ದರಾಮಯ್ಯ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಸಂಪುಟಕ್ಕೆ ಕಾಲಮಿತಿ ಇಲ್ಲ. ನಾಳೆಯೂ ಆಗಬಹುದು ಎಂದರು.