ಸವದಿ ಪುತ್ರನ ಕಾರು ಅಪಘಾತ, ಸ್ಥಳೀಯರು ಒನ್ಇಂಡಿಯಾಕ್ಕೆ ಕೊಟ್ಟ ವರದಿ
ಬೆಂಗಳೂರು, ಜು. 06: ಪುತ್ರನ ಕಾರು ಅಪಘಾತದಿಂದ ರೈತರೊಬ್ಬರು ಮೃತಪಟ್ಟಿರುವ ಕುರಿತು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪುತ್ರ ಪ್ರಯಾಣಿಸುತ್ತಿದ್ದ ಐಷಾರಾಮಿ ಎಂಜಿ ಗ್ಲಾಸ್ಟರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ರೈತ ಕೂಡಲೆಪ್ಪ ಬೋಳಿ (58) ಮೃತಪಟ್ಟಿದ್ದರು.
ಪುತ್ರ ಚಿದಾನಂದ ಸವದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತದ ಬಗ್ಗೆ ಇದೀಗ ಬೆಂಗಳೂರಿನಲ್ಲಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ ಅಪಘಾತ ಸಂಭವಿಸಿದಾಗ ಸ್ಥಳೀಯರು ಕೊಟ್ಟಿದ್ದ ಮಾಹಿತಿಗೂ, ಡಿಸಿಎಂ ಲಕ್ಷ್ಮಣ ಸವದಿ ಅವರು ಕೊಟ್ಟಿರುವ ಸಮಜಾಯಿಸಿಗೂ ಬಹಳಷ್ಟು ವ್ಯತ್ಯಾಸವಿದೆ ಎಂಬ ಆರೋಪ ಕೇಳಿ ಬಂದಿದೆ. ಅಪಘಾತದ ಕುರಿತು ಚಿದಾನಂದ ಸವದಿ ಕೂಡ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಷ್ಟಕ್ಕೂ ಹುನಗುಂದದ ಸಮೀಪ ನಡೆದಿದ್ದಾದರೂ ಏನು? ಇಡೀ ಪ್ರಕರಣದ ಕುರಿತು ಸ್ಥಳೀಯರು 'ಒನ್ಇಂಡಿಯಾ ಕನ್ನಡ'ಕ್ಕೆ ಕೊಟ್ಟ ಮಾಹಿತಿ ಏನು? ಮುಂದಿದೆ ಸಂಪೂರ್ಣ ಮಾಹಿತಿ!
ಪುತ್ರನ ಕಾರು ಅಪಘಾತವಾಗಿಲ್ಲ
ಪುತ್ರ ಚಿದಾನಂದ ಸವದಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. "ನಮ್ಮ ಮಗ ಹಲವು ದಿನಗಳಿಂದ ಅವನ ಸ್ನೇಹಿತರೊಂದಿಗೆ ಜೊತೆಗೂಡಿ ದಿನಸಿ ಸೇರಿದಂತೆ ಕಿಟ್ ಹಂಚಿಕೆ ಮಾಡಿದ್ದರು. ಹೀಗಾಗಿ ಕೊಪ್ಪಳ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು, ದರ್ಶನ ಪಡೆದು ವಾಪಸ್ ಬರುತ್ತಿದ್ದರು. ಚಿದಾನಂದ ಮುಂದಿನ ಗಾಡಿಯಲ್ಲಿದ್ದ, ಅವನು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿಲ್ಲ. ಅವನ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಚಿದಾನಂದ, ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ" ಎಂದು ಲಕ್ಷ್ಮಣ ಸವದಿ ಸಮಜಾಯಿಸಿ ಕೊಟ್ಟಿದ್ದಾರೆ. ಜೊತೆಗೆ ಕಾರಿನ ನಂಬರ್ ಪ್ಲೇಟ್ ಹಾಳು ಮಾಡಿರುವ ಕುರಿತೂ ಮಾತನಾಡಿದ್ದಾರೆ.
ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ: ಡಿಸಿಎಂ ಸವದಿ
ನಂಬರ್ ಪ್ಲೇಟ್ ಹಾಳು ಮಾಡುವ ಅಗತ್ಯ ಏನಿದೆ?
ನಂಬರ್ ಪ್ಲೇಟ್ ಹಾಳು ಮಾಡೋ ಅವಶ್ಯಕತೆ ಏನಿದೆ? ಮನೆಯವರ ಜೊತೆಗೆ ನಾನಿದ್ದೇನೆ. ಮೊಬೈಲ್ನಲ್ಲಿ ಮಾತನಾಡುವುದು ಸರಿಯಲ್ಲ. ಖುದ್ದಾಗಿ ನಾನೇ ನಾಳೆ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿ ಮಾಡುತ್ತೇನೆ. ಅಪಘಾತ ಆಗುತ್ತಿದ್ದಂತೆಯೆ ಚಿದಾನಂದನ ಗೆಳೆಯರು ಅವನಿಗೆ ಫೋನ್ ಮಾಡಿದ್ದಾರೆ. ಹೀಗಾಗಿ ಅಪಘಾತ ಸ್ಥಳಕ್ಕೆ ಚಿದಾನಂದ ವಾಪಸ್ ಹೋಗಿದ್ದಾನೆ. ಇಷ್ಟೇ ಅಲ್ಲ ಅವನೇ ಅಂಬ್ಯುಲೆನ್ಸ್ಗೆ ಫೋನ್ ಮಾಡಿ ಆಸ್ಪತ್ರೆಗೆ ಸೇರಿಸಿ, ಮನೆಗೆ ಹೋಗಿದ್ದಾನೆ. ಆ ಮೇಳೆ ರಾತ್ರಿ ಸಾವಾಗಿದೆ ಎಂಬ ಮಾಹಿತಿ ಬಂತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಪುತ್ರನಿಗೆ ವಾಹನ ಚಾಲನೆ ಮಾಡುವುದಿಲ್ಲ ಎಂದೂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಂತ್ರಿಯ ಮಗ ಅಂದಾಗ ಇದೆಲ್ಲ ಸಹಜ!
"ಮಂತ್ರಿಯ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ. ಸುಳ್ಳು ಯಾಕೆ ಹೇಳಬೇಕು? ನನ್ನ ಮಗ ಡ್ರೈವಿಂಗ್ ಮಾಡಲ್ಲ. ಹನುಮಂತ ಎಂಬ ಖಾಯಂ ಡ್ರೈವರ್ ಇದ್ದಾನೆ. ಚಿದಾನಂದ ಆ ಗಾಡಿಯಲ್ಲಿ ಇರಲೇ ಇಲ್ಲ. ಹೋದ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಪರಿಹಾರ ಕೊಡುತ್ತೇನೆ ಅದೇನಿಲ್ಲ. ಅವರ ಕುಟುಂಬಸ್ಥರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ" ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿದಾನಂದನನ್ನು ಹಿಡಿದು ಹಾಕಿದ್ದ ಸ್ಥಳೀಯರು!
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಅಪಘಾತ ಸಂಭವಿಸಿದಾಗ ಬೈಕ್ ಸವಾರ ಕೂಡಲೆಪ್ಪ ಬೋಳಿ ತಲೆಗೆ ಗಂಭೀರ ಗಾಯವಾಗಿತ್ತು. ಕೆಎ 22, ಎಮ್ ಸಿ 5151 ನಂಬರಿನ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಗಲಕೋಟೆ ತಾಲ್ಲೂಕಿನ ಚಿಕ್ಕಹಂಡರಗಲ್ ಗ್ರಾಮದ ರೈತ ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ನಿನ್ನೆ ಸಂಜೆ ಅಪಘಾತವಾಗಿತ್ತು. ಡಿಕ್ಕಿ ಹೊಡೆದ ನಂತರ ಬೈಕ್ ಸವಾರನ್ನು ಆಸ್ಪತ್ರೆಗೆ ಸಾಗಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ, ಕಾರಿನ ದಾಖಲೆಗಳೊಂದಿಗೆ ಮತ್ತೊಂದು ವಾಹನದಲ್ಲಿ ತೆರಳಲು ಚಿದಾನಂದ ಸವದಿ ಮುಂದಾಗಿದ್ದರು.
ಅಫಘಾತಕ್ಕೆ ಕಾರಣವಾಗಿದ್ದ ಕಾರು ಯಾರದ್ದು? ಎಂಬುದೂ ಗೊತ್ತಾಗದಂತೆ ಮಾಡಲು ಚಿದಾನಂದ ವವದಿ ಮುಂದಾಗಿದ್ದ. ಆಗ ಸ್ಥಳೀಯರು ಚಿದಾನಂದ ಸವದಿಯನ್ನು ಹಿಡಿದು ಕೂರಿಸಿದ್ದರು. ನಂತರ ಸ್ಥಳಕ್ಕೆ ಬಂದಿದ್ದ ಹುನಗುಂದ ಪೊಲೀಸರು ಚಿದಾನಂದನನ್ನು ಬಿಡಿಸಿ ಕಳುಹಿದ್ದರು. ಪ್ರಕರಣದ ಕುರಿತು ಹುನಗುಂದ ಠಾಣೆಯಲ್ಲಿ ದೂರು ದಾಖಲಾಗಿದೆ.
Recommended Video
ಚಿದಾನಂದನೆ ಸವದಿಯೇ ಕಾರು ಚಲಾಯಿಸುತ್ತಿದ್ದ!
ಅಪಘಾತ ನಡೆದಾಗ ಡಿಸಿಎಂ ಪುತ್ರ ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿದ್ದ. ಆದರೆ ಚಿದಾನಂದನನ್ನು ಬಿಟ್ಟು ಚಾಲಕ ಹನುಮಂತ ಸಿಂಗ್ ಎಂಬುವರ ಹೆಸರಲ್ಲಿ ದೂರು ದಾಖಲಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಲ್ಲದೆ ಅಪಘಾತ ಸಂಭವಿಸಿದಾಗ ಪ್ರಶ್ನೆ ಮಾಡಿದ್ದ ಸ್ಥಳೀಯರಿಗೆ, "ನಾನು ಡಿಸಿಎಂ ಲಕ್ಷಣ ಸವದಿ ಮಗ, ಹುಷಾರ್!" ಎಂದು ಚಿದಾನಂದ ಧಮಕಿ ಹಾಕಿದ್ದ ಎಂದು ಮೃತನ ಸಂಬಂಧಿಕರ ಆರೋಪಿಸಿದ್ದಾರೆ.
ಚಿದಾನಂದನೆ ಕಾರು ಚಲಾಯಿಸುತ್ತಿದ್ದ ಎಂದು ಹುನಗುಂದದ ನಿವಾಸಿ ಮುತ್ತಣ್ಣ ದಾಸರ್ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ಅಪಘಾತ ನಡೆದ ಕುರಿತು ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಚಿದಾನಂದ ಸವದಿ ಜೊತೆಗೆ 12 ಜನರು ಎರಡು ಕಾರುಗಳಲ್ಲಿ ಪ್ರವಾಸಕ್ಕೆ ಹೋಗಿದ್ದರು. ಹಂಪಿ, ಹೊಸಪೇಟೆ, ಕೊಪ್ಪಳ, ಅಂಜನಾದ್ರಿ ಬೆಟ್ಟ ಸೇರಿದಂತೆ ರಾಜ್ಯದ ವಿವಿಧ ಕಡೆ ಪ್ರವಾಸ ಹೋಗಿದ್ದರು. ಅಲ್ಲಿಂದ ವಾಪಸ್ ಬರುವ ವೇಳೆ ಅಪಘಾತ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ಇಡೀ ಪ್ರಕರಣದ ಚಿತ್ರಣವೇ ಬದಲಾಗಿದೆ.