ಸಾರಿಗೆ ನೌಕರರ ಮುಷ್ಕರ: ಮುಷ್ಕರ ಮಾಡುತ್ತಿರುವವರೇ ಬೇರೆ, ಸಂಧಾನಕ್ಕೆ ಕರೆದಿದ್ದೆ ಬೇರೆಯವರನ್ನು!
ಬೆಂಗಳೂರು, ಡಿ. 11: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಬಲಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರ ಸಂಘಟನೆಗಳು ಸೇರಿದಂತೆ ಕಾರ್ಮಿಕ ಸಂಘಟನೆಗಳನ್ನು ಸಂಧಾನ ಸಭೆಗೆ ಸರ್ಕಾರ ಆಹ್ವಾನಿಸಿತ್ತು. ವಿಕಾಸಸೌಧದಲ್ಲಿ ಸಾರಿಗೆ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು ಸಭೆಯನ್ನೂ ನಡೆಸಿದರು. ಆದರೆ ಸಭೆ ವಿಫಲವಾಯ್ತು. ಅದಕ್ಕೆ ಕಾರಣ ಮುಷ್ಕರ ನಡೆಸುತ್ತಿರುವವರೇ ಬೇರೆ, ಸಂಧಾನಕ್ಕೆ ಆಹ್ವಾನಿಸಿದ್ದೆ ಬೇರೆಯವರನ್ನು.
ಡಿಸಿಎಂ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಮಹತ್ವದ ಸಂಧಾನ ಸಭೆ ವಿಕಾಸಸೌಧದಲ್ಲಿ ನಡೆಯಿತು. ಆದರೆ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಆಗಲಿಲ್ಲ. ಯಾಕೆಂದರೆ ಮುಷ್ಕರ ನಿರತರು ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗಿನ ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಡಿಸಿಎಂ ಸವದಿ ಚರ್ಚೆ ನಡೆಸಿದರು. ಆ ಬಳಿಕ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದರು.
ಸಂಧಾನ ಸಭೆಗೆ ಬಂದವರು
ಎಐಟಿಸಿಯು, ಸಿಐಟಿಯು, ಮಹಾ ಮಂಡಳ, ಭಾರತೀಯ ಮಜ್ದೂರ್ ಸಂಘಟನೆಗಳ ಪ್ರತಿನಿಧಿಗಳು ಸಂಧಾನ ಸಭೆಗೆ ಬಂದಿದ್ದರು ಎಂದು ಸಭೆಯ ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಅವರು ಮಾಹಿತಿ ಕೊಟ್ಟಿದ್ದಾರೆ. ಆದರೆ ಪ್ರತಿಭಟನೆ ಮಾಡುತ್ತಿರುವವರು ನಮ್ಮನ್ನು ಸಂಪರ್ಕ ಮಾಡಿಲ್ಲ ಅಂತ ಹೇಳುತ್ತಿದ್ದಾರೆ. ನಮ್ಮ ನಾಲ್ಕು ಯೂನಿಯನ್ ಪ್ರತಿನಿಧಿಗಳನ್ನು ಕರೆದು ಮೀಟಿಂಗ್ ಮಾಡದೆ ಅವರನ್ನು ಕರೆದು ಸಭೆ ಮಾಡಿದರೆ ನಾಳೆ ನಮ್ಮ ಯೂನಿಯನ್ ಪ್ರತಿನಿಧಿಗಳು ಪ್ರಶ್ನೆ ಮಾಡುತ್ತಾರೆ.
ಸಾರಿಗೆ ನೌಕರರ ಮುಷ್ಕರ ಕುರಿತು ಡಿಸಿಎಂ ಲಕ್ಷ್ಮಣ ಸವದಿ ವಿವಾದಿತ ಹೇಳಿಕೆ!
ಸುಪ್ರೀಂಕೋರ್ಟ ಆದೇಶದಂತೆ ಸಂಧಾನ
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೊದಲ ಹಂತದ ನಾಲ್ಕು ಯೂನಿಯನ್ ಪ್ರಮುಖರನ್ನು ಕರೆದು ಸಭೆ ನಡೆಸಿದ್ದೇವೆ. ನಂತರ ಎರಡನೇ ಹಂತದಲ್ಲಿ ಮುಷ್ಕರ ಮಾಡುತ್ತಿರುವ ಮುಖಂಡರನ್ನು ಕರೆದು ಸಂಧಾನ ಸಭೆ ಮಾಡುತ್ತೆವೆ ಎಂದು ಸವದಿ ಹೇಳಿದ್ದಾರ. ಸಭೆಗೆ ಬೇಕಾದರೆ ಕೋಡಿಹಳ್ಳಿ ಚಂದ್ರಶೇಖರ್ವ ಅವರೂ ಬರಲಿ ಎಂದು ಸವದಿ ಹೇಳಿಕೆ ನೀಡಿದ್ದಾರೆ.
ಮುಷ್ಕರ ಮಾಡುತ್ತಿರುವವರು ನಾವಲ್ಲ!
ಸಬೆಯ ಬಳಿಕ ಮಾತನಾಡಿದ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತಸುಬ್ಬರಾವ್ ಮಾತನಾಡಿ, ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆ ನಾವಲ್ಲ. ಹಾಗಾಗಿ ಮುಷ್ಕರ ನಡೆಸುತ್ತಿರುವ ಸಂಘಟನೆಗಳ ಜತೆಗೂ ಮಾತುಕತೆ ನಡೆಸುವಂತೆ ಸಲಹೆ ಕೊಟ್ಟಿದ್ದೇವೆ. ನಾವು ಮುಷ್ಕರ ಕರೆದಿಲ್ಲ. ಜೊತೆಗೆ ಮುಷ್ಕರ ಮಾಡುವವರು ನಮ್ಮನ್ನು ಸಂಪರ್ಕ ಮಾಡಿಯೂ ಇಲ್ಲ. ಕೊರೊನ ಸಂದರ್ಭದಲ್ಲಿ ಮೃತ ಪಟ್ಟಿರುವ ಇಲಾಖೆ ನೌಕರರ ಮನೆಗೆ ಬಿಡಿಕಾಸು ಹೋಗಿಲ್ಲ ಎಂದರು.
ಸಂಧಾನ ವಿಫಲ, ಮುಂದುವರೆದ ಮುಷ್ಕರ
ವಿಕಾಸಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರ ಸಂಘಟನೆ ಪ್ರಮುಖರಿಗೆ ಆಹ್ವಾನವಿರಲಿಲ್ಲ. ಹೀಗಾಗಿ ಸಭೆ ವಿಫಲವಾಗಿದ್ದು, ಮುಷ್ಕರ ಮುಂದುವರೆಸಿದೆ. ಹೀಗಾಗಿಯೇ ಈ ಮುಷ್ಕರ ಮುಂದುವರೆದರೆ ಕಷ್ಟ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ನಿಮ್ಮ ಮೇಲೆ, ನಮ್ಮ ಮೇಲೆ ಶಾಪ ಹಾಕುವುದು ಬೇಡ. ಮುಷ್ಕರವನ್ನು ನಿಲ್ಲಿಸಿ. ಈಗ ಯಾರು ಪ್ರತಿಭಟನೆ ಮಾಡುತ್ತಿದ್ದಾರೋ ಅವರ ಪಟ್ಟಿ ಮಾಡಿದ್ದೇವೆ. ಅವರನ್ನೂ ಸಭೆಗೆ ಆಹ್ವಾನ ಮಾಡುತ್ತೇವೆ. ಅವರ ಜೊತೆ ಕೂಡ ಚರ್ಚೆ ಮಾಡುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ.
Recommended Video