ಏಪ್ರಿಲ್ 1 ರಂದೇ ಪಠ್ಯಪುಸ್ತಕ ಪೂರೈಕೆಗೆ ಡಿಸಿಎಂ ಸೂಚನೆ
ಬೆಂಗಳೂರು, ಡಿಸೆಂಬರ್ 12: ನಿಯಮಿತ ಅವಧಿಯಲ್ಲಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲು ವಿಳಂಬ ಮಾಡುತ್ತಿದ್ದ ವಸತಿ ಶಾಲೆಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಸಿ ಮುಟ್ಟಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಏಪ್ರಿಲ್ನಲ್ಲೇ ಪಠ್ಯಪುಸ್ತಕ ವಿತರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 2019-20 ನೇ ಸಾಲಿನಲ್ಲಿ 999 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದ್ದು, 863 ಕೋಟಿ ರೂ. ನಿರ್ವಹಣೆ ಗೆ ಹಾಗೂ ಉಳಿದ 135 ಕೋಟಿ ರೂ ಅನುದಾನವನ್ನು ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ.
ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿಯನ್ನು ನೀಡಬೇಕು. ಈಗಾಗಲೇ ನೇಮಕಾತಿ ಪ್ರಕ್ರಿಯೆಯಲ್ಲಿರುವ 3067 ಬೋದಕ ಹಾಗೂ ಬೋದಕೇತರ ಸಿಬ್ಬಂದಿ ವರ್ಗದ ವರಿಗೆ ಶೀಘ್ರವಾಗಿ ನೇಮಕಾತಿ ಆದೇಶ ನೀಡಬೇಕು. ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳ ಕಟ್ಟಡಗಳನ್ನು ಹೆಚ್ಚಾಗಿ ನಿರ್ಮಿಸಿ ಕೊರತೆಯನ್ನು ನೀಗಿಸಬೇಕು.
ಕಟ್ಟಡಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯಿಂದ ಪರಿಶೀಲಿಸಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಇಲಾಖೆ ವ್ಯಾಪ್ತಿಯ 68 ಪದವಿ ಪೂರ್ವ ಕಾಲೇಜುಗಳಲ್ಲಿ 3843 ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಂಡಿದ್ದಾರೆ. ಇವರಿಗೆ ಪರೀಕ್ಷೆ ಸಿದ್ದತೆಗೆ ಅನುಕೂಲವಾಗುವಂತೆ ರಜೆ ಅವಧಿಯಲ್ಲಿ ವಿಶೇಷ ತರಬೇತಿ ನೀಡಬೇಕು.
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ವ್ಯಾಸಂಗಕ್ಕೆ ಅಗತ್ಯ ಪೂರಕ ಪಠ್ಯ ಪುಸ್ತಕಗಳನ್ನು ನೀಡಬೇಕು. ಎಲ್ಲಾ ಶಾಲಾ ಕಾಲೇಜುಗಳ ಕಟ್ಟಡಗಳ ಆವರಣದಲ್ಲಿ ಸಸಿ ಬೆಳೆಸಲು ಅರಣ್ಯ ಇಲಾಖೆಯ ಸಹಕಾರ ಪಡೆಯಬೇಕು.
ಶಾಲಾ ಶೈಕ್ಷಣಿಕ ಹಾಗೂ ವಿಚಾರ ಪ್ರದರ್ಶನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟಕ್ಕೆ ಆಯ್ಕಯಾದ ವಿದ್ಯಾರ್ಥಿಗಳಿಗೆ ಬಹುಮಾನದೊಂದಿಗೆ ಅಭಿನಂದಿಸಿ ಉತ್ತೇಜನ ನೀಡಲಾಗುವುದು. 6, 7, ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳು ಭೇಟಿಗೆ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.
ಶೈಕ್ಷಣಿಕ ಮಾಸ ಪತ್ರಿಕೆ ಹಾಗೂ ವೆಬ್ ಸೈಟ್ ರೂಪಿಸಬೇಕು. ಯಾವುದೇ ಪೂರ್ವಾನುಮತಿ ಇಲ್ಲದೇ ಹೆಚ್ಚುವರಿ ಕಟ್ಟಡ ಕಾಮಗಾರಿಗಳನ್ನು ನಿರ್ಮಿಸಬಾರದು ಎಂದು ಸೂಚಿಸಿದರು.