ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಗೋವಿಂದ ಕಾರಜೋಳ!
ಬೆಂಗಳೂರು. ಡಿ.10: ಆಸೆಯೆ ದುಃಖಕ್ಕೆ ಮೂಲ ಎಂದು ಹೇಳ್ತಾರೆ. ಆದರೂ ಮನುಷ್ಯ ಆಸೆಯನ್ನು ತೊರೆಯುವುದು ಅಸಾಧ್ಯ. ಅದರಲ್ಲೂ ರಾಜಕಾರಣಿಗಳಿಗೆ ಆಸೆ ಹೆಚ್ಚು ಎಂದೇ ಪ್ರತೀತಿ. ಆದರೆ ಅದಕ್ಕೆ ಅಪವಾದವಾಗಿದ್ದಾರೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ್ ಅವರು. ಹೌದು, ತಮಗೆ ಉಡುಗೊರೆಯಾಗಿ ಕೊಟ್ಟಿದ್ದ ಬಂಗಾರದ ಕಿರೀಟವನ್ನೇ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಆ ಮೂಲಕ ಉಳಿದ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಹೌದು, ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳದ ಗ್ರಾಮದಸ್ಥರು ಡಿಸಿಎಂ ಗೋವಿಂದ್ ಕಾರಜೋಳ ಅವರಿಗೆ ಕೊಟ್ಟಿದ್ದ ಬಂಗಾರದ ಕಿರೀಟವನ್ನು ಡಿಸಿಎಂ ಕಾರಜೋಳ ಅವರು ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು.
ನಂತರ ಮಾತನಾಡಿದ ಅವರು, ತಮ್ಮ ಹುಟ್ಟೂರು ಕಾರಜೋಳ ಗ್ರಾಮದ ಎಲ್ಲ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ (14 ತೊಲೆ) ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ತಾವು ಸ್ವಗ್ರಾಮದ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತಂದಿದ್ದರ ಹಿನ್ನೆಲೆಯಲ್ಲಿ ತಮ್ಮೂರಿನ ಮನೆಯ ಮಗ ಡಿಸಿಎಂ ಆಗಿದ್ದಕ್ಕಾಗಿ ಪ್ರೀತಿ-ಗೌರವದಿಂದ ಈ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು ಎಂದು ಹೇಳಿದ್ದಾರೆ.
Recommended Video
ಕಳೆದ 6 ವರ್ಷಗಳಿಂದ ಸನ್ಮಾನ ಮಾಡಿ, ಸಮರ್ಪಿಸಲು ಪ್ರಯತ್ನಿಸಿದ್ದರು. ನವೆಂಬರ್ 23 ರಂದು ಈ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ದಿ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಸನ್ಮಾನಿಸಿ ಈ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ತಾವು ಶಾಸಕ, ಮಂತ್ರಿಯಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿದ್ದು, ಈ ಗೌರವ ಸರ್ಕಾರಕ್ಕೆ ಸಲ್ಲಬೇಕು. ಹೀಗಾಗಿ ಬಂಗಾರದ ಕಿರೀಟವನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸಿರುವುದಾಗಿ ಗೋವಿಂದ್ ಕಾರಜೋಳ್ ಹೇಳಿದ್ದಾರೆ. ಡಿಸಿಎಂ ಕಾರಜೋಳ್ ಅವರ ಈ ನಡೆ ಗ್ರಾಮಸ್ಥರು ಹಾಗೂ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.