ಕೋವಿಡ್ ಭಯಬೇಡ, ಸರ್ಕಾರದ ಹೊಸ ಪ್ರಯತ್ನ!
ಬೆಂಗಳೂರು, ಆ. 04: ಮುಂದುವರೆದ ದೇಶಗಳಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ವೈರಸ್ ಭಾರತದಲ್ಲಿ ತನ್ನ ಕರಾಳ ಹಸ್ತವನ್ನು ಚಾಚುವಲ್ಲಿ ವಿಫಲವಾಗಿದೆ. ಹೀಗಾಗಿ ಕೊರೊನಾವೈರಸ್ನಿಂದ ಮರಣ ಹೊಂದುತ್ತಿರುವವರ ಪ್ರಮಾಣ ಕೂಡ ಕಡಿಮೆಯಿದೆ. ಆದರೂ ಸಾವು ಸಾವೇ. ಹೀಗಾಗಿ ಸರ್ಕಾರ ಕಡಿಮೆ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ತಯಾರಿ ನಡೆಸಿದೆ.
ಕೋವಿಡ್ ಸೋಂಕಿನಿಂದ ನಗರ ವ್ಯಾಪ್ತಿಯಲ್ಲಿ ಆಗುತ್ತಿರುವ ಸಾವಿನ ನಿಖರ ಕಾರಣ ತಿಳಿಯಲು ಪ್ರತ್ಯೇಕವಾದ ಉನ್ನತಮಟ್ಟದ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರ ಜತೆ ಸಭೆ ನಡೆಸಿದ ನಂತರ ಅವರು ಮಾಹಿತಿ ಕೊಟ್ಟಿದ್ದಾರೆ.
ಶೂನ್ಯ ಮರಣ ಪ್ರಮಾಣ
ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಿದೆ. ಆದರೆ ಸೋಂಕಿನಿಂದ ಮರಣ ಹೊಂದುತ್ತಿರುವ ಪ್ರಮಾಣವನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂದು ವರದಿ ಕೊಡಲು ಡಿಸಿಎಂ ಡಾ. ಅಶ್ವಥ್ ನಾರಾಯಣ ವರದಿ ಕೊಡುವಂತೆ ಬಿಬಿಎಂಪಿಗೆ ಸೂಚಿಸಿದ್ದಾರೆ.
ಕರ್ನಾಟಕದ 17 ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಮಂದಿಗೆ ಕೊವಿಡ್-19!
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸುವ ಸಮಿತಿ, ಸಾವಿನ ಪ್ರಕರಣಗಳಿಗೆ ಕಾರಣ ಏನು? ಚಿಕಿತ್ಸೆ ತಡವಾಗಿದ್ದಕ್ಕೆ ಸಾವು ಸಂಭವಿಸಿತೇ? ಅಥವಾ ಚಿಕಿತ್ಸಾ ವಿಧಾನದಲ್ಲಿ ಏನಾದರೂ ಲೋಪಗಳು ಇತ್ತೇ? ಇತ್ಯಾದಿ ಅಂಶಗಳ ಬಗ್ಗೆ ಅಧ್ಯಯನ ನಡೆಸಬೇಕು. ನಂತರ ಸಮಿತಿ ಕೊಡುವ ವರದಿಯನ್ನಾಧರಿಸಿ, ಲೋಪಗಳನ್ನು ಸರಿಪಡಿಸಿಕೊಂಡು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಬೇಕು ಎಂದು ಡಾ. ಅಶ್ವಥ್ ನಾರಾಯಣ ಸೂಚಿಸಿದರು.
ಚಿಕಿತ್ಸಾ ನಿಯಮ
ಕೋವಿಡ್ ಸೋಂಕಿಗೆ ನಿಯಮಗಳ ಪ್ರಕಾರ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನೂ ನಿರಂತರವಾಗಿ ಪರಿಶೀಲನೆ ನಡೆಸಬೇಕು. ಖಾಸಗಿಯೇ ಇರಲಿ ಸರ್ಕಾರಿ ಆಸ್ಪತ್ರೆಗಳೇ ಇರಲಿ; ಎಲ್ಲ ಕಡೆ ಪರಿಶೀಲನೆ ಮಾಡುವ ಕೆಲಸ ಆಗಬೇಕು. ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದೂ ಡಿಸಿಎಂ ಅವರು ಬಿಬಿಎಂಪಿ ಆಯುಕ್ತರಿಗೆ ಸಲಹೆ ನೀಡಿದರು.
ಆನ್ಲೈನ್ ಅಪ್ಡೇಟ್
ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇವೆ? ಎಷ್ಟು ರೋಗಿಗಳು ವೆಂಟಿಲೇಟರ್ ಮೇಲಿದ್ದಾರೆ? ಎಷ್ಟು ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋಗಿದ್ದಾರೆ? ಇತ್ಯಾದಿ ಎಲ್ಲ ಮಾಹಿತಿಯೂ ಕ್ಷಣಕ್ಷಣಕ್ಕೂ ಆನ್ಲೈನ್ನಲ್ಲಿ ಅಪ್ಡೇಟ್ ಆಗಬೇಕು. ಈ ಮಾಹಿತಿ ಸಾರ್ವಜನಿಕರಿಗೂ ಆನ್ಲೈನ್ನಲ್ಲಿ ಸಿಗುವ ಹಾಗೆ ಮಾಡಬೇಕು ಎಂದು ಡಿಸಿಎಂ ಸೂಚಿಸಿದ್ದಾರೆ.
ಕೊವಿಡ್ ಮರಣ ದರ: ಮಹಾರಾಷ್ಟ್ರ, ದೆಹಲಿಗಿಂತ ರಾಜ್ಯವೇ ಉತ್ತಮ
ಕಾನೂನು ಕ್ರಮ
ಕೆಲವು ಆಸ್ಪತ್ರೆಗಳು ಬೆಡ್ಗಳ ಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಕೊಡುವ ಮಾಹಿತಿಗೆ ಲಭ್ಯವಿರುವ ಬೆಡ್ಗಳ ಸಂಖ್ಯೆ ಹೊಂದಿಕೆ ಆಗುತ್ತಿಲ್ಲ. ಅದನ್ನು ಸರಿಪಡಿಸಬೇಕು. ವ್ಯತ್ಯಾಸಗಳು ಕಂಡುಬಂದಲ್ಲಿ, ನೇರವಾಗಿ ಕಾನೂನು ಕ್ರಮ ತೆಗೆದುಕೊಳ್ಳುವ ಕೆಲಸ ಆಗಬೇಕು ಎಂದು ಡಿಸಿಎಂ ಆಯುಕ್ತರಿಗೆ ಸೂಚಿಸಿದರು.
ನಗರದಲ್ಲಿ ಆಶಾ ಕಾರ್ಯಕರ್ತೆಯರ ಕೊರತೆ ಇದ್ದು, ತಕ್ಷಣ ನೇಮಕ ಮಾಡಿಕೊಳ್ಳುವ ಕೆಲಸ ಆಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು; ಎಎನ್ಎಂ ಸಿಬ್ಬಂದಿಗೂ ಕೋವಿಡ್ ಭತ್ಯೆ ನೀಡುವುದಲ್ಲದೆ, ಅವರ ವೇತನ ಹೆಚ್ಚಳಕ್ಕೂ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಸಲಹೆಯನ್ನು ಉಪ ಮುಖ್ಯಮಂತ್ರಿ ನೀಡಿದರು.