ರವಿ ಚನ್ನಣ್ಣನವರ್ ವಿರುದ್ಧ ಸಿಎಂ ಯಡಿಯೂರಪ್ಪಗೆ ಲಕ್ಷ್ಮಣ ಸವದಿ ದೂರು!
ಬೆಂಗಳೂರು, ಏಪ್ರಿಲ್ 10: ಕೊರೊನಾ ಲಾಕ್ಡೌನ್ ನಡುವೆ ಕಳೆದ ವಾರ ಒಂದು ಸುದ್ದಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚನ್ನಣ್ಣನವರ್ ಅವರು ಮಾರು ವೇಷದಲ್ಲಿ, ಚೆಕ್ಪೋಸ್ಟ್ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರ್ಟಿಓ ಅಧಿಕಾರಿಗಳಿಬ್ಬರನ್ನು ಹಿಡಿದು ಜೈಲಿಗೆ ಅಟ್ಟಿದ್ದರು.
ಆದರೆ, ಇದೀಗ ರವಿ ಚನ್ನಣ್ಣವರ್ ಅವರ ಈ ನಡೆಯ ವಿರುದ್ಧ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗರಂ ಆಗಿದ್ದಾರೆ. ಅವರು ಚನ್ನಣ್ಣನವರ್ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ದೂರು ಓಯ್ದಿದ್ದಾರೆ ಎನ್ನಲಾಗಿದೆ.
ಬಸ್ ಟಿಕೆಟ್ ದರ ಏರಿಕೆಗೆ ಕಾರಣ ತಿಳಿಸಿದ ಸಚಿವ ಲಕ್ಷ್ಮಣ್ ಸವದಿ
ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರು ತಮಗೆ ಸಂಬಂಧ ಇರದ ಕೆಲಸ ಮಾಡಿದ್ದಲ್ಲದೇ, ಕಾರ್ಯಾಚರಣೆ ಬಗ್ಗೆ ಸುಳ್ಳು ಹೇಳಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಸವದಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳಲ್ಲಿ ಸಾಕಷ್ಟು ಹವಾ
ಲಾಕ್ಡೌನ್ ಜಾರಿಯಾದ ನಂತರ ಅಂತಾರಾಜ್ಯ ಗಡಿಗಳನ್ನು ಮುಚ್ಚಲಾಯಿತು. ಆಗ ಲಾಕ್ಡೌನ್ ಹೇಗೆ ಪರಿಪಾಲನೆ ಆಗುತ್ತಿದೆ ಎಂಬುದನ್ನು ಪರಿಶೀಲಿಸಲು ಎಸ್ ಪಿ ರವಿ ಚನ್ನಣ್ಣವರ್ ಅವರು ಮಾರು ವೇಷದಲ್ಲಿ ಬೆಂಗಳೂರು ಗ್ರಾಮಾಂತರ ವಲಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಚೆಕ್ಪೋಸ್ಟ್ನಲ್ಲಿ ಇಬ್ಬರು ಆರ್ಟಿಓ ಅಧಿಕಾರಿಗಳು ವಾಹನಗಳ ಮಾಲಿಕರಿಂದ ಹಣ ಪಡೆದು ವಾಹನ ಬಿಡುತ್ತಿದ್ದಾರೆ ಎಂದು ಆರೋಪಿಸಿ ಆ ಅಧಿಕಾರಿಗಳ ಮಲೆ ಪ್ರಕರಣ ದಾಖಲಿಸಿದ್ದರು ರವಿ ಚನ್ನಣ್ಣವರ್. ಇದು ಮಾಧ್ಯಮಗಳಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿತ್ತು.
ರವಿ ಚನ್ನಣ್ಣವರ್ ಇರಲಿಲ್ಲ
ಈ ಘಟನೆಯ ನಂತರ ಆರ್ಟಿಓ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ರವಿ ಅವರ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಪ್ರಕರಣದ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಬಳಿ ದೂರು ಓಯ್ದು, ಘಟನೆಯ ಬಗ್ಗೆ ಬೇರೆಯದೇ ರೀತಿ ಹೇಳಿದ್ದಾರೆ ಎನ್ನಲಾಗಿದೆ. ರವಿ ಚೆನ್ನಣ್ಣವರ್ ದಾಬಸಪೇಟೆ ಬಳಿ ಮಾರುವೇಷದ ಕಾರ್ಯಾಚರಣೆ ನಡೆಸಿದ್ದರು. ಆದರೆ, ಅತ್ತಿಬೆಲೆ ಬಳಿ ಇಬ್ಬರು ಆರ್ಟಿಓ ಅಧಿಕಾರಿಗಳು ಹಾಗೂ ಒಬ್ಬ ಹೋಂ ಗಾರ್ಡ್ ವಾಹನಗಳ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದರು ಎಂಬುವುದನ್ನು ತಿಳಿದು ಅವರನ್ನು ಬಂಧಿಸಲು ಚೆನ್ನಣ್ಣವರ್ ಅಲ್ಲಿನ ಡಿವೈಎಸ್ಪಿಗೆ ಸೂಚಿಸಿದ್ದರು. ಆದರೆ, ಚನ್ನಣ್ಣವರ್ ಅವರು ಸುಳ್ಳು ಹೇಳಿ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಚಿವರ ಗಮನಕ್ಕೆ ತರಬೇಕಿತ್ತು
ರವಿ ಚನ್ನಣ್ಣವರ್ ಅವರು ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಲಕ್ಷ್ಮಣ ಸವದಿ ಬಳಿ ದೂರು ನೀಡಿದ್ದಾರೆ. ಬಂಧಿಸುವುದಕ್ಕೂ ಮೊದಲು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಅಥವಾ ಸಚಿವರ ಗಮನಕ್ಕೆ ತರಬೇಕಿತ್ತು ಎಂದು ಸವದಿ ಬಳಿ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಗೆ ದೂರು
ಸಾರಿಗೆ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ದೂರಿಗೆ ಸ್ಪಂದಿಸಿರುವ ಡಿಸಿಎಂ ಲಕ್ಷ್ಮಣ ಸವದಿ, ಸಿಎಂ ಯಡಿಯೂರಪ್ಪ ಬಳಿ ಚನ್ನಣ್ಣವರ್ ವಿರುದ್ಧ ದೂರು ನೀಡಿದ್ದಾರೆ. ನಡೆದಿರುವ ಘಟನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಚನ್ನಣ್ಣವರ್ ಅವರನ್ನು ವರ್ಗಾಯಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.