ಉಚಿತ ಆರೋಗ್ಯ ವಿಮೆ ಮೂಲಕ ಮತದಾರರಿಗೆ ಡಿ.ಸಿ.ಗೌರಿಶಂಕರ್ ಆಮಿಷ
ಬೆಂಗಳೂರು,ಜು.4. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಅಡಿಯಲ್ಲಿ ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣೆಗೂ ಮೊದಲು ಹದಿನೇಳು ಸಾವಿರ ಮಕ್ಕಳಿಗೆ ಗುಂಪು ಆರೋಗ್ಯ ವಿಮೆ ಮಾಡಿಸಿದ್ದರು ಎಂದು ಅವರ ಎದುರಾಳಿ ಪರ ವಕೀಲರು ಹೈಕೋರ್ಟ್ ಗೆ ಹೇಳಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನಯ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಆಗ ವಿಚಾರಣೆ ವೇಳೆ ಸುರೇಶ್ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ಈ ಅಂಶವನ್ನು ವಿವರಿಸಿದರು.
'ಗೌರಿಶಂಕರ್ ಚುನಾವಣೆಯಲ್ಲಿ ನಡೆಸಿರುವ ಈ ಅಕ್ರಮವನ್ನು ಗೌರಿಶಂಕರ್ ಅವರ ಅಧಿಕೃತ ಫೇಸ್ಬುಕ್ ಅಕೌಂಟ್, ವಿಡಿಯೊ ತುಣುಕುಗಳು ನಮ್ಮ ಎಲ್ಲ ಆರೋಪಗಳಿಗೆ ಪುಷ್ಟಿ ಒದಗಿಸುತ್ತವೆ. ಚುನಾವಣೆಯಲ್ಲಿ ಅವರು ಎಸಗಿರುವ ಭ್ರಷ್ಟಚಾರ, ಅಕ್ರಮ, ಅನ್ಯಾಯಗಳೇ ಅವರು ಏನೆಂದು ಹೇಳುತ್ತಿವೆ. ಇದಕ್ಕೆ ಪ್ರತ್ಯಕ್ಷ, ಅಪ್ರತ್ಯಕ್ಷ ಸಾಕ್ಷಿಗಳೆಲ್ಲಾ ಲಭ್ಯ ಇವೆ. ಲಂಚ ನೀಡಿದ್ದು, ನಕಲಿ ಆರೋಗ್ಯ ವಿಮೆ ಮಾಡಿಸಿದ್ದು ಮುಕ್ತ ನ್ಯಾಯಸಮ್ಮತ ಚುನಾವಣೆಯ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿವೆ ಎಂಬುದನ್ನು ಮೇಲ್ನೋಟಕ್ಕೇ ಸಾಬೀತುಪಡಿಸುತ್ತವೆ' ಎಂದು ವಿವರಿಸಿದರು.
ಗೌರಿಶಂಕರ್, ಅವರ ಪಕ್ಷದ ಕಾರ್ಯಕರ್ತರು ಮತ್ತು ಅವರ ಕುಟುಂಬದ ಸದಸ್ಯರು ಮತದಾರರಿಗೆ ವಿಮೆಯ ನಕಲಿ ಕಾರ್ಡ್ಗಳನ್ನು ಹಂಚಿದ್ದರು. ಈ ಮೂಲಕ ನಿರಕ್ಷರ ಮತ್ತು ಮುಗ್ಧ ರೈತರನ್ನು ವಂಚಿಸಿ, ಅವರಿಗೆ ಆಸೆ ತೋರಿಸಿ ಚುನಾವಣೆಯಲ್ಲಿ ಗೆಲುವು ಪಡೆದರು. ಹೀಗಾಗಿ, ಇದು ಪ್ರಜಾ ಪ್ರತಿನಿಧಿ ಕಾಯ್ದೆ-1951ರ 123ರ ಉಲ್ಲಂಘನೆ. ಆದ್ದರಿಂದ, ಕಲಂ 100 ಮತ್ತು ಅನ್ವಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು' ಎಂದು ಕೋರಿದರು.
ಅರ್ಜಿದಾರರ ಮನವಿ:
2018ರ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ ಬಂದಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರ ಸುರೇಶ್ಗೌಡ ಕೋರಿದ್ದಾರೆ.