ರಾಜಕಾರಣಿಗಳಿಂದ 'ಸೌತ್ ಕೆನರಾ' ಹೆಸರಿಗೇ ಕಳಂಕ
ಈ ಹಿಂದೆ ಫರಂಗಿಪೇಟೆ, ಉಳ್ಳಾಲ, ಕಾಟಿಪಳ್ಳಕ್ಕೆ ಬಹುತೇಕ ಸೀಮಿತವಾಗಿದ್ದ ಕೋಮು ದ್ವೇಷ, ಈಗ ಇಡೀ ದಕ್ಷಿಣಕನ್ನಡ ಜಿಲ್ಲೆಗೆ ವ್ಯಾಪಿಸಿದೆ. ಇದಕ್ಕೆ ಬರೀ ಹಿಂದೂ-ಮುಸ್ಲಿಂ ದ್ವೇಷ ಮನಸ್ಸುಗಳು ಕಾರಣವೇ ಅಥವಾ ಇದರ ಹಿಂದೆ ದುಷ್ಟ ಮನಸ್ಸುಗಳಿವೆಯೇ? ಒಟ್ಟಿನಲ್ಲಿ "ಸೌತ್ ಕೆನರಾ" ಎನ್ನುವ ಹೆಸರು ದಿನದಿಂದ ದಿನಕ್ಕೆ ಕೋಮು ದಳ್ಳುರಿಗೆ ಆಹುತಿಯಾಗುತ್ತಿರುವುದಂತೂ ನಿಜ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗಿನ ಇತ್ತೀಚೆಗಿನ ಸಂದರ್ಶನದಲ್ಲಿ ಕರಾವಳಿಯಲ್ಲಿನ ಅಶಾಂತಿಗೆ ಕಾರಣ ಯಾರೆಂದು ಕೇಳಿದಾಗ, ಅದಕ್ಕೆ ಹಿಂದೂ ಸಂಘಟನೆಗಳೇ ಕಾರಣ, ಯಾಕೆಂದರೆ ಆ ಭಾಗದಲ್ಲಿ ಹಿಂದೂ ಸಂಘಟನೆಗಳು ಬಲಾಢ್ಯವಾಗಿದೆ ಎಂದು ಹೇಳಿದ್ದರು. ಆದರೆ, ಅಲ್ಲಿ ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಹಿಂದೂ ಯುವಕರ ಹೆಣಬಿದ್ದಿರುವುದು ವಿಪರ್ಯಾಸ.
ದೀಪಕ್ ರಾವ್ ಯಾರು? ಕೊಲೆ ಆಗಲು ಕಾರಣವೇನು?
ಬುಧವಾರ (ಜ 3) ಬರ್ಭರವಾಗಿ ಭಜರಂಗದಳದ ಮಾಜಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೈದ ಆರೋಪಿಗಳನ್ನು ಎರಡೇ ತಾಸಿನಲ್ಲಿ ಬಂಧಿಸಲು ಮಂಗಳೂರು ಪೊಲೀಸರು ಯಶಸ್ವಿಯಾದರು. ಬಂಧನಕ್ಕೆ ಸಹಕರಿಸಿದವರು ಕಾಟಿಪಳ್ಳದ ಮುಸ್ಲಿಮರು ಎನ್ನುವ ಮಂಗಳೂರು ಪೊಲೀಸ್ ವರಿಷ್ಠರ ಹೇಳಿಕೆ, ಬಹುತೇಕ ಹಿಂದೂಗಳಿಗಾಗಲಿ ಮುಸ್ಲಿಮರಿಗಾಗಲಿ 'ನಮಗೆ ದ್ವೇಷ ಬೇಡ' ಎನ್ನುವ ಸಂದೇಶವನ್ನು ಸಾರುವಂತಿತ್ತು.
ಏಳು ವರ್ಷದಿಂದ ದೀಪಕ್ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕ ಮಜೀದ್. ನಮ್ಮ ಜೊತೆ ಬ್ಯಾರಿ ಭಾಷೆಯನ್ನೇ ಮಾತನಾಡುತ್ತಿದ್ದ ಎಂದು ದೀಪಕ್ ಶವವನ್ನೂ ನೋಡಲಾಗದೇ ಬಿಕ್ಕಿಬಿಕ್ಕಿ ಅಳುತ್ತಿರುವ ಮಜೀದ್, ಇವನ ಹತ್ಯೆಗೈದವರು ನಾಶವಾಗಿ ಹೋಗಲಿ ಎಂದು ಶಾಪ ಹಾಕುತ್ತಿದ್ದಾರೆ. ಪ್ರಚೋದನೆಗೊಳಗಾಗುವ ಎರಡೂ ಕೋಮಿನ ಯುವಕರು, ಮಜೀದ್ ಮಾತನ್ನೊಮ್ಮೆ ಕೇಳುವುದು ಒಳ್ಳೆಯದು.
ಹಿಂದೂಗಳು ಸತ್ತರೆ ಬಿಜೆಪಿ, ಸಂಘ ಪರಿವಾರ, ಮುಸ್ಲಿಮರು ಸತ್ತರೆ ಕಾಂಗ್ರೆಸ್ ಅಥವಾ ಮುಸ್ಲಿಂ ಸಂಘಟನೆಗಳು ಸಂತ್ರಸ್ತ ಕುಟುಂಬದವರ ಪರ ಅಥವಾ ಸಮುದಾಯದ ಪರ ಪ್ರತಿಭಟನೆ ನಡೆಸುವ ಕಾಂಟ್ರ್ಯಾಕ್ಟ್ ಅನ್ನು ಏನಾದರೂ ವಹಿಸಿಕೊಂಡಿವೆಯಾ? ಇವರ ಉದ್ದೇಶಗಳು ಏನು, ನೊಂದ ಕುಟುಂಬಗಳಿಗೆ ಆಸರೆಯಾಗುವುದೋ ಅಥವಾ ಪರಿಸ್ಥಿತಿಗೆ ಇನ್ನಷ್ಟು ಬೆಂಕಿ ಹಚ್ಚುವುದೋ? ಮುಂದೆ ಓದಿ..
ಸುಳ್ಯ ಹೊರತು ಪಡಿಸಿ ಜಿಲ್ಲೆಯ ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ ಶಾಸಕರು
ಕರಾವಳಿ ಭಾಗದಲ್ಲಿ ನಡೆದಿರುವ ಇದುವರೆಗಿನ ಎಲ್ಲಾ ಹಿಂದೂಗಳ ಕೊಲೆಗಳು ಕಾಂಗ್ರೆಸ್ ಶಾಸಕರು ಇರುವ ಕಡೆಗಳಲ್ಲೇ ಆಗಿದೆ, ಇದಕ್ಕೆ ಕಾಂಗ್ರೆಸ್ ಸರಕಾರದ ಮುಸ್ಲಿಂ ಓಲೈಕೆಯೇ ಕಾರಣ ಎಂದು ಏನು ಹಿಂದೂ ಸಂಘಟನೆಗಳು ದೂರುತ್ತವೋ, ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಯುವಕರ ಕೊಲೆಯೂ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲೇ ಆಗಿರುವುದು. ಯಾಕೆಂದರೆ, ಸುಳ್ಯ ಹೊರತು ಪಡಿಸಿ ಜಿಲ್ಲೆಯ ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ ಶಾಸಕರೇ ಇರುವುದು.
ರಾಜಕಾರಣಿಗಳ ಉದ್ದೇಶವೇನು ಎನ್ನುವುದನ್ನು ಎರಡೂ ಕೋಮಿನವರು ತಿಳಿದುಕೊಳ್ಳಬೇಕು
ಹಿಂದೂ, ಮುಸ್ಲಿಂ ಸಮುದಾಯದ ಯಾರೇ ಹತ್ಯೆಯಾಗಲಿ, ಶವಯಾತ್ರೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯುವ ರಾಜಕಾರಣಿಗಳ ಉದ್ದೇಶವೇನು ಎನ್ನುವುದನ್ನು ಎರಡೂ ಕೋಮಿನವರು ಅರ್ಥ ಮಾಡಿಕೊಳ್ಲಬೇಕು. ಶರತ್ ಮಡಿವಾಳ ಶವಯಾತ್ರೆಯ ವೇಳೆ ನಡೆದದ್ದನ್ನು ದಕ್ಷಿಣಕನ್ನಡ ಜನತೆ ಇನ್ನೂ ಮರೆತಿಲ್ಲ. "ಊಟಕ್ಕೆ ಬರುವೆನು ಎಂದು ಹೇಳಿ ಶವವಾಗಿ ಬಂದ" ಎನ್ನುವ ದೀಪಕ್ ತಾಯಿಯ ನೋವಿನ ಮಾತನ್ನು ಕೇಳಿಯಾದರೂ ಎರಡೂ ಕೋಮಿನ ಯುವಕರು ಅರ್ಥ ಮಾಡಿಕೊಳ್ಳಲಿ.
ಊಟಕ್ಕೆಂದು ಬರುವವನು ಹೆಣವಾಗಿ ಬಂದ, ದೀಪಕ್ ತಾಯಿಯ ಕಣ್ಣೀರಿನ ಮಾತುಗಳು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಜತೆ ಬಿಜೆಪಿಗೆ ನಿಕಟ ಸಂಪರ್ಕ
ಕಾಂಗ್ರೆಸ್ ಕೊಲೆಗಡುಕರ ಸರಕಾರ ಎನ್ನುವ ಬಿಜೆಪಿ ಒಂದು ಕಡೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಜೊತೆ ಬಿಜೆಪಿಗೆ ನಿಕಟ ಸಂಪರ್ಕ ಇದೆ, ಕೇಂದ್ರ ಸರಕಾರ ಮೊದಲು ಪಿಎಫ್ಐ ಬ್ಯಾನ್ ಮಾಡಲಿ ನೋಡೋಣ ಎನ್ನುವ ರಾಜ್ಯ ಸರಕಾರ ಇನ್ನೊಂದೆಡೆ. ಇಂತಹ ಮುಖಂಡರಿಂದ ದಕ್ಷಿಣಕನ್ನಡದ ಜನತೆಗೆ ನೆಮ್ಮದಿ ಸಿಗಲು ಸಾಧ್ಯವೇ? ನೆಮ್ಮದಿಯಿಂದ ಇರಲು ಜನತೆ ಬಯಸಿದರೂ, ಇವರು ಬಿಡುತ್ತಾರೆಯೇ?
ಚುನಾವಣಾ ವರ್ಷದಲ್ಲಿ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿಲ್ಲದಿಲ್ಲ
ಧರ್ಮದ ವಿಚಾರದಲ್ಲಿ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಗಲಭೆಗಳು, ಚುನಾವಣಾ ವರ್ಷದಲ್ಲಿ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿಲ್ಲದಿಲ್ಲ. ಜನತೆ ಶಾಂತಿ ಬಯಸಿದರೂ, ರಾಜಕಾರಣಿಗಳಿಗೆ ಅದು ಬೇಕಾಗಿಲ್ಲ. ರಾಜಕೀಯ ಲಾಭಕ್ಕಾಗಿ ಏನೂ ಮಾಡಲು ಹೇಸುವುದಿಲ್ಲ ಎನ್ನುವುದು ದೀಪಕ್ ಸೂರಿಂಜೆ ಸಾವಿನ ಸುತ್ತ ಇವರು ನೀಡುತ್ತಿರುವ ಪ್ರಚೋದನಕಾರಿ ಮತ್ತು ಓಲೈಕೆಯ ಹೇಳಿಕೆಗಳೇ ಸಾಕ್ಷಿ.
ಸೌತ್ ಕೆನರಾ ಹೆಸರೂ ಹಸನಾಗುತ್ತದೆ
ಇಂದಿನ ಈ ಪರಿಸ್ಥಿತಿಗೆ ಹಿಂದೂ-ಮುಸ್ಲಿಮರನ್ನು ದೂರುವುದಕ್ಕಿಂತ ರಾಜಕಾರಣಿಗಳತ್ತ ಬೊಟ್ಟು ಮಾಡುವುದೇ ಸೂಕ್ತ. ಬಾಳಿ ಬದುಕಿ, ಕುಟುಂಬಕ್ಕೆ ಆಸರೆಯಾಗಬೇಕಾದ ಇತ್ತಂಡ ಕೋಮುಗಳ ಯುವಕರು, ರಾಜಕಾರಣಿಗಳ ಪ್ರಚೋದನಾಕಾರಿ ಮಾತಿಗೆ ಬೆಲೆಕೊಡದೇ ತಮ್ಮ ಬುದ್ದಿಯನ್ನು ತಮ್ಮಲ್ಲೇ ಇಟ್ಟುಕೊಂಡರೆ, ಸಹಬಾಳ್ವೆ, ಸಾಮರಸ್ಯ ತನ್ನಿಂದ ತಾನೇ ಮೂಡುತ್ತದೆ. ಸೌತ್ ಕೆನರಾ ಹೆಸರೂ ಹಸನಾಗುತ್ತದೆ.