ದಸರಾ ಹಬ್ಬ: 2,000 ವಿಶೇಷ KSRTC ಬಸ್ ನಿಯೋಜನೆ, ಟಿಕೆಟ್ ಬುಕ್ಕಿಂಗ್ನಲ್ಲಿ ಶೇ.5-10 ರಿಯಾಯಿತಿ!
ಬೆಂಗಳೂರು, ಸೆಪ್ಟಂಬರ್ 26: ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್ಆರ್ಟಿಸಿ) ಒಟ್ಟು ಸುಮಾರು 2,000ಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ನಿಯೋಜಿಸಲಾಗಿದೆ.
ಜನರಿಗೆ ತಮ್ಮ ದೂರದ ಊರುಗಳಿಗೆ ಹೋಗಲು ಮತ್ತೆ ಹಬ್ಬದ ಬಳಿಕ ಪುನಃ ಬರಲು ನೆರವಾಗುವಂತೆ ಈ ವಿಶೇಷ ಬಸ್ಗಳು ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಲಿವೆ. ಮೈಸೂರು ನಗರದಲ್ಲಿ ದಸರಾ ಹಬ್ಬ ವೀಕ್ಷಣೆಗೆ ಬರುವವರಿಗೂ ಪ್ರತ್ಯೇಕ ಬಸ್ಗಳನ್ನು ಬಿಡಲಾಗಿದೆ.
ದಸರಾ ಹಬ್ಬ: ಖಾಸಗಿ ಬಸ್ಗಳಿಂದ ಪ್ರಯಾಣಿಕರಿಗೆ ಶಾಕ್: ಎಷ್ಟೇಷ್ಟು ಹಣ ವಸೂಲಿ? ಇಲ್ಲಿದೆ ಮಾಹಿತಿ
ಹಾಲಿ ಇರುವ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಹಾಗೂ ಅಂಬಾರಿ ಕ್ಲಬ್ ಕ್ಲಾಸ್ ಸಾರಿಗೆ ಸೇವೆಗಳ ಜೊತೆಗೆ ವಿವಿಧ ಈ ವಿಶೇಷ ಬಸ್ಗಳು ಸಾರಿಗೆ ಸೇವೆ ನೀಡಲಿವೆ. ಅಕ್ಟೋಬರ್ 3ರಂದು ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡಲಿವೆ. ನಂತರ ಅಕ್ಟೋಬರ್ 7 ರಿಂದ 9ರವರೆಗೆ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಕಡೆಗಳಿಂದ ಬೆಂಗಳೂರಿಗೆ ಇದೇ ವಿಶೇಷ ವಾಹನ ಆಗಮಿಸಲಿವೆ.
ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ವಿಶೇಷ ಬಸ್ಗಳು ಸಂಪರ್ಕ ಕಲ್ಪಿಸಲಿವೆ. ಜತೆಗೆ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ ಸೇರಿದಂತೆ ನೆರೆರಾಜ್ಯಗಳ ಸ್ಥಳಗಳಿಗೂ ಸಂಚರಿಸಲಿವೆ.
ಮೈಸೂರಿಗೆ 450 ಪ್ರತ್ಯೇಕ ಬಸ್ ವ್ಯವಸ್ಥೆ
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕ 200 ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ. ಈ ಬಸ್ಗಳಲ್ಲಿ ಮೈಸೂರು ಸೇರಿ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ಸ್ಥಳ ಸೇರಿದಂತೆ ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 250 ಹೆಚ್ಚುವರಿ ಬಸ್ ಒದಗಿಸಿದ್ದು, ಒಟ್ಟು 450 ವಿಶೇಷ ಬಸ್ ನಿಯೋಜನೆಗೊಂಡಿವೆ.
ಶೇ.5-10 ರಿಯಾಯಿತಿ ಇದೆ
ಇ-ಟಿಕೇಟ್ ಬುಕಿಂಗ್ ಅವಕಾಶ ನೀಡಲಾಗಿದ್ದು, ವೆಬ್ಸೈಟ್ www ksrtc.karnataka.gov.in ಮೂಲಕ ಟಿಕೆಟ್ ಕಾಯ್ದಿರಿಸಬಹುದು. ನಿಗಮವು ಮೈಸೂರಿನಲ್ಲಿ ಎರಡು ಕಡೆ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯದ ಮಾಹಿತಿ ನೀಡಲು 'ಮಾಹಿತಿ ಕೇಂದ್ರ' ತೆರೆಯಲಿದೆ. ಜನರು ಕರ್ನಾಟಕ ಹಾಗೂ ನೆರೆರಾಜ್ಯಗಳಲ್ಲಿನ ಒಟ್ಟು 691 ಕೇಂದ್ರಗಳ ಮೂಲಕ ಆಸನ ಕಾಯ್ದಿರಿಸಬಹುದು.
ನಾಲ್ಕು ಅಥವಾ ನಾಲ್ಕಕ್ಕಿಂತ ಪ್ರಯಾಣಿಕರು ಒಟ್ಟಾಗಿ ಟಿಕೇಟ್ ಕಾಯ್ದಿರಿಸಿದರೆ ಶೇ.5 ರಷ್ಟು ರಿಯಾಯಿತಿ ಇದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್ನ್ನು ಒಟ್ಟಿಗೆ ಕಾಯ್ದಿರಿಸಿದರೆ ಅವರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ನಿಗದಮ ವೆಬ್ಸೈಟ್ಗೆ ಭೇಟಿ ನೀಡುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.