ಡ್ರೋಣ್ ಪ್ರತಾಪ್ ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿನಾ?
ಬೆಂಗಳೂರು, ಜು. 14: ಡ್ರೋಣ್ ಪ್ರತಾಪ್ ಆಯ್ತು, ಐಎಎಸ್ ಪಾಸಾಗಿದ್ದೇನೆಂದು ಹೇಳಿದ್ದ ಮಂಡ್ಯ ಮೂಲದ ಬಿಎಂಟಿಸಿ ಕಂಡಕ್ಟರ್ ಮಧು ಎನ್.ಸಿ. ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿನಾ? ಹೀಗೊಂದು ಚರ್ಚೆ ಮಂಡ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕೀ ಬಾತ್'ನಲ್ಲಿ ಕೆರೆ ಕಾಮೇಗೌಡರ ಸಾಧನೆಯನ್ನು ಹೊಗಳುವುದರೊಂದಿಗೆ ಮಂಡ್ಯ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿತ್ತು.
Recommended Video
ಅದೇ ಮಂಡ್ಯ ಜಿಲ್ಲೆಯ ಪ್ರತಾಪ್ ಎಂಬುವನು ಕಡಿಮೆ ವೆಚ್ಚದಲ್ಲಿ ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದ. ಹೇಳಿಕೊಂಡಿದ್ದ ಅಷ್ಟೇ ಅಲ್ಲ ಎಲ್ಲರನ್ನೂ ನಂಬಿಸಿದ್ದ. ಆ ಮೇಲೆ ಅವನು ಅಂತಹ ಯಾವುದೇ ಸಾಧನೆಯನ್ನು ಮಾಡಿಲ್ಲ ಎಂಬುದು ದೃಢಪಟ್ಟಿತ್ತು. ಇದೀಗ ಕೆರೆ ಕಾಮೇಗೌಡರ ಮೇಲೂ ಸ್ಥಳೀಯರು ಅಂತಹ ಆರೋಪ ಮಾಡುತ್ತಿದ್ದಾರೆ. ಅವರು ಯಾವುದೇ ಕೆರೆ, ಕಟ್ಟೆಯನ್ನು ಕಟ್ಟಿಲ್ಲ. ಅದೆಲ್ಲ ಕಟ್ಟುಕಥೆ ಎಂದು ಆರೋಪ ಮಾಡಿದ್ದಾರೆ. ಹಾಗಂತ ಕಾಮೇಗೌಡರು ಕೆರೆ ಕಟ್ಟಿದ್ದು ಸುಳ್ಳಾ ಎಂದು 'ಒನ್ಇಂಡಿಯಾ' ಪರಿಶೀಲಿಸಿದಾಗ ಸಿಕ್ಕ ಒಂದಿಷ್ಟು ವಿವರಗಳು ಹೀಗಿವೆ!
ಕೆರೆ ಕಾಮೇಗೌಡರು
ಸುಮಾರು 14 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕಾಮೇಗೌಡರು ಕುರಿ ಮೇಯಿಸಲು ಹೋದಾಗ ಬಹಳಷ್ಟು ಬಾಯಾರಿಕೆಯಾಗಿ ಕುಡಿಯಲು ಹನಿ ನೀರು ಸಿಕ್ಕಿರಲಿಲ್ಲವಂತೆ. ಮನೆಗೆ ಬಂದು ನೀರು ಕುಡಿದಿದ್ದ ಕಾಮೇಗೌಡರು, ನಾವು ಮನೆಗೆ ಬಂದು ನೀರು ಕುಡಿಯುತ್ತೇವೆ. ಆದರೆ ಪ್ರಾಣಿ-ಪಕ್ಷಿಗಳು ಏನು ಮಾಡಬೇಕು? ಎಂದು ಯೋಚಿಸಿ ಕುಂದೂರು ಬೆಟ್ಟದಲ್ಲಿ ಕೆರೆ ನಿರ್ಮಾಣ ಆರಂಭಿಸಿದ್ದರು. ಹೀಗೆ ಕೆರೆಗಳ ನಿರ್ಮಾಣ ಮುಂದುವರೆದು ಕುಂದೂರು ಬೆಟ್ಟದಲ್ಲಿಯೇ 7 ಕೆರೆಗಳ ನಿರ್ಮಾಣ ಮಾಡಿದ್ದೇನೆ ಎಂದು ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ಕಳೆದ 2018ರ ಜುಲೈ 22ರಂದು ಕೆರೆ ಕಾಮೇಗೌಡರು ಸಂದರ್ಶನ ಕೊಟ್ಟಿದ್ದರು.
ಕೆರೆ ಕಾಮೇಗೌಡರಿಗೆ ಅನಾರೋಗ್ಯ: ಸರ್ಕಾರಿ ಆಸ್ಪತ್ರೆಗೆ ದಾಖಲು
ಅದಾಗಿ ಎರಡು ವರ್ಷಗಳ ಬಳಿಕ ಇದೀಗ ಜುಲೈ 2020ರಲ್ಲಿ ಕಾಮೇಗೌಡರ ಸಾಧನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಹೊಗಳಿದ್ದಾರೆ. ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು.
ಕಾಮೇಗೌಡರು 2018ರಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ಗಮನಿಸಿದರೆ, ಜುಲೈ 2018 ರಿಂದ ಜುಲೈ 2020 ಅವಧಿಯ 2 ವರ್ಷಗಳಲ್ಲಿ ಕಾಮೇಗೌಡರು 9 ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಅಂದರೆ ಎರಡು ವರ್ಷಗಳಲ್ಲಿ 9 ಕೆರೆಗಳ ನಿರ್ಮಾಣ ನಿಜಕ್ಕೂ ಸಾಧನೆಯೆ ಸರಿ. ಆದರೆ ಸ್ವಗ್ರಾಮ ದಾಸನದೊಡ್ಡಿ ಗ್ರಾಮದ ಜನರು ಬೇರೆಯದ್ದೆ ಆರೋಪವನ್ನು ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ದೂರು
ದಾಸನದೊಡ್ಡಿ ಗ್ರಾಮದ ಜನರು ಕಾಮೇಗೌಡರ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಕಾಮೇಗೌಡರು ಸ್ವತಃ ಕೆರೆ-ಕಟ್ಟೆಗಳನ್ನ ಕಟ್ಟಿಸಿದ್ದು, ಗಿಡಗಳನ್ನ ನೆಟ್ಟು ಪೋಷಿಸಿದ್ದೆಲ್ಲಾ ಸುಳ್ಳು. ಯಾರೋ ಕಟ್ಟಿದ ಕೆರೆ-ಕಟ್ಟೆಗಳನ್ನ ನಾನು ಕಟ್ಟಿದ್ದು ಅಂತಾರೆ. 2 ಸಾವಿರ ಸಸಿಗಳನ್ನು ನೆಟ್ಟಿರುವುದೂ ಸುಳ್ಳು. ಸರ್ಕಾರಿ ಜಾಗವನ್ನು ತನ್ನದೇ ಜಾಗ ಅಂತಾ ಹೇಳುತ್ತಾರೆ. ಊರಿನ ಇತರರಿಗೆ ಅಲ್ಲಿಗೆ ಪ್ರವೇಶವನ್ನೂ ಕೊಡುವುದಿಲ್ಲ. ಹೀಗಾಗಿ ಸ್ಥಳೀಯ ರೈತರೊಂದಿಗಿನ ವ್ಯಾಜ್ಯಗಳು ಸಮೀಪದ ಬೆಳಕವಾಡಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲೂ ಕಾರಣವಾಗಿವೆ ಎಂಬ ಆರೋಪಗಳನ್ನು ಸ್ಥಳೀಯರು ಮಾಡಿದ್ದಾರೆ.
ಮರು ಪರಿಶೀಲಿಸಿ
ಕೆರೆ ಕಾಮೇಗೌಡರಿಗೆ ಸರ್ಕಾರ ಮತ್ತು ಸಂಘಟನೆಗಳು ನೀಡಿರುವ ಬಿರುದು, ಪ್ರಶಸ್ತಿ, ಸನ್ಮಾನಗಳನ್ನು ಮರು ಪರಿಶೀಲಿಸಿ ಎಂದು ದಾಸನದೊಡ್ಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಮಂಡ್ಯದ ಕೆರೆ ಕಾಮೇಗೌಡರಿಗೆ ಸಿಕ್ಕಿತು ಉಚಿತ ಬಸ್ ಪಾಸ್
ಕಾಮೇಗೌಡರು ಮಹಿಳೆಯರು, ಮಕ್ಕಳಿಗೆ ಮರ್ಯಾದೆ ಕೊಡಲ್ಲ. ಅನಾಗರಿಕರಂತೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಿಂದೆ ಅವರ ತಾಯಿ ಮೃತಪಟ್ಟಾಗ ಸ್ವಂತ ತಾಯಿಯ ಮುಖವನ್ನೂ ನೋಡಲೂ ಬಾರದ ಕಾಮೇಗೌಡ, ಊರಿಗೆ ಹೇಗೆ ಉಪಕಾರಿ ಯಾಗುತ್ತಾರೆ? ಎಂದು ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ದೂರಿನಲ್ಲಿ ಪ್ರಶ್ನಿಸಿದ್ದಾರೆ. ಜೊತೆಗೆ ದನ-ಕರುಗಳು ಕೆರೆಯ ನೀರನ್ನು ಕುಡಿದರೂ ಕೂಡ ಕಾಮೇಗೌಡರು ನಿಂದಿಸುತ್ತಾರೆ ಎಂದಿದ್ದಾರೆ.
ಗ್ರಾಮಸ್ಥರಿಗೆ ಕಿರುಕುಳ
ಸರ್ಕಾರ ಅವನೊಂದಿಗೆ ಇದೆ ಅಂತಾ ಗ್ರಾಮಸ್ಥರಿಗೆ ನಿತ್ಯ ಕಿರುಕುಳ ನೀಡುತ್ತಾರೆ. ನಿತ್ಯ ಒಂದಲ್ಲ, ಒಂದು ಆರೋಪ ಮಾಡಿ ಅಧಿಕಾರಿಗಳಿಗೆ ದೂರು ಕೊಡುತ್ತಾರೆ. ಈಗ ಸರ್ಕಾರದ ಅಧಿಕಾರಿಗಳೇ ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಇಡೀ ಗ್ರಾಮಸ್ಥರನ್ನು ವೈಯಕ್ತಿಕವಾಗಿ ಅಭಿಪ್ರಾಯ ಪಡೆಯಿರಿ. ಆ ಬಳಿಕ ಆತ ನಿಜವಾಗಿಯೂ ಸಮಾಜ ಸೇವಕ ಎಂಬುದು ಕಂಡು ಬಂದರೆ ನಮ್ಮ ಅಭ್ಯಂತರವಿಲ್ಲ, ವಿರೋಧವೂ ಇಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಇನ್ನು ಕಾಮೇಗೌಡರು ಕೆರೆ ನಿರ್ಮಾಣ ಮಾಡಿರುವ ಅಸಲಿತನದ ಬಗ್ಗೆಯೂ ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿಯೂ ವ್ಯಾಪಕ ಚರ್ಚೆಯಾಗುತ್ತಿದೆ.
ಮನ್ ಕೀ ಬಾತ್; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ
ಕಾಮೇಗೌಡರು ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಹಾಗೂ ಮರಳು ಸಂಗ್ರಹಣೆ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಮೂಲಕ ಸಾಮಾಜಿಕ ಜಾಲ ತಾಣದಲ್ಲೂ ಕಾಮೇಗೌಡರ ಸಾಧನೆ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.
ಹೆಚ್ಚಿನ ಮಾಹಿತಿ ಇಲ್ಲ
ಈ ಮಧ್ಯೆ ಕಾಮೇಗೌಡರು ನಿರ್ಮಾಣ ಮಾಡಿದ್ದಾರೆ ಎನ್ನಲಾದ ಕೆರೆಗಳ ಬಗ್ಗೆ ಸಂಬಂಧಿಸಿದ ಮಳವಳ್ಳಿ ತಾಲೂಕು ವ್ಯಾಪ್ತಿಯ ಪಂಡಿತಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿಯು ಕೆರೆಗಳ ಬಗ್ಗೆ ಠರಾವು ಮಾಡಿದ್ದು ಅಥವಾ ಬೇರೆ ಯಾವುದೇ ನಡಾವಳಿ ಮೂಲಕ ಕಾಮೇಗೌಡರು ಕೆರೆ ನಿರ್ಮಾಣ ಮಾಡಿದ್ದ ದಾಖಲೆಗಳು ಲಭ್ಯವಾಗಿಲ್ಲ.
ಮರಳು ಮಾರಾಟದ ಆರೋಪ
ಈ ಎಲ್ಲ ಆರೋಪಗಳ ಜೊತೆಗೆ ಕಾಮೇಗೌಡರು ಅಕ್ರಮವಾಗಿ ಮರಳನ್ನು ಮಾರಾಟ ಮಾಡುತ್ತಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೊ ತುಣುಕುಗಳನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ವಿಡಿಯೊ ಕ್ಲಿಪ್ಪಿಂಗ್ಗಳಲ್ಲಿ ಕಾಮೇಗೌಡರು ಅಶ್ಲೀಲವಾಗಿ ಮಾತನಾಡುತ್ತಾ ಮರಳು ಮಾರುತ್ತೇನೆ ನೀನ್ಯಾರು ಕೇಳುವುದಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ಕಾಮೇಗೌಡರ ಮನೆಯ ಸಮೀಪ ಮರಳು ಸಂಗ್ರಹಣೆ ಮಾಡಿರುವುದನ್ನು ಸ್ಥಳೀಯರು ಚಿತ್ರೀಕರಣ ಮಾಡಿದ್ದಾರೆ. ಅದೆಲ್ಲದರ ಬಗ್ಗೆ ತನಿಖೆ ನಡೆಸಿ ಎಂಬುದು ಗ್ರಾಮಸ್ಥರ ಒತ್ತಾಯ.
ಜಿಲ್ಲಾಧಿಕಾರಿಗಳ ಸ್ಪಷ್ಟನೆ
ಗ್ರಾಮಸ್ಥರ ಮನವಿ ರೂಪದ ದೂರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಊರಿನ ಜನರು ಹಾಗೂ ಕಾಮೇಗೌಡರ ಮಧ್ಯೆ ಮನಸ್ತಾಪ ಇರುವುದು ನಿಜ. ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಸೂಚಿಸಿದ್ದೇನೆ. ಮಸ್ತಾಪದ ಕಾರಣಕ್ಕೆ ಕಾಮೇಗೌಡರು ಕೆರೆಗಳನ್ನು ಕಟ್ಟಿಸಿಯೇ ಇಲ್ಲ ಎಂದು ಹೇಳಬಾರದು. ಅವರು ಕಟ್ಟಿಸಿದ ಕೆರೆಗಳನ್ನು ಪರಿಶೀಲನೆ ಮಾಡಿದ ನಂತವರೇ ನಾವಯ ಸರ್ಕಾರಕ್ಕೆ ವರದಿಯನ್ನು ನೀಡಿದ್ದೇವೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇಂದು ಗ್ರಾಮಸ್ಥರೊಂದಿಗೆ ಸಭೆ
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರ ಸೂಚನೆಯಂತೆ ಇಂದು ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ದಾಸನದೊಡ್ಡಿ ಗ್ರಾಮದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಸಭೆಯನ್ನು ಮಾಡುತ್ತಿದ್ದಾರೆ.