ಬೈಕ್ ಹಿಂದಿಕ್ಕಿದ್ದಕ್ಕೆ ಮರಕ್ಕೆ ಕಟ್ಟಿ ಥಳಿಸಿದ ಸವರ್ಣೀಯರು: ಕೋಲಾರದಲ್ಲಿ ದಲಿತ ಯುವಕ ಆತ್ಮಹತ್ಯೆ
ಬೆಂಗಳೂರು, ಡಿಸೆಂಬರ್ 02: ಬೈಕ್ ಹಿಂದಿಕ್ಕಿದ್ದಾನೆ ಎಂಬ ಕಾರಣಕ್ಕೆ ದಲಿತ ಯುವಕನೊಬ್ಬನನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದ ಯುವಕರು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಪೆತ್ತಾಂಡ್ಲಹಳ್ಳಿಯಲ್ಲಿ ನಡೆದಿದೆ. ದುರಂತವೆಂದರೆ, ಅವಮಾನಕ್ಕೊಳಗಾದ ಪರಿಶಿಷ್ಟ ಜಾತಿಗೆ ಸೇರಿದ ಯುವಕ ಬೇವ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪಿಗಳು ದಲಿತ ಯುವಕನನ್ನು ಥಳಿಸಿದ್ದಲ್ಲದೇ, ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..
ಚಿತ್ರದುರ್ಗದಲ್ಲಿ ಸಿಎಂ ಬೆಂಗಾವಲು ವಾಹನ-ಬೈಕ್ ಡಿಕ್ಕಿ: ಇಬ್ಬರ ಸ್ಥಿತಿ ಗಂಭೀರ
ಆತ್ಮಹತ್ಯೆಗೆ ಶರಣಾದ ಯುವಕ ಬೇವಹಳ್ಳಿಯ ಉದಯ್ ಕಿರಣ್ ಎಂದು ತಿಳಿದುಬಂದಿದೆ. ಆತನನ್ನು ಮರಕ್ಕೆ ಕಟ್ಟಿ ಥಳಿಸಿದ ಆರೋಪಿಗಳನ್ನು ಸವರ್ಣೀಯ ಜಾತಿಗೆ (ಒಕ್ಕಲಿಗ ಸಮುದಾಯ) ಸೇರಿದವರೆಂದು ಗೊತ್ತಾಗಿದೆ. ಆರೋಪಿಗಳಾದ ಗೋಪಾಲಕೃಷ್ಣಪ್ಪ, ಶಿವರಾಜ್, ರಾಜು ಹಾಗೂ ಮುನಿವೆಂಕಟಪ್ಪ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಉದಯ್ ಕಿರಣ್ ಸೋದರ ಮಾವ ಬಿ.ಎಚ್.ನಾಗರಾಜ್ ಎಂಬುವವರು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಅವರಿಗೆ ತೀವ್ರ ಶೋಧ ನಡೆಸಲಾಗುತ್ತಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳನ್ನು ಅತಿ ಶೀಘ್ರದಲ್ಲೇ ಬಂಧಿಸಲಾಗುವುದು' ಎಂದು ನಂಗಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.
ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣ
ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ಆಡಳಿತದಲ್ಲಿ ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ಯಾವೊಬ್ಬ ನಾಯಕನೂ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ' ಎಂದು ಪ್ರಶ್ನಿಸಿದೆ.