ಕರ್ನಾಟಕ ಚುನಾವಣೆ ಮೇಲೂ ಪ್ರಭಾವ ಬೀರೀತೆ ಉತ್ತರದ ದಲಿತ ಪ್ರತಿಭಟನೆ?!
ಬೆಂಗಳೂರು, ಏಪ್ರಿಲ್ 03: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ದಲಿತ ಸಂಘಟನೆಗಳ ಪ್ರತಿಭಟನೆ ಕರ್ನಾಟಕದ ಮೇಲೂ ಪ್ರಭಾವ ಬೀರುತ್ತದೆಯಾ? ಚುನಾವಣೆಯನ್ನು ಎದುರು ನೋಡುತ್ತಿರುವ ಹೊತ್ತಲ್ಲಿ ಈ ದಲಿತ ಪ್ರತಿಭಟನೆ ಕಾಂಗ್ರೆಸ್ ಮಟ್ಟಿಗಂತೂ 'ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಗಿದೆ.' ಮೊದಲಿನಿಂದಲೂ ಅಹಿಂದ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಕೇವಲ ಉತ್ತರ ಭಾರತಕ್ಕಷ್ಟೇ ಸೀಮಿತವಾಗುವುದಕ್ಕೆ ಬಿಟ್ಟು ಬಿಟ್ಟಾರೆಯೇ..? ಕರ್ನಾಟಕದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಗೆ ದಲಿತರ ಕಿಚ್ಚಿಗೆ ತುಪ್ಪ ಸುರಿಯ ಚಾಕಚಕ್ಯತೆ ತಿಳಿಯದಿರುವುದೇ..?!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಕರ್ನಾಟಕದಲ್ಲಿ ಮೇ.12 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಇಡೀ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಅತ್ಯಂತ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದಾ ಎಂಬುದು ತಿಳಿಯಬೇಕಾದರೆ ಮೇ.15 ರ ಫಲಿತಾಂಶಕ್ಕೆ ಕಾಯಬೇಕು!
ಜಾತಿ ಲೆಕ್ಕಾಚಾರದಲ್ಲಿ ಈ ಬಾರಿಯ ಕರ್ನಾಟಕ ಚುನಾವಣೆ ಏಕೆ ಭಿನ್ನ?
ಆದರೆ ಅದಕ್ಕೂ ಮುನ್ನ ಚುನಾವಣೆಗೆ ಸಜ್ಜಾಗುವುದಕ್ಕೆ ರಾಜಕೀಯ ಪಕ್ಷಗಳು ಯಾವೆಲ್ಲ ರೀತಿಯಲ್ಲಿ ಸಜ್ಜಾಗಿವೆ..? ಇತ್ತ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಕೂಗನ್ನು ಸಹ ಕೇಂದ್ರದ ಅಂಗಳದಲ್ಲಿ ಬಿಟ್ಟು ಹೊಸ ದಾಳ ಹಾಕಿರುವ ಕಾಂಗ್ರೆಸ್ಸಿಗೆ ಈ ದಲಿತ ಪ್ರತಿಭಟನೆ ಮತ್ತೊಂದು ದಾಳವಾದರೆ ಅಚ್ಚರಿಯೇನಿಲ್ಲ.
ದಲಿತರನ್ನು ಎತ್ತಿಕಟ್ಟುವ ಹುನ್ನಾರ?
ಪರಿಶಿಷ್ಟ ಜಾತಿ/ಪಂಗಡ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ, ಉತ್ತರ ಭಾರತದ ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಜಾರ್ಖಂಡ್, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಆರಂಭವಾದ ಪ್ರತಿಭಟನೆ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ತಿರುಗಿದೆ! ಈ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರದ ಮೇಲೆ ದಲಿತರು ಗೂಬೆ ಕೂರಿಸುತ್ತಿರುವ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಎನ್ ಡಿಎ ಯ ಕೆಲವು ಸದಸ್ಯರು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದಲಿತರು ತಿರುಗಿ ಬಿದ್ದರೆ ಅದು ರಾಜ್ಯದಲ್ಲಿರುವ ದಲಿತರ ಮೇಲೂ ಪ್ರಭಾವ ಬೀರುವುದು ಅಚ್ಚರಿಯೇನಿಲ್ಲ. ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಅಲೆ ಎದ್ದರೆ ಅದರಿಂದ ರಾಜ್ಯದಲ್ಲೂ ದಲಿತರು ಬಿಜೆಪಿ ವಿರುದ್ಧ ತಿರುಗಿ ಬೀಳಬಹುದು.
ಏ.2 ರ ಭಾರತ ಬಂದ್: ತಿಳಿಯಬೇಕಾದ 10 ಸಂಗತಿ
ಬಿಜೆಪಿ ವಿರುದ್ಧ ಮಹಾಮೈತ್ರಿ!
ಈ ಪ್ರತಿಭಟನೆಗೆ ಕಾಂಗ್ರೆಸ್ ಮಾತ್ರವಲ್ಲ, ಆರ್ ಜೆಡಿ, ಬಿಎಸ್ಪಿ, ಎಸ್ಪಿ ಮುಂತಾದ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಒಟ್ಟಿನಲ್ಲಿ ಭಾರತ್ ಬಂದ್ ಅನ್ನು ಬೆಂಬಲಿಸುವ ಮಹಾಮೈತ್ರಿಯೊಂದು ಏರ್ಪಟ್ಟಂತಿದೆ. ಸುಮಾರು 10 ಜನರ ಜೀವ ಹಾನಿ, ಸಾವಿರಾರು ಕೋಟಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಎಲ್ಲ ಅವಾಂತರಗಳನ್ನೂ ಬದಿಗಿಟ್ಟು ಈ ಉರಿವ ಹಿಂಸೆಯ ಧಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿವೆ ವಿರೋಧ ಪಕ್ಷಗಳು! ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸುವ ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ. ಇದೇ ಪ್ರಯತ್ನವನ್ನು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೂ ಆರಂಭಿಸಿದರೆ ಅದು ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟುಕೊಡುವುದು ಖಂಡಿತ.
ಹಳೇ ಘಟನೆಗಳ ಮೆಲುಕು
ಸಂವಿಧಾನದಲ್ಲಿ ಕಾಲಕಾಲಕ್ಕೆ ತಿದ್ದುಪಡಿ ತರಬೇಕು ಎಂಬ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಮರೆತಿರುವ ದಲಿತರಿಗೆ ಈ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ನೆನಪಿಸಿದರೂ ಅಚ್ಚರಿಯಿಲ್ಲ! ಈ ಮೂಲಕ ದಲಿತ ನಾಯಕ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯದಲ್ಲಿ ಕೆಲವೇ ದಿನಗಳ ಹಿಂದೆ ಎದ್ದಿದ್ದ ಕೂಗು ಮತ್ತೆ ಪ್ರತಿಧ್ವನಿಸಬಹುದು. ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಮತ್ತೆ ವೇದಿಕೆಗೆ ಬರಬಹುದು. ಈ ಎಲ್ಲ ಪ್ರಕರಣಗಳೊಂದಿಗೆ ಉತ್ತರ ಭಾರತದಲ್ಲಿ ಎದ್ದಿರುವ ದಲಿತ ಕಿಚ್ಚಿಗೆ ತುಪ್ಪ ಸುರಿವ ವ್ಯವಸ್ಥಿತ ತಂತ್ರವನ್ನು ಕಾಂಗ್ರೆಸ್ ಮಾಡಬಹುದು.
ಭಾಷಣಕ್ಕೂ ಸಿಕ್ಕಿತು ಹೊಸ ಟಾಪಿಕ್!
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪದೇ ಪದೇ ಅಪನಗದೀಕರಣ, ಜಿಎಸ್ಟಿ ಎಂದು ಅದದೇ ಹಳೇ ವಿಷಯಗಳನ್ನಿಟ್ಟುಕೊಂಡು ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ ಹೊಸ ಟಾಪಿಕ್ ಸಿಕ್ಕಂತಾಗಿದೆ. ದಲಿತ ಮತಕ್ಕೋಸ್ಕರ ಈ ಪ್ರತಿಭಟನೆಯ ವಿಷಯವನ್ನು ಪ್ರತಿ ಪ್ರಚಾರ ಸಭೆಯಲ್ಲೂ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರೂ ಪುನರುಚ್ಚರಿಸುತ್ತಿದ್ದರೆ ಅಚ್ಚರಿಯೇನಿಲ್ಲ. ಕರ್ನಾಟಕದಲ್ಲಿ ಸುಮಾರು 18 ಪ್ರತಿಶತ ದಲಿತ ಜನಸಂಖ್ಯೆ ಇರುವುದರಿಂದ ಇದು ಚುನಾವಣೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳು ನಿಚ್ಛಳವಾಗಿವೆ.
ಏನಿದು ದಲಿತ ಪ್ರತಿಭಟನೆ?
ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯ್ದೆಯನ್ವಯ ಎಸ್ಸಿ ಮತ್ತು ಎಸ್ಟಿ ಪಂಗಡಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯದ ದೂರು ಬಂದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಈ ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್, ಯಾವುದೇ ದೂರು ಬಂದರೂ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು. ಮತ್ತು ಆರೋಪಿಗೆ ಜಾಮೀನು ಪಡೆಯುವುದಕ್ಕೂ ಅವಕಾಶ ನೀಡಿತ್ತು. ಈ ಕ್ರಮದಿಂದ ದಲಿತರ ಹಕ್ಕನ್ನು ಕಸಿದಂತಾಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ.