ಶೋಭಾ ಕರಂದ್ಲಾಜೆ ಮೇಲೆ ಮುಗಿಬಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬು
ಬೆಂಗಳೂರು, ಜುಲೈ 13: 'ಶೋಭಾ ಕರಂದ್ಲಾಜೆ ಅವರಿಗಿನ್ನೂ ಮದುವೆಯಾಗಿಲ್ಲ. ಮದುವೆಯಾಗಲು ಇನ್ನೂ ಅವಕಾಶವಿದೆ. ಬೇಕಾದರೆ ಅವರು ಮದುವೆಯಾಗಲಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈ
ಈ ಹಿಂದೆ ಶೋಭಾ ಕರಂದ್ಲಾಜೆ, "ಕೆಪಿಸಿಸಿ ಕಾರ್ಯಾಧ್ಯಕ್ಷರೇನು ದಲಿತರ ಮನೆಯ ಹೆಣ್ಣು ತಂದಿದ್ದಾರೆಯೇ. ಅವರು ಯಾರನ್ನು ಮದುವೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು," ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ದಿನೇಶ್ ಗುಂಡೂರಾವ್ ಬೇಕಿದ್ದರೆ ಅವರೇ ದಲಿತರನ್ನು ಮದುವೆಯಾಗಲಿ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ಮದುವೆಯಾಗಿದ್ದು 1994ರಲ್ಲಿ
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, "ನನ್ನ ಮದುವೆ ನಡೆದಿದ್ದು 1994ರಲ್ಲಿ. ಮದುವೆ ನಡೆದು ಇವತ್ತಿಗೆ ತುಂಬಾ ವರ್ಷಗಳೇ ಕಳೆದಿದೆ. ಈಗ ಶೋಭಾ ಕರಂದ್ಲಾಜೆ ಯಾಕೆ ನನ್ನ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ," ಎಂದಿದ್ದಾರೆ.
ದಲಿತರನ್ನು ಇಷ್ಟಪಟ್ಟಿದ್ದರೆ ಅವರನ್ನೇ ಆಗುತ್ತಿದ್ದೆ
ಶೋಭಾ ಕರಂದ್ಲಾಜೆಯವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ದಿನೇಶ್, "ನಾನು ಇವತ್ತು ಯಾರನ್ನು ಮದುವೆಯಾಗಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ನಾನು ನನ್ನ ಕುಟುಂಬದ ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿದ್ದೇನೆ. ನಾನು ಅವತ್ತು ಒಂದೊಮ್ಮೆ ದಲಿತ ಹುಡುಗಿಯನ್ನೇ ಇಷ್ಟಪಟ್ಟಿದ್ದರೆ ಆಕೆಯನ್ನೇ ಮದುವೆಯಾಗುತ್ತಿದ್ದೆ. ನನ್ನ ಮನೆಯಲ್ಲಿ ನನಗೆ ಯಾವುದೇ ಕಟ್ಟುಪಾಡುಗಳು ಇರಲಿಲ್ಲ," ಎಂದಿದ್ದಾರೆ.
ಶೋಭಾಗೆ ದಿನೇಶ್ ಪತ್ನಿ ತಿರುಗೇಟು
ಶೋಭಾ ಕರಂದ್ಲಾಜೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಶೇರ್ ಮಾಡಿರುವ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ".... ಇದರಲ್ಲಿ ಮುಚ್ಚು ಮರೆ ಏನಿಲ್ಲ. ನಾನು ಹುಟ್ಟಿದ್ದು ಮುಸ್ಲಿಂ ಧರ್ಮದಲ್ಲಿ, ನನ್ನ ಪತಿ ದಿನೇಶ್ ಗುಂಡೂರಾವ್ ಓರ್ವ ಬ್ರಾಹ್ಮಣ. ಕಳೆದ ಎರಡು ದಶಕಗಳಿಂದ ಸುಂದರ ವೈವಾಹಿಕ ಜೀವನ ನಡೆಸುತ್ತಿರುವ ನಮ್ಮ ತಲೆಯಲ್ಲಿ ಎಂದೂ ಧರ್ಮದ ವಿಚಾರ ನುಸುಳಿಲ್ಲ. ನಾವು ಯಾರೂ ಮತಾಂತರವೂ ಆಗದೆ ಸಮತೋಲನದ ಜೀವನ ನಡೆಸುತ್ತಿದ್ದೇವೆ. ಎಲ್ಲಾ ಧರ್ಮಗಳನ್ನೂ ನಾವು ಗೌರಿವಿಸುತ್ತೇವೆ. ನಾವು ದೇಶದ ವಿವಿಧತೆಯಲ್ಲಿ ಏಕತೆಯನ್ನು ಬೆಂಬಲಿಸುತ್ತೇವೆ," ಎಂದು ಬರೆದುಕೊಂಡಿದ್ದಾರೆ.
ಕೀಳುಮಟ್ಟದ ರಾಜಕೀಯಕ್ಕಾಗಿ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ
"ನಾನೊಬ್ಬಳು ಗೃಹಿಣಿ, ಎರಡು ಹೆಣ್ಣು ಮಕ್ಕಳ ತಾಯಿಯಾಗಿ, ಕೀಳುಮಟ್ಟದ ರಾಜಕೀಯ ಲಾಭಕ್ಕಾಗಿ ಶೋಭಾ ನಮ್ಮ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬುದಾಗಿ ಹೇಳುತ್ತೇನೆ. ಸಮಾಜದಲ್ಲಿ ಕೋಮು ಸೌಹಾರ್ದ ಕೆಡಿಸುವ ಉದ್ದೇಶದಿಂದ ಅನಗತ್ಯ ಸಂಬಂಧವೇ ಇಲ್ಲದ ವಿಚಾರಕ್ಕೆ ನಮ್ಮ ಕುಟುಂಬದ ವಿಚಾರವನ್ನು ಎಳೆದು ತಂದಿದ್ದಾರೆ. ಶೋಭಾ ಕರಂದ್ಲಾಜೆ ಈ ಮಟ್ಟಕ್ಕೆ ಇಳಿದಿದ್ದು ವಿಷಾದನೀಯ," ಎಂದು ಟೀಕಿಸಿದ್ದಾರೆ.
ಆಗಿದ್ದೇನು?
ದಲಿತರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಊಟ ಮಾಡುವುದನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಬಿಜೆಪಿಯವರಿಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ದಲಿತರ ಜತೆ ಸಂಬಂಧ ಬೆಳೆಸಿ. ನಿಮ್ಮ ಮಕ್ಕಳಿಗೆ ದಲಿತರನ್ನು ಮದುವೆ ಮಾಡಿ," ಎಂದು ಹೇಳಿದ್ದರು.
ಪ್ರತಿಕ್ರಿಯಿಸಲು ಹೋಗಿ ಇಕ್ಕಟ್ಟಿನಲ್ಲಿ ಸಿಕ್ಕಿದ ಶೋಭಾ
ಸಿದ್ದರಾಮಯ್ಯನವರಿಗೆ ಗಾಂಧಿನಗರದಲ್ಲಿ ಬುಧವಾರ ನಡೆದ ಪಕ್ಷದ 'ವಿಸ್ತಾರಕ್' ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ , 'ನಮ್ಮ ಪಕ್ಷದವರಿಗೆ ಹೇಳುವ ಮೊದಲು ಸಿದ್ದರಾಮಯ್ಯವರು ಅವರ ಪಕ್ಷದ ಅಧ್ಯಕ್ಷ, ಕಾರ್ಯಾಧ್ಯಕ್ಷರು ಯಾರ ಮನೆಯಿಂದ ಹೆಣ್ಣು ತಂದಿದ್ದಾರೆ ಎಂದು ಹೇಳಲಿ' ಎಂದಿದ್ದರು.
ಇದೀಗ ದಿನೇಶ್ ಗಗುಂಡೂರಾವ್ ಹಾಗೂ ಅವರ ಪತ್ನಿ ಒಟ್ಟಾಗಿ ಶೋಭಾ ವಿರುದ್ಧ ತಿರುಗಿ ಬಿದ್ದಿದ್ದಾರೆ.