ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನಳಿನ್ ಹೆಗಲಿಗೆ, ಇನ್ನೆರಡು ದಿನದಲ್ಲಿ ಅಧಿಕೃತ!
ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು? ಎಂಬ ಪ್ರಶ್ನೆಗೆ ಬಿಜೆಪಿಯೊಳಗೆ ಉತ್ತರ ಸಿಕ್ಕಿದೆ.
ರಾಜ್ಯ ಬಿಜೆಪಿಯಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಬಹುತೇಕ ಮುಗಿದಂತೆ ಇದೆ. ಏಕೆಂದರೆ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಶ್ರೀರಾಮುಲು ಹೀಗೆ ನಾನಾ ಹೆಸರು ಸುತ್ತಾಡಿ, ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಬಹುತೇಕ ಖಚಿತ ಎಂಬ ಸುದ್ದಿ ಬರುತ್ತಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ ರವಿ ಆಯ್ಕೆ ಖಚಿತ!
ಮೂಲಗಳ ಪ್ರಕಾರ, ಅರವಿಂದ ಲಿಂಬಾವಳಿ ಅವರು ದೆಹಲಿಗೆ ಭೇಟಿ ನೀಡಿ, ತಮಗಾದ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಪ್ರಯೋಜನ ಆಗಿಲ್ಲ. ಆ ಕಾರಣಕ್ಕೆ ಅವರಿಗೆ ಸಚಿವ ಸ್ಥಾನವೂ ದೊರೆಯದೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಪರಿಗಣನೆ ಮಾಡಿಲ್ಲ ಎನ್ನಲಾಗುತ್ತಿದೆ.
ಇನ್ನು ಸಿ. ಟಿ. ರವಿ ಹಾಗೂ ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಕರಾವಳಿ ಭಾಗದವರಿಗೆ ಪ್ರಾಶಸ್ತ್ಯ ನೀಡಬೇಕು ಎಂಬ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನೆರಡು ದಿನದಲ್ಲಿ ಅಧಿಕೃತ ಘೋಷಣೆ ಆಗಲಿದೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ
ಹಾಗೆ ನೋಡಿದರೆ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಹುದ್ದೆಗೆ ಹೇಗೆ ನಾ ಒಲ್ಲೆ, ನಾ ಒಲ್ಲೆ ಎನ್ನುತ್ತಿದ್ದಾರೋ ಕರ್ನಾಟಕ ಬಿಜೆಪಿ ಸ್ಥಿತಿಯೂ ಹಾಗೇ ಇದೆ. ಏಕೆಂದರೆ, ಸರಕಾರದಲ್ಲಿ ಯಡಿಯೂರಪ್ಪನವರೇ ಸಿಎಂ ಆದರೂ ಪಕ್ಷದ ವಿಚಾರಕ್ಕೆ ಬಂದಾಗ ರಾಜ್ಯಾಧ್ಯಕ್ಷರಿಗೆ ದೊಡ್ಡ ಜವಾಬ್ದಾರಿ ಹಾಗೂ ಪಕ್ಷದ ಮೇಲೆ, ಶಾಸಕರ ಮೇಲೆ ಹಿಡಿತ ಇರಬೇಕಾಗುತ್ತದೆ.
ಕೇಂದ್ರದಲ್ಲಿ ಅಂಥ ಬಲಿಷ್ಠ ಹೈಕಮಾಂಡ್, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇರುವಾಗ ಮತ್ತೊಂದು ಪವರ್ ಸೆಂಟರ್ ಅನ್ನಿಸಿಕೊಳ್ಳುವ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೂಲಕ ಅದು ಹೇಗೆ ಶಾಸಕರು ಹಾಗೂ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ?
ಹಾಗಂತ ಆ ಹುದ್ದೆಗೆ ಒಬ್ಬರನ್ನು ಕೂರಿಸಲಿಕ್ಕೂ ಬೇಕು, ಅದರಿಂದ ಪಕ್ಷದಲ್ಲಿ ಆಂತರಿಕ ತಿಕ್ಕಾಟಕ್ಕೂ ಕಾರಣ ಆಗಬಾರದು. ಅದೇ ವೇಳೆ ಕರಾವಳಿ ಭಾಗದಲ್ಲಿ ಪಕ್ಷದ ಪರವಾಗಿ ಒಂದು ಸಂದೇಶ ರವಾನಿಸಬೇಕು ಎಂಬ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದು ಈ ಕ್ಷಣದ ಮಾಹಿತಿ.