ರಾಜೀನಾಮೆ ನಂತರ ಮೊದಲ ಸಂದರ್ಶನ: ಆತಂಕ ಹಂಚಿಕೊಂಡ ಸೆಂಥಿಲ್
ಬೆಂಗಳೂರು, ಸೆಪ್ಟೆಂಬರ್ 9: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಖ್ಯವಾಗಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಸರ್ಕಾರದ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಅವರ ಈ ದಿಢೀರ್ ನಿರ್ಧಾರದ ಹಿಂದೆ ಅನೇಕ ಕಾರಣಗಳಿವೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ರಾಜ್ಯದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇತ್ತೀಚೆಗೆ ಕೇರಳದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಜಮ್ಮು ಕಾಶ್ಮೀರದ ವಿಚಾರದಲ್ಲಿನ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಈಗ ಸೆಂಥಿಲ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಈ ರೀತಿ ದಕ್ಷ ಅಧಿಕಾರಿಗಳು ಒಬ್ಬೊಬ್ಬರಾಗಿ ಸರ್ಕಾರದ ವಿರುದ್ಧ ಬೇಸೆತ್ತು ಸೇವೆಯಿಂದ ನಿರ್ಗಮಿಸುತ್ತಿರುವುದು ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
"ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದ ಸಸಿಕಾಂತ್ ಸೆಂಥಿಲ್
2009 ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಎಸ್ ಸಸಿಕಾಂತ್ ಸೆಂಥಿಲ್ ಅವರು ತಮ್ಮ ರಾಜೀನಾಮೆಯ ಹಿಂದಿನ ಕಾರಣಗಳು ಹಾಗೂ ಕೇಂದ್ರದ ನೀತಿಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆಗೆ ಅವರು ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.
ರಾಜಕೀಯ ಬೆಳವಣಿಗೆಗಳು ಕಾರಣ
'ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳು ನಾನು ಸೇವೆಯಿಂದ ಹೊರಹೋಗುವಂತೆ ಮಾಡಿದೆ ಎಂದು ನನ್ನ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಇದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ದೇಶದಲ್ಲಿನ ಒಟ್ಟಾರೆ ರಾಜಕೀಯ ಚಟುವಟಿಕೆಗಳಿಂದ ಹಿಂಸೆ ಅನ್ನಿಸಿದೆ. ಇದು ತುತ್ತತುದಿಗೆ ತಲುಪಿದೆ ಎಂದು ನನಗೆ ಅನಿಸಿದ್ದು, 370ನೇ ವಿಧಿ ರದ್ದತಿ ವಿಚಾರ ಬಂದಾಗ ಎಂದು ಸೆಂಥಿಲ್ ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ.
ಇದು ಪ್ಯಾಸಿಸ್ಟ್ ಆಕ್ರಮಣ
'ಈ ರೀತಿಯ ತಳಮಳ ದೀರ್ಘಕಾಲದಿಂದ ನನ್ನನ್ನು ಕಾಡುತ್ತಿತ್ತು. ಏಕೆಂದರೆ, ಈ ಸೇವೆಗೆ ಬರುವಾಗ ತಳಮಟ್ಟದಲ್ಲಿ ನನಗೆ ಕೆಲವು ಅನುಭವಗಳಾಗಿದ್ದವು. ನಾನು ಯಾವಾಗಲೂ ರಾಜಕೀಯ ಅಜೆಂಡಾಗಳನ್ನು ಮತ್ತು ನಡೆಗಳನ್ನು ಗಮನಿಸುತ್ತಿರುತ್ತೇನೆ. ನನ್ನ ಅಭಿಪ್ರಾಯದ ಪ್ರಕಾರ ಇದು ಸ್ಪಷ್ಟವಾದ ಫ್ಯಾಸಿಸ್ಟ್ ದಾಳಿ. ಜನರು ಈಗ ತೀವ್ರ ರಾಷ್ಟ್ರೀಯವಾದಿಗಳಾಗಿದ್ದಾರೆ. ಜನರು ಬೌದ್ಧಿಕ ಚಿಂತನೆಗಳಿಗೆ ಉತ್ತೇಜನ ನೀಡಲಾರರು. ಆಡಳಿತವರ್ಗದಲ್ಲಿ ಕುಳಿತು ನಾನು ಈ ರೀತಿಯ ಸಂಗತಿಗಳನ್ನು ಅವಲೋಕಿಸಲು ಸಾಧ್ಯವಿಲ್ಲ. ಈ ಬಗ್ಗೆ ನಾನು ಏನಾದರೂ ಮಾಡುವುದಾದರೆ ಸೇವೆಯಿಂದ ನಾನು ಹೊರಗೆ ಬರಬೇಕು. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಿದೆ' ಎಂದು ವಿವರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ನನ್ನ ಚಿಂತನೆಗಳಿಗೆ ಹೊಂದಿಕೆಯಾಗುತ್ತಿಲ್ಲ
'ಈ ಸರ್ಕಾರ ತಾನು ಏನು ಮಾಡಬೇಕೆಂದುಕೊಂಡಿತ್ತೋ ಅದನ್ನು ಮಾಡುತ್ತಿದೆ. ತಾನು ಅಂದುಕೊಂಡದ್ದೇ ಸರಿ ಎಂದುಕೊಳ್ಳುತ್ತಿದೆ. ನನ್ನ ಸಮಸ್ಯೆಯೆಂದರೆ, ಇದು ಈ ದೇಶದಲ್ಲಿ ನಿರ್ಮಿಸಿರುವ ಚಿಂತನೆಗಳ ವಿಚಾರಗಳು ಹಾಗೂ ನನ್ನ ಅರಿವುಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ನನ್ನ ವೈಯಕ್ತಿಕ ಆದರ್ಶಗಳು, ನಾನು ಸಂವಿಧಾನವನ್ನು ಅರ್ಥ ಮಾಡಿಕೊಂಡ ಬಗೆ, ಇಂದು ಘಟಿಸುತ್ತಿರುವ ವಿಚಾರಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ. ಇವುಗಳನ್ನು ಮಾಡುವುದು ಕಾನೂನುಬದ್ಧವಾಗಿರಬಹುದು. ಆದರೆ ಸಂವಿಧಾನದಲ್ಲಿ ಉದ್ದೇಶಗಳನ್ನು ಎತ್ತಿಹಿಡಿಯುವ ಪ್ರಸ್ತಾವನೆಯಿದೆ ಮತ್ತು ಸಂವಿಧಾನದ ಮೂಲತತ್ವಗಳಿವೆ. ನಾನು ಈ ದೃಷ್ಟಿಕೋನದ ಮೂಲಕ ಅದನ್ನು ನೋಡಿದಾಗ, ನನ್ನ ಆಲೋಚನೆಗಳೊಂದಿಗೆ ಈಗ ಘಟಿಸುತ್ತಿರುವ ವಿಚಾರಗಳು ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ಅರಿವಾಗುತ್ತದೆ. ಹೀಗಾಗಿ ಇದು ವೈಯಕ್ತಿಕ ಕಾರಣವಾಗುತ್ತದೆ. ಈಗ ನನ್ನ ಆಲೋಚನೆಗಳು ಸರಿಯಾಗಿದ್ದರೆ ಅದರ ಬಗ್ಗೆ ಚರ್ಚೆಯಾಗಬೇಕಿರುತ್ತದೆ. ನನ್ನ ಆಲೋಚನೆಗಳು ಹೊಂದಾಣಿಕೆಯಾಗದೆ ಇದ್ದಾಗ ನನ್ನ ಮುಂದೆ ಎರಡು ಆಯ್ಕೆಗಳು ಮಾತ್ರ ಇರುತ್ತವೆ. ಒಂದೋ ನನ್ನ ಅಲೋಚನೆಗಳನ್ನು ಬದಲಿಸಬೇಕು, ಇಲ್ಲವೇ ಕೆಲಸ ಬದಲಿಸಬೇಕು. ಹೀಗಾಗಿ ನಾನು ಕೆಲಸ ತ್ಯಜಿಸಿದೆ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಆತ್ಮಸಾಕ್ಷಿಗೆ ರಾಜಿಯಾಗುತ್ತಿಲ್ಲ
'ಈ ಸಂದರ್ಭದಲ್ಲಿ ನಾನು ವ್ಯವಸ್ಥೆಯಿಂದ ಹೊರಬರಲೇಬೇಕು ಎಂದು ಬಲವಾಗಿ ಭಾವಿಸಿದ್ದೆ. ಈಗ ನಡೆಯುತ್ತಿರುವ ವಿಚಾರಗಳೊಂದಿಗೆ ನನ್ನ ಆತ್ಮಸಾಕ್ಷಿ ರಾಜಿಯಾಗುತ್ತಿಲ್ಲ. ಅದು ತಪ್ಪೋ ಅಥವಾ ಸರಿಯೋ ಎಂಬುದನ್ನು ನಿರ್ಧರಿಸುವುದು ದೇಶಕ್ಕೆ ಬಿಟ್ಟಿದ್ದು. ಆದರೆ ಏನಾಗುತ್ತಿದೆ ಎಂಬ ವಿಚಾರದಲ್ಲಿ ನಾನು ಸ್ಪಷ್ಟವಾಗಿದ್ದೇನೆ' ಎಂದು ಚುನಾವಣಾ ರಾಜಕೀಯಕ್ಕೆ ಬರುವ ಉದ್ದೇಶದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಎಸ್. ಸಸಿಕಾಂತ್ ಸೆಂಥಿಲ್ ರಾಜೀನಾಮೆ : ಯಾರು, ಏನು ಹೇಳಿದರು?
ನಾಶಪಡಿಸುವುದೇ ಅವರ ಅಜೆಂಡಾ
ಮುಂದೇನು? 'ನಾನು ವಿವಿಧ ಗುಂಪುಗಳು ಮತ್ತು ಜನರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಈ ಫ್ಯಾಸಿಸ್ಟ್ ಚೌಕಟ್ಟಿನಲ್ಲಿ ಯಾವುದೇ ಬೌದ್ಧಿಕ ಚಿಂತನೆಗಳು ಅಥವಾ ಸಂಸ್ಥೆಗಳನ್ನು ನಾಶಪಡಿಸುವುದೇ ಮುಖ್ಯ ಅಜೆಂಡಾ ಎನ್ನುವುದು ನನಗೆ ಖಚಿತವಾಗಿದೆ. ಇತಿಹಾಸ ಇದನ್ನು ಹಲವು ಬಾರಿ ಖಚಿತಪಡಿಸಿದೆ. ಇದೇನೂ ಹೊಸತಲ್ಲ' ಎಂದಿದ್ದಾರೆ.
'ನಾನು ನಾಯಕತ್ವದ ಬಗ್ಗೆ ಈಗ ಒಲವು ಹೊಂದಿಲ್ಲ. ಈಗ ನನ್ನ ಅರಿವುಗಳನ್ನು ಮುಂದಿಡಲು ಮತ್ತು ಏನಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದೇನೆ ಅಷ್ಟೇ. ಹೆಚ್ಚಿನ ಜನರಿಗೆ ಅದನ್ನು ಗ್ರಹಿಸುವುದು ಕಷ್ಟ ಎನ್ನುವುದು ನನಗೆ ತಿಳಿದಿದೆ. ಅವರು ಅದನ್ನು ರಾಷ್ಟ್ರೀಯವಾದದ ದೃಷ್ಟಿಕೋನ ಎಂದು ಭಾವಿಸುತ್ತಾರೆ. ನೀವು ಚುನಾವಣಾ ರಾಜಕಾರಣದ ಕುರಿತು ಪ್ರಶ್ನಿಸುತ್ತೀರಿ ಎಂದಾದರೆ, ನಾನು ಇಲ್ಲ ಎಂದೇ ಹೇಳುತ್ತೇನೆ' ಎಂದು ಶಾ ಫಸಲ್ ಅವರಂತೆ ರಾಜಕೀಯ ಪಕ್ಷ ಸ್ಥಾಪಿಸುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಜೀನಾಮೆಗೆ ಇದೊಂದಿಗೆ ಕಾರಣವಲ್ಲ
'ಇದು ಕೇವಲ 370ನೇ ವಿಧಿ ಕುರಿತಾಗಿರುವುದಲ್ಲ. ನಾನು ಈ ವಿಚಾರವನ್ನು ಕ್ಷುಲ್ಲಕಗೊಳಿಸಲು ಬಯಸುವುದಿಲ್ಲ. ದೇಶದ ಆಂತರಿಕ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ನೋಡಲು ಭಯಾನಕವಾಗಿದೆ. ಜಿಲ್ಲಾಡಳಿತದಲ್ಲಿ ನಮಗೆ ಅನೇಕ ಅಧಿಕಾರಗಳಿರುತ್ತವೆ. ಕೆಲವು ವಿಚಾರಗಳನ್ನು ನಿಯಂತ್ರಿಸಲು ಸೆಕ್ಷನ್ 144ಅನ್ನು ನಾವು ಬಳಸಿದರೆ, ಮುಂದಿನ 12 ಗಂಟೆಗಳವರೆಗೆ ಅದನ್ನು ಉಪಯೋಗಿಸಿ ಹೇಗೆ ಜನರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಬಹುದು ಎಂಬುದರ ಬಗ್ಗೆ ನನಗೆ ತೀವ್ರ ಆತಂಕವಾಗುತ್ತದೆ. ಆ ಪರಿಸ್ಥಿತಿಯಲ್ಲಿ ನಾವಿದ್ದರೆ ಏನಾಗಬಹುದು ಊಹಿಸಿ. ಈ ರೀತಿ ವ್ಯವಸ್ಥೆಯಲ್ಲಿ ಸಂಸ್ಥೆಗಳು ದುರ್ಬಲವಾಗುತ್ತವೆ ಮತ್ತು ಮಾತನಾಡುವ ಜನರು ಬೆದರಿಕೆಗೆ ಒಳಪಡುತ್ತಾರೆ. ನಾನು ಇದನ್ನು ಕೇವಲ ಕಾಶ್ಮೀರಕ್ಕೆ ಅನ್ವಯಿಸಿ ಹೇಳುತ್ತಿಲ್ಲ.
ಎರಡನೆಯದು, ಸೇವೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ. ನನ್ನನ್ನು ರಾಜನಂತೆಯೇ ನೋಡಿಕೊಳ್ಳಲಾಗುತ್ತಿತ್ತು ಎಂದು ನಾನು ಈಗಾಗಲೇ ಹೇಳಿದ್ದೇನೆ. ನಾನು ಮೂರು ಜಿಲ್ಲೆಗಳಲ್ಲಿ ಮೂರು ಸರ್ಕಾರಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ನಾನು ಇಷ್ಟಪಡದ್ದನ್ನು ಮಾಡುವಂತೆ ಸರ್ಕಾರ ನನ್ನ ಮೇಲೆ ಒತ್ತಡ ಹೇರಿದೆ ಎಂದು ಯಾವತ್ತೂ ಅನಿಸಿರಲಿಲ್ಲ. ನಾನು ಸಂಭಾವನೆಯಂತಹ ವಿಚಾರಗಳಿಂದಾಗಿ ಸೇವೆ ತ್ಯಜಿಸಿಲ್ಲ. ವಾಸ್ತವವಾಗಿ ನಮಗೆ ಅರ್ಹವಾಗಿರುವುದಕ್ಕಿಂತಲೂ ಹೆಚ್ಚಿನ ವೇತನ ನೀಡಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ' ಎಂದು ಸೆಂಥಿಲ್ ಹೇಳಿದ್ದಾರೆ.