ದೇವಾಲಯ ನೆಲಸಮಗೊಳ್ಳುವ ಪಟ್ಟಿಯಲ್ಲಿ ಈ ಜಿಲ್ಲೆ ನಂಬರ್ ಒನ್
ಬೆಂಗಳೂರು, ಸೆ 15: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರಕಾರ ಧಾರ್ಮಿಕ ಕೇಂದ್ರಗಳ ನೆಲಸಮ ಮಾಡುವ ಕೆಲಸಕ್ಕೆ ಮುಂದಾಗಿದೆ. ಆದರೆ, ಸಮಾಜದ ಎಲ್ಲಾ ವರ್ಗಗಳ ತೀವ್ರ ವಿರೋಧದಿಂದ ಇದಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಬರೀ ದೇವಾಲಯಗಳ ಮೇಲೆ ಬೊಮ್ಮಾಯಿ ಸರಕಾರಕ್ಕೆ ಕಣ್ಣು ಎನ್ನುವ ಹಣೆಪಟ್ಟಿ ಬಂದಿದೆ.
ಸ್ವಪಕ್ಷೀಯರಿಂದಲೇ ಭಾರೀ ಒತ್ತಡ ಬರುತ್ತಿದ್ದಂತೆ, ಮುಂದಿನ ಆದೇಶದ ವರೆಗೆ ಈ ವಿಚಾರವನ್ನು ಮುಟ್ಟಬೇಡಿ ಎನ್ನುವ ಸ್ಪಷ್ಟ ಆದೇಶವನ್ನು ಸರಕಾರ, ಮೈಸೂರು ಜಿಲ್ಲಾಡಳಿತಕ್ಕೆ ನೀಡಿರುವುದು ಒಂದು ಕಡೆ. ಇನ್ನೊಂದು ಕಡೆ ಕಂದಾಯ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಖುದ್ದು ಬೊಮ್ಮಾಯಿಯವರೇ ಸಭೆ ನಡೆಸಲಿದ್ದಾರೆ.
ಹಿಂದೂ ದೇವಾಲಯಗಳ ಧ್ವಂಸದ ಹಿಂದೆ ಬಿಜೆಪಿಯ ಹಿಡನ್ ಅಜೆಂಡಾ?
ಮೈಸೂರು ಜಿಲ್ಲೆ ನಂಜನಗೂಡಿನ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ರಾತ್ರೋರಾತ್ರಿ ಧ್ವಂಸ ಮಾಡಿತ್ತು. ಶತಮಾನಗಳ ಇತಿಹಾಸವಿರುವ ಈ ದೇವಾಲಯ ನೆಲಸಮ ಮಾಡಿದ್ದಕ್ಕೆ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕರ್ನಾಟಕದಲ್ಲಿ ಸುಮಾರು 1,270 ವಿವಿಧ ಕೋಮಿನ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡುವುದಾಗಿ, ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಪುರಾತನ ದೇವಾಲಯಗಳಿಗೆ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯದ್ದೇ ಸಿಂಹಪಾಲು. ಜಿಲ್ಲಾವಾರು ನೆಲಸಮಗೊಳ್ಳುವ ಧಾರ್ಮಿಕ ಕೇಂದ್ರಗಳ ಸಂಖ್ಯೆ ಈ ರೀತಿಯಿದೆ:
ಅನಧಿಕೃತ ಧಾರ್ಮಿಕ ಕಟ್ಟಡ ತೆರವು; ಮಂಗಳೂರಿನ 800 ವರ್ಷ ಇತಿಹಾಸದ ದೈವಸ್ಥಾನಕ್ಕೆ ಕುತ್ತು!
ಅರ್ಚಕರು ಕಣ್ಣೀರು ಹಾಕುತ್ತಿರುವ ಸಾಮಾಜಿಕ ತಾಣದಲ್ಲಿ ವೈರಲ್
ಮೈಸೂರಿನ ಐತಿಹಾಸಿಕ ಉಚ್ಚಗಣಿಯ ಮಹದೇವಮ್ಮ ದೇಗುಲ ತೆರವು ಕಾರ್ಯಚರಣೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಇದೇ ರೀತಿ, ಜಿಲ್ಲೆಯ ಹಲವು ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವುದಾಗಿ ಮೈಸೂರು ಜಿಲ್ಲಾಡಳಿತ ನೊಟೀಸ್ ನೀಡಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ನಡುವೆ, ಉಚ್ಚಗಣಿಯ ಮಹದೇವಮ್ಮ ದೇಗುಲ ನೆಲಸಮದ ನಂತರ, ಅಲ್ಲಿನ ಅರ್ಚಕರು ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಮೈಸೂರಿನ 93 ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್
ಸರಕಾರವೇ ಚಿವುಟಿ ಈಗ ಸಮಾಧಾನ ಮಾಡುವ ಕೆಲಸವನ್ನು ಮಾಡುತ್ತಿದೆ ಎನ್ನುವ ಆರೋಪ
ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 1,270 ವಿವಿಧ ಧಾರ್ಮಿಕ ಕೇಂದ್ರಗಳನ್ನು ಅನಧಿಕೃತ ಎಂದು ಕಂದಾಯ ಇಲಾಖೆ ಪಟ್ಟಿ ಮಾಡಿದೆ. ಗೃಹ ಇಲಾಖೆಯಿಂದ ಕಂದಾಯ ಇಲಾಖೆಗೆ ತೆರವುಗೊಳಿಸುವ ಸಂಬಂಧ ತೀವ್ರ ಒತ್ತಡ ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಒಂದು ರೀತಿಯಲ್ಲಿ ಸರಕಾರವೇ ಚಿವುಟಿ ಈಗ ಸಮಾಧಾನ ಮಾಡುವ ಕೆಲಸವನ್ನು ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಧಾರ್ಮಿಕ ಕೇಂದ್ರಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ
ನೆಲಸಮಗೊಳಿಸಲು ಗುರುತಿಸಲಾಗಿರುವ ಧಾರ್ಮಿಕ ಕೇಂದ್ರಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು 815 ಸಂಖ್ಯೆಯನ್ನು ಹೊಂದಿದೆ. ಇದಾದ ನಂತರ, ಧಾರವಾಡ ಜಿಲ್ಲೆಯ ಸುಮಾರು 220, ಬೆಂಗಳೂರು ನಗರ ವ್ಯಾಪ್ತಿಯ 40, ಬೆಳಗಾವಿಯ 150, ಕಲಬುರಗಿ ಜಿಲ್ಲೆಯ 135, ಬಳ್ಳಾರಿಯ ಸುಮಾರು ಮೂವತ್ತು, ಚಾಮರಾಜನಗರದ ಹದಿನೆಂಟು, ಚಿಕ್ಕಮಗಳೂರಿನ ಮೂರು ದೇವಾಲಯಗಳು ಈ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಗೃಹ ಮತ್ತು ಕಂದಾಯ ಇಲಾಖೆಯ ಒತ್ತಡದಿಂದಾಗಿ, ಜಿಲ್ಲಾಡಳಿತ ಈ ಕೆಲಸಕ್ಕೆ ಮುಂದಾಗಿದೆ
ಇದಲ್ಲದೇ ರಾಮನಗರ ಜಿಲ್ಲೆಯ ಮೂರು, ರಾಯಚೂರು ಜಿಲ್ಲೆಯ ಸುಮಾರು ಐವತ್ತು, ದಾವಣಗೆರೆಯ ಹದಿಮೂರು, ಕೊಪ್ಪಳದ ಹದಿನೇಳು, ಗದಗ ಜಿಲ್ಲೆಯ ಹದಿನಾಲ್ಕು ಪ್ರಾರ್ಥನಾ ಮಂದಿರಗಳು ಸೇರಿವೆ. ಇದಲ್ಲದೇ, ಉಡುಪಿ, ಯಾದಗಿರಿ, ತುಮಕೂರು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರದ ಧಾರ್ಮಿಕ ಕೇಂದ್ರಗಳೂ ಇವೆ. ಗೃಹ ಮತ್ತು ಕಂದಾಯ ಇಲಾಖೆಯ ಒತ್ತಡದಿಂದಾಗಿ, ಜಿಲ್ಲಾಡಳಿತ ಈ ಕೆಲಸಕ್ಕೆ ಮುಂದಾಗಿರುವುದು ಸ್ಪಷ್ಟ.
Recommended Video