ಡಿಕೆ ರವಿ ಸಾವು: ಸಿಬಿಐಗೆ ಉತ್ತರ ನೀಡಿದ ಎಂಎನ್ ರೆಡ್ಡಿ
ನವದೆಹಲಿ, ಏ. 27: ಡಿಕೆ ರವಿ ಸಾವಿನ ತನಿಖೆ ವಹಿಸಿಕೊಂಡಿರುವ ಸಿಬಿಐ ತಂಡ ಸೋಮವಾರ ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎನ್. ರೆಡ್ಡಿ ಅವರನ್ನು ಪ್ರಶ್ನೆ ಮಾಡಿ ಮಾಹಿತಿ ಕಲೆ ಹಾಕಿದೆ.
ಈಗಾಗಲೇ ವಿಚಾರಣೆ ಆರಂಭಿಸಿರುವ ಸಿಬಿಐ ತಂಡ ಶವಪರೀಕ್ಷೆ ವರದಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹ ಮಾಡಿದೆ. ಸಿಬಿಐ ಅಧಿಕಾರಿಗಳು ಇಡೀ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ವೈಯಕ್ತಿಕ ಕಾರಣದಿಂದ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಂಡ ಸಮಗ್ರ ಮಾಹಿತಿ ಸಂಗ್ರಹ ಮಾಡುತ್ತಿದೆ.[ಸಿಬಿಐನಿಂದ ಅಧಿಕೃತವಾಗಿ ವಿಚಾರಣೆ ಆರಂಭ]
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಿಬಿಐ ಅಧಿಕಾರಿಗಳು ಎಂಎನ್ ರೆಡ್ಡಿ ಅವರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಡಿಕೆ ರವಿ ಸಾವು ಮತ್ತು ಸಾವಿನ ನಂತರ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳು, ತನಿಖೆ ಸಾಗಿದ ರೀತಿ? ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ.[ಡಿಕೆ ರವಿ ಸಾವಿನ ನಿಗೂಢತೆ: ಸಿದ್ದುಗೆ ಸತ್ಯ ಗೊತ್ತಾಗಿದ್ಯಾ?]
ಅಲ್ಲದೇ ತನಿಖೆಗೆ ಸಂಬಂಧಿಸಿ ಸಕಲ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ವಿಚಾರಣೆ ನಡೆಸಿದರೂ ಆಶ್ಚರ್ಯವಿಲ್ಲ.
ಮಾರ್ಚ್ 16ರಂದು ಡಿಕೆ ರವಿ ಶವ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ದೊರೆತ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಂಎನ್ ರೆಡ್ಡಿ ಇದು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ರೆಡ್ಡಿ ಮೇಲೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದರು.[ಡಿಕೆ ರವಿ ಸಾವು : ಎಂ.ಎನ್.ರೆಡ್ಡಿ ವಿರುದ್ಧ ದೂರು]