ಮಾನವ ಹಕ್ಕು ಆಯೋಗಕ್ಕೆ ಕೊನೆಗೂ ಸಾರಥಿ ಸಿಕ್ಕರು!
ಬೆಂಗಳೂರು, ಜನವರಿ 02 : ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರನ್ನು ನೇಮಕ ಮಾಡಲಾಗಿದೆ. 5 ವರ್ಷಗಳಿಂದ ಅಧ್ಯಕ್ಷರ ಹುದ್ದೆ ಖಾಲಿ ಇತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಡಿ.ಎಚ್.ವಘೇಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ 'ಕನ್ನಡಿಗ' ದತ್ತು ಅಧ್ಯಕ್ಷ
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, 'ಡಿ.ಎಚ್.ವಘೇಲಾ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ' ಎಂದರು.
5 ವರ್ಷಗಳಿಂದ ಹುದ್ದೆ ಖಾಲಿ : 2012ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಎಸ್.ಆರ್.ನಾಯಕ್ ಅವರ ಅವಧಿ ಮುಕ್ತಾಯಗೊಂಡ ಬಳಿಕ ಅಧ್ಯಕ್ಷರ ನೇಮಕವಾಗಿರಲಿಲ್ಲ.
ಪೊಲೀಸ್ ತನಿಖಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮ
2013ರಲ್ಲಿ ತಮಿಳುನಾಡು ಮೂಲದ ನ್ಯಾ.ಡಿ.ಮುರುಗೇಶನ್ ಅವರನ್ನು ನೇಮಿಸುವ ಪ್ರಯತ್ನ ನಡೆದಿತ್ತು. ಆದರೆ, ಭಾಷಾ ಸಮಸ್ಯೆಯ ಕಾರಣ ಮರುಗೇಶನ್ ಅವರೇ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರು.
ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಮೀರಾ ಸಕ್ಸೇನಾ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ನವೆಂಬರ್ 20ರಂದು ಅವರ ಅವಧಿಯೂ ಪೂರ್ಣಗೊಂಡ ಮೇಲೆ ಆಯೋಗ ನಿಷ್ಕ್ರಿಯವಾಗಿತ್ತು.
ನಿಗಮ-ಮಂಡಳಿಗಳ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಆಸಕ್ತಿ ತೋರುವ ಸರ್ಕಾರ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಲು ಮಾತ್ರ ವಿಳಂಬ ನೀತಿ ಅನುಸರಿಸುತ್ತವೆ.
ಅಧ್ಯಕ್ಷರು ಮತ್ತು ಸದಸ್ಯರು ಇಲ್ಲದಿದ್ದರೆ ರಿಜಿಸ್ಟಾರ್ ದೂರುಗಳನ್ನು ಸ್ವೀಕರಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಆದರೆ, ಅವರಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡುವ ಅಧಿಕಾರವಿಲ್ಲ.
ಆದ್ದರಿಂದ, ಅಧ್ಯಕ್ಷರ ನೇಮಕ ವಾಗುವ ತನಕ ಜನರು ಕೊಟ್ಟ ದೂರುಗಳು ಕಡತದಲ್ಲಿ ಭದ್ರವಾಗಿರುತ್ತಿದ್ದವು. ಈಗ ಅಧ್ಯಕ್ಷರು ನೇಮಕವಾದ ಬಳಿಕ ಆಯೋಗ ಸಕ್ರಿಯವಾಗಲಿದೆಯೇ? ಕಾದು ನೋಡಬೇಕು.
ಡಿ.ಎಚ್.ವಘೇಲಾ : ಗುಜರಾತ್ನ ರಾಜ್ಕೋಟ್ ಮೂಲದ ಡಿ.ಎಚ್.ವಘೇಲಾ ಅವರು 2013ರಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಕಾರ್ಮಿಕರ ಹಿತಾಸಕ್ತಿ ಬಗ್ಗೆ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.