ಅಬ್ಬರಿಸಲಿದೆ 'ವಾಯು' ಚಂಡಮಾರುತ, ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಜೂನ್ 11: ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಎದ್ದಿರುವ 'ವಾಯು' ಚಂಡಮಾರುತದಿಂದ ಮಂಗಳವಾರ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ವರದಿ ತಿಳಿಸಿದೆ.
ಜೊತೆಗೆ ಗುಜರಾತ್, ಗೋವಾ ಮತ್ತು ಮುಂಬೈಯಲ್ಲೂ ಮಳೆಯಾಗಲಿದ್ದು, ಅರಬ್ಬಿ ಸಮುದ್ರದ ಬಳಿ ಮೀನುಗಾರಿಕೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಮುಂಗಾರಿಗೂ ಮುನ್ನ ಅಬ್ಬರಿಸಲಿದೆ ಸೈಕ್ಲೋನ್ 'ವಾಯು'
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉತ್ತರ ಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇತರ ಜಿಲ್ಲೆಗಳಲ್ಲೂ ಕೊಂಚ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್ 13 ರವರೆಗೆ ಮೀನುಗಾರಿಗೆ ಸಮುದ್ರದ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
'ವಾಯು' ಚಂಡಮಾರುತ ವಾಯುವ್ಯ ಭಾಗದತ್ತ ಮುಖಮಾಡಿದ್ದು, ಗುಜರಾತಿನಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ತೀರವಾದ ಮುಂಬೈ, ಗೋವಾ, ಕೇರಳದಲ್ಲೂ ಮಳೆಯಾಗಲಿದ್ದು, ಕರಾವಳಿ ತೀರದ ಜನರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.